ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.21
ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ಅನ್ನಭಾಗ್ಯವನ್ನು ಜಾರಿಗೆ ತಂದು ಬಡವರ, ಕೂಲಿ ಕಾರ್ಮಿಕ ಹಾಗೂ ಮಧ್ಯಮ ವರ್ಗದವರ ಹಸಿವರನ್ನು ನಿಗಿಸುತ್ತಿದ್ದ ಬೆನ್ನಲ್ಲೆ ಅದೇ ಸರ್ಕಾರ ಆಹಾರ ಇಲಾಖೆಯ ಮೂಲಕ ಕಠಿಣ ಕ್ರಮವನ್ನು ಜಾರಿ ತಂದು ಅವರ ಹಸಿವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲು ಪಡಿತರ ಚೀಟಿಯನ್ನು ಪರಿಶೀಲಿಸಿ ಬಿಪಿಎಲ್ ಕಾರ್ಡ್ ಅನ್ನು ರದ್ದು ಅದನ್ನು ಎಪಿಎಲ್ ಕಾರ್ಡ್ ಗೆ ವರ್ಗಾಹಿಸುವ ಕಾರ್ಯವನ್ನು 2025 ರಿಂದ ರಾಜ್ಯ ಸರ್ಕಾರ ಆರಂಭ ಮಾಡಿದ್ದು, ಆ ಮೂಲಕ ಸೆ.3 2025 ರಿಂದ ಏ.30 2026 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಬಡವರು, ಕೂಲಿ ಕಾರ್ಮಿಕ ಹಾಗೂ ಮಧ್ಯಮ ವರ್ಗದವರ ಒಟ್ಟು 13,612 ಪಡಿತರ ಚೀಟಿಯನ್ನು ಇಲಾಖೆ ರದ್ದು ಮಾಡಿ ಎಪಿಎಲ್ ಕಾರ್ಡ್ಗಳಾಗಿ ಮಾಡಲಾಗಿದೆ.
ಭದ್ರಾವತಿಯಲ್ಲಿ 2,689, ಹೊಸನಗರದಲ್ಲಿ 632, ಸಾಗರದಲ್ಲಿ 1,863, ಶಿಕಾರಿಪುರದಲ್ಲಿ 520, ಶಿವಮೊಗ್ಗ ನಗರದಲ್ಲಿ 5,550, ಸೊರಬದಲ್ಲಿ 895, ತೀರ್ಥಹಳ್ಳಿಯಲ್ಲಿ 1,463 ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ಗೆ ಮಾರ್ಪಾಡು ಮಾಡಲಾಗಿದ್ದು, ಇದರಿಂದ ಅನ್ನಭಾಗ್ಯವನ್ನೆ ನಂಬಿಕೊಂಡಿರುವ ಕುಟುಂಬಗಳಿಗೆ ಅಘಾತವಾಗಿದೆ.
ಸ್ವಯಂ ಘೋಷಿತ ಐಟಿ-ಬಡವರಿಗೆ ಇಕ್ಕಟ್ಟಿನ ಪರಿಸ್ಥಿತಿ:
ಸ್ವಯಂ ಘೋಷಿತವಾಗಿ ಐಟಿ ಯನ್ನು ಫೈಲ್ ಮಾಡಿಕೊಂಡಿರುವ ಪರಿಣಾಮದಿಂದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ತಿಳಿಸಿದ್ದಾರೆ.
ವಾರ್ಷಿಕ ಆದಾಯ 1.20 ಲಕ್ಷ, 7.50 ಎಕರೆ ಜಮೀನು ಹಾಗೂ 1 ಸಾವಿರ ಚದರ ಅಳತೆ ಮನೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತಿದೆ. ಆನ್ಲೈನ್ ಐಟಿ ಫೈಲ್ ಮಾಡಿಸುವ ವೇಳೆ ಮೂಲ ದಾಖಲಾತಿಗಳಾದ ಪಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಮೂಲಕ ಈ ಮಾಹಿತಿಗಳು ಇಲಾಖೆಗಳಿಗೆ ಲಭ್ಯವಾಗುತ್ತಿದ್ದು, ಈ ಆಧಾರ ಮೇಲೆ ಬಿಪಿಎಲ್ ಕಾರ್ಡ್ ಗಳ ಪರಿಶೀಲಿಸಿ ಅದನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಗೆ ವರ್ಗಾಯಿಸಲಾಗುತ್ತಿದೆ.
45 ದಿನ ಕಾಲಾವಕಾಶ:
ಎಪಿಎಲ್ ನಿಂದ ಮತ್ತೇ ಬಿಪಿಎಲ್ ಕಾರ್ಡ್ ಮಾಡಿಸಲು ಕಚೇರಿಗೆ ಅರ್ಜಿ ಸಲ್ಲಿಸಲು 45 ದಿನಗಳ ಕಾಲವಕಾಶವನ್ನು ಸರ್ಕಾರ ನೀಡಿತ್ತು. ಆ ನಿಟ್ಟಿನಲ್ಲಿ ನಗರದಲ್ಲಿ 120 ಕಾರ್ಡ್ಗಳನ್ನು ಬಿಪಿಎಲ್ ಕಾರ್ಡ್ ಗಳಾಗಿ ಮಾಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಪಡಿತರ ಚೀಟಿಯನ್ನು ಪುನರ್ ಪರಿಶೀಲನೆಗೆ ಕೆ.ಚೇತನ್ ಸಚಿವರಿಗೆ ಮನವಿ
ರಾಜ್ಯದಲ್ಲಿ ನಡೆಯುತ್ತಿರುವ ಪಡಿತರ ಚೀಟಿ ರದ್ದಿಗೆ ಸಂಬಂಧಪಟ್ಟಂತೆ ಗುರುವಾರ ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್ ಬೆಂಗಳೂರಿನ ಆಹಾರ ನಿಗಮದ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕೆ.ಎಚ್.ಮುನಿಯಪ್ಪ ರವರನ್ನು ಭೇಟಿ ಮಾಡಿ, ಶಿವಮೊಗ್ಗ ನಗರದಲ್ಲಿ ವಾಸವಾಗಿರುವ ಸುಮಾರು 5000 ಕ್ಕೂ ಅಧಿಕ ಬಡ ಕೂಲಿ ಕಾರ್ಮಿಕರ ಪಡಿತರ ಚೀಟಿಗಳನ್ನು ರದ್ದುಪಡಿಸಿರುವ ಕ್ರಮವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ನಗರದ ಹೊರವಲಯದಲ್ಲಿರುವ ಗೋಪಾಲಗೌಡ ಬಡಾವಣೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅನೌಪಚಾರಿಕ ಸಹಾಯಕ ನಿರ್ದೇಶಕರ ಕಚೇರಿಗೆ ಸಾರ್ವಜನಿಕರು ಭೇಟಿ ನೀಡಲು ಕಷ್ಟಕರವಾಗುತ್ತಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು ಗೌಪ್ಯ ಸ್ಥಿತಿಯಲ್ಲಿದೆ. ಇಲ್ಲಿ ಸಾರ್ವಜನಿಕರಿಗೆ ಬರಲು ಯಾವುದೇ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಕಚೇರಿಯನ್ನು ಶಿವಮೊಗ್ಗ ನಗರದ ವಿನೋಬನಗರದ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಗೊಂಡಿದ್ದು,
ಖಾಲಿಯಾಗಿರುವ ಈ ಕಚೇರಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯನ್ನು ಸ್ಥಳಾಂತರಿಸಿ ಶಿವಮೊಗ್ಗ ನಗರದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಮನವಿಗೆ ಸ್ಪಂದಿಸಿದ ಸಚಿವರು, ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.
