ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.15
ನಗರದ ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್ ಗೆಳೆಯರ ಬಳಗದ ವತಿಯಿಂದ ಪರಿಸರ ಸ್ನೇಹಿ ಅಲಂಕಾರದಲ್ಲಿ 9ನೇ ವರ್ಷದ ಭವ್ಯ ಗಣೇಶೋತ್ಸವವು ಸೆ.14 ರಂದು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿತ್ತು.
ಬೆಳಿಗ್ಗೆ 9 ಗಂಟೆಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಸಂಜೆ 5.30 ರಿಂದ ಆರಂಭವಾದ ರಾಜಬೀದಿ ಉತ್ಸವವೇ ಈ ಬಾರಿಯ ಹೈಲೈಟ್. ಭವ್ಯ ಮಹಾ ಮೆರವಣಿಗೆಗೆ ವಿಶೇಷ ಆಕರ್ಷಣೆಯಾಗಿ ಎ.ಪಿ.ಎಂ.ಸಿ ಡೊಳ್ಳು ಕಲಾತಂಡ, ಕುಂದಾಪುರದ ಚಂಡೆ ಮೇಳ ಹಾಗೂ ಸ್ಥಳೀಯ ಭಜನಾ ತಂಡದ ಮಂಗಳವಾದ್ಯಗಳು ಮೆರವಣಿಗೆಗೆ ಕಳೆ ತುಂಬಿದವು.
ಗಮನಿಸಿ: ರೈತರಿಗೆ 15 ದಿನಗಳ ಕಾಲ ನೀರು ಹರಿಸದಿದ್ದರೆ ಪಾದಯಾತ್ರೆ:ಕೆ.ಟಿ.ಗಂಗಾಧರ್
ಚಂಡೆಯ ಅಬ್ಬರ, ಡೊಳ್ಳಿನ ಸದ್ದು, ಭಜನೆಯ ತಾಳಕ್ಕೆ ಭಕ್ತರು ಹುಚ್ಚೆದ್ದು ಕುಣಿದರು. ಚಂದನ ಪಾರ್ಕ್ನಿಂದ ಹೊರಟ ಮೆರವಣಿಗೆ ಸುಂದರ, ಮನಮೋಹಕ ಕ್ಷಣಗಳಿಗೆ ಸಾಕ್ಷಿಯಾಯಿತು. “ಗಣಪತಿ ಬಪ್ಪಾ ಮೋರಯಾ” ಜಯ ಘೋಷದೊಂದಿಗೆ ಇಡೀ ಬಡಾವಣೆಯೇ ಭಕ್ತಿ ಸಾಗರದಲ್ಲಿ ತೇಲಿತು.

ರಾಜಬೀದಿ ಉತ್ಸವವು ಚಂದನ ಆರೋಗ್ಯ ಪಾರ್ಕ್ ನಿಂದ ಹೊರಟು, ವೃದ್ಧಾಶ್ರಮದ ಹತ್ತಿರ ಇರುವ ಗಣಪತಿ ದೇವಸ್ಥಾನದ ಮೂಲಕ, ಎಸ್. ಬಂಗಾರಪ್ಪ ರಸ್ತೆ ಮಾರ್ಗವಾಗಿ ಡಿ.ವಿ.ಜಿ. ಪಾರ್ಕ್ ನಲ್ಲಿ ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನವಾಯಿತು.
ಬೆಳಿಗ್ಗೆ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ, ಮಧ್ಯಾಹ್ನ ಪ್ರಸಾದ ಮತ್ತು ರಾತ್ರಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಂದನ ಆರೋಗ್ಯ ಪಾರ್ಕ್ ಗೆಳೆಯರ ಬಳಗದ ಪದಾಧಿಕಾರಿಗಳು ಯಶಸ್ವಿಯಾಗಿ ನೆರವೇರಿಸಿದರು. ರಾತ್ರಿಯ ಊಟದ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಬಾರಿಯ ಗಣಪತಿ ಮೆರವಣಿಗೆ ಸ್ಥಳೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಬಡಾವಣೆಯ ಜನರು ಮೆರವಣಿಗೆಯ ಕಣ್ತುಂಬಿಕೊಂಡರು. ಗಣಪತಿಗೆ ಹಣ್ಣು ಕಾಯಿ ಸೇವೆ ಮಾಡಿಸಿ ಪುನೀತರಾದರು. ಮುಂದಿನ ವರ್ಷ ಇನ್ನೂ ಚೆಂದವಾಗಿ ಆಚರಿಸಲಾಗುವುದು ಎಂದು ಪಾರ್ಕ್ ನ ಆಡಳಿತ ಮಂಡಳಿ ತಿಳಿಸಿದೆ.
