“ಆ. 30 ರಂದು ಸುದ್ದಿಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ – ವಿಚಾರ ಸಂಕಿರಣ,
ಖ್ಯಾತ ಪತ್ರಕರ್ತ ಡಿ.ಉಮಾಪತಿ ದಿಕ್ಸೂಚಿ ಭಾಷಣ
ಬೆಂಗಳೂರು, ಆಗಸ್ಟ್ 28- ಕರ್ನಾಟಕ ಮಾಧ್ಯಮ ಅಕಾಡೆಮಿಯು ಚಿತ್ರದುರ್ಗ ಪತ್ರಕರ್ತರ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ. ಎಸ್.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಗಸ್ಟ್ 30 ರಂದು “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಬೆಳಗ್ಗೆ 10.30 ಕ್ಕೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ.
ಎನ್. ರವಿಕುಮಾರ್(ಟೆಲೆಕ್ಸ್)
ಡಾ. ಬಿ.ಆರ್. ಅಂಬೇಡ್ಕರ್ ಅವರ ಕ್ರಾಂತಿಕಾರಿ ಚಿಂತನೆಗಳು, ಇಂದಿನ ದಿನದಲ್ಲಿಯೂ ಅವುಗಳ ಪ್ರಸ್ತುತತೆ, ಪತ್ರಕರ್ತರಾಗಿ ಅವರ ಕೊಡುಗೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ಮುಂದಿನ ಹಾದಿ ಮುಂತಾದ ವಿಷಯಗಳ ಚರ್ಚೆಗೆ ಈ ವಿಚಾರ ಸಂಕಿರಣವು ವೇದಿಕೆಯಾಗಲಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ಅವರು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರು ದಿಕ್ಸೂಚಿ ಭಾಷಣ ಮಾಡುವರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಸದ ಗೋವಿಂದ ಎಂ. ಕಾರಜೋಳ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವಿಚಾರ ಸಂಕಿರಣದಲ್ಲಿ “ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿ” ವಿಷಯದ ಕುರಿತು ಪತ್ರಕರ್ತ ಎನ್. ರವಿಕುಮಾರ್(ಟೆಲೆಕ್ಸ್) “ಪತ್ರಕರ್ತರಾಗಿ ಅಂಬೇಡ್ಕರ್ ಅವರ ಬರವಣಿಗೆಗಳು” ವಿಷಯದ ಕುರಿತು ಚಿಂತಕ ವಿ.ಎಲ್. ನರಸಿಂಹಮೂರ್ತಿ, “ಅಂಬೇಡ್ಕರ್ ದೃಷ್ಟಿಯಲ್ಲಿ ಲಿಂಗಸಮಾನತೆ” ಕುರಿತು

ಉಪನ್ಯಾಸಕಿ ಡಾ. ಭಾರತಿದೇವಿ ಹಾಗೂ ಪತ್ರಕರ್ತರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ವಿಷಯದ ಕುರಿತು ಪತ್ರಕರ್ತ ರಿಷಿಕೇಶ್ ಬಹದ್ದೂರ್ ದೇಸಾಯಿ ವಿಷಯ ಮಂಡಿಸಲಿದ್ದಾರೆ.

ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಪತ್ರಕರ್ತರು ಹಾಗೂ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಶ್ರೀಮತಿ ಸಹನಾ ಅವರು ಕೋರಿದ್ದಾರೆ.
