ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.17
ಡಾ. ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಸೆ.19 ರಂದು ನಗರದ ಎನ್.ಇ.ಎಸ್ ಮೈದಾನದಲ್ಲಿ ಆಯೋಜಿಸಿರುವ “ಮಲೆನಾಡು ಮೆಗಾ ಜಾಬಥಾನ್-2026” ಬೃಹತ್ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ ನಡೆದಿದ್ದು, ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಬೆಂಬಲ ಸಿಕ್ಕಿದೆ ಎಂದು ಫೌಂಡೇಶನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ತಿಳಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೌಂಡೇಶನ್ ತಂಡದ ಪ್ರಯತ್ನದ ಫಲವಾಗಿ ಮೇಳಕ್ಕೆ 166 ಕಂಪನಿಗಳು ಬರುತ್ತಿವೆ. ಇದರಲ್ಲಿ ಶಿವಮೊಗ್ಗದ್ದೇ 38 ಕಂಪನಿಗಳಿವೆ. ಒಟ್ಟು 10 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳಿದ್ದು, ಈಗಾಗಲೇ 3430 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆಯಾ ಕಂಪನಿಗಳು ತಮ್ಮ ಮಾನದಂಡದAತೆ ನೇಮಕಾತಿ ಮಾಡಿಕೊಳ್ಳಲಿವೆ ಎಂದರು.
ಗಮನಿಸಿ: ಮಲೆನಾಡಿಗೆ ಬಿಜೆಪಿಯವರು ಮಾರಕ: ಬಿ.ಎ.ರಮೇಶ್ ಹೆಗ್ಡೆ
ನಾವು 100 ಕಂಪನಿ, 3 ಸಾವಿರ ಉದ್ಯೋಗ ಎಂದು ನಿರೀಕ್ಷಿಸಿದ್ದೆವು, ಆದರೆ 166 ಕಂಪನಿ, 10 ಸಾವಿರ ಅವಕಾಶ ಸಿಕ್ಕಿದೆ. ಈಗ ಬೇಕಿರುವುದು ಕಂಪನಿ ಬೇಡಿಕೆಗೆ ತಕ್ಕ ಉದ್ಯೋಗಾಕಾಂಕ್ಷಿಗಳು ಎಂದು ಹೇಳಿದರು.
ಸೂಚನೆಗಳು: ಮೇಳದಲ್ಲಿ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ನಗರದ ವಿವಿಧ ಕಾಲೇಜುಗಳಿಗೆ ತಂಡ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮತ್ತು ತರಬೇತಿ ನೀಡಿದೆ. ಉದ್ಯೋಗಾಕಾಂಕ್ಷಿಗಳು ಕಡ್ಡಾಯವಾಗಿ ಡ್ರೆಸ್ ಕೋಡ್ನಲ್ಲಿ, ನೀಟಾಗಿ, ಯೂನಿಫಾರಂನಲ್ಲಿ ಬರಬೇಕು. ವಿದ್ಯಾರ್ಹತೆ ಪ್ರಮಾಣ ಪತ್ರ, ರೆಸ್ಯೂಮ್ನ 10 ಜೆರಾಕ್ಸ್ ಪ್ರತಿಗಳೊಂದಿಗೆ ಬರಬೇಕು. ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಹ ಈ ಮೇಳದಲ್ಲಿ ಭಾಗವಹಿಸಬಹುದಾಗಿದ್ದು, ಉದ್ಯೋಗದ ಪ್ರಮಾಣ ಪತ್ರ ಸಿಕ್ಕವರು ಪದವಿ ಮುಗಿದ ನಂತರ ಕೆಲಸಕ್ಕೆ ಹಾಜರಾಗಬಹುದು ಎಂದರು.
ಆಫರ್ ಲೆಟರ್ ವಿತರಣೆ: ಸೆ.19 ರಂದು ಮಧ್ಯಾಹ್ನ 2 ಗಂಟೆಯವರೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವರಾದ ಮಧು ಬಂಗಾರಪ್ಪ, ಸಂತೋಷ್ ಲಾಡ್ ಅವರು ಆಫರ್ ಲೆಟರ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕುಮಾರ್ ಉಪ್ಪಾರ್, ಪ್ರಕಾಶ್, ರಾಜೇಶ್, ಪತ್ರೇಶ್, ವರುಣ್, ಸಾಯಿರಾಮಣ್ಣ, ತ್ಯಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
