ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.5
ಈಗಾಗಲೇ ಯಶಸ್ವಿಯಾಗಿ ಜಾರಿಯಲ್ಲಿರುವ ‘ಸಕಾಲ’ ಸೇವಾ ವ್ಯವಸ್ಥೆಯನ್ನೇ ಹೊಸ ಹೆಸರಿನಲ್ಲಿ ‘ಪ್ರಜಾಸೇವೆ’ ಎಂದು ಬಿಂಬಿಸಿ ಕಾಂಗ್ರೆಸ್ ಸರ್ಕಾರ “ಓಲ್ಡ್ ವೈನ್ ಇನ್ ನ್ಯೂನ್ ಬಾಟೆಲ್” ಎಂಬಂತೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಆರೋಪಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳು ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಲಕ್ಷಾಂತರ ಹಳೆಯ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಹಳೆಯ ಅರ್ಜಿಗಳಿಗೆ ಪರಿಹಾರ ನೀಡಲು ಸಾಧ್ಯವಾಗದ ಸರ್ಕಾರ, ‘ಪ್ರಜಾಸೇವೆ’ ಹೆಸರಿನಲ್ಲಿ ತಾಲ್ಲೂಕುಗಳಿಗೆ ತೆರಳಿ ಹೊಸ ಅರ್ಜಿಗಳನ್ನು ಸ್ವೀಕರಿಸುವುದು ಕೇವಲ ಪ್ರಚಾರದ ನಾಟಕವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಗಮನಿಸಿ: ಎಐ ಯುಗದಲ್ಲಿ ಮಾನವೀಯತೆ ಗುಣಗಳ ಬೆಳೆಸಲು ಶಿಕ್ಷಕರಿಂದ ಮಾತ್ರ ಸಾಧ್ಯ
ವಿಎ, ಆರ್ಐ, ಶಿರಸ್ತೇದಾರ್, ಪಿಡಿಓ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿ ಕೊರತೆಯಿಂದ ಆಡಳಿತ ವ್ಯವಸ್ಥೆ ಕುಂಠಿತಗೊಂಡಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಆಡಳಿತವನ್ನು ಬಲಪಡಿಸುವ ಬದಲು, ಪ್ರತ್ಯೇಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ತಾಲ್ಲೂಕುಗಳಿಗೆ ಕಳುಹಿಸಿ ಫೋಟೋ-ಆಪ್ ನಡೆಸುವುದು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದಿದ್ದಾರೆ.
ಜನರಿಗೆ ನಿಗದಿತ ಅವಧಿಯಲ್ಲಿ ಸರ್ಕಾರಿ ಸೇವೆ ಒದಗಿಸುವ ಕಾನೂನಾತ್ಮಕ ವ್ಯವಸ್ಥೆ ‘ಸಕಾಲ’ದಲ್ಲೇ ಇದ್ದಾಗ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲು ಹೊಸ ಹೆಸರಿನಲ್ಲಿ ಪ್ರಚಾರಕ್ಕಾಗಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥ ಮಾಡುವುದು ಸರಿಯಲ್ಲ.
ಸರ್ಕಾರ ಮೊದಲು ಬಾಕಿ ಇರುವ ಲಕ್ಷಾಂತರ ಕಡತಗಳನ್ನು ವಿಲೇವಾರಿ ಮಾಡಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ‘ಜಾಹೀರಾತು’ಕ್ಕಿಂತ ಆಡಳಿತ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಡಿ.ಎಸ್. ಅರುಣ್ ಒತ್ತಾಯಿಸಿದ್ದಾರೆ.
