ಶಿವಮೊಗ್ಗ, ಏ.2: ಮನುಷ್ಯ ಆರೋಗ್ಯಕರವಾಗಿ ಬದುಕಲು ಪ್ರಕೃತಿಯನ್ನು ಅನುಸರಿಸಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಜಿ.ಎ. ಮಂಜುನಾಥ ತಿಳಿಸಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ವಾಟರ್ ಆಫ್ ವಾಯ್ಸ್ ಲೆಸ್ ಸಹಯೋಗದೊಂದಿಗೆ ಇಂದು ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ “ವಿಶ್ವ ಜಲ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಎಲ್ಲವು ಕೂಡ ಬೆರೆತಿದೆ. ಇದಕ್ಕೆ ತನ್ನನ್ನು ತಾನು ಹೇಗೆ ಅಭಿವೃದ್ದಿ ಮಾಡಿಕೊಳ್ಳಬೇಕೆಂಬುದು ಕೂಡ ತಿಳಿದಿದೆ. ಪ್ರಕೃತಿ ಕೇವಲ ಗಿಡ, ಮರ ಅಲ್ಲ. ಪ್ರಕೃತಿ ಅಂದರೆ ಇಡೀ ಜೀವಸಂಕುಲ. ಪ್ರಕೃತಿ ಚೆನ್ನಾಗಿ ಇಟ್ಟುಕೊಳ್ಳುವುದೆಂದರೆ ಇಡೀ ಕುಟುಂಬವನ್ನು ಚೆನ್ನಾಗಿ ಇಟ್ಟುಕೊಂಡಂತೆ. ಹಾಗಾಗಿ ಪ್ರಕೃತಿಯನ್ನು ಕಾಪಾಡಿಕೊಳ್ಳಬೇಕು. ಇದರಿಂದ ಜೀವಸಂಕುಲ ಉಳಿಯುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ಮಾತನಾಡಿ, ಭೂಮಿಯ ಮೇಲೆ ಶೇ97 ರಷ್ಟು ನೀರಿದೆ. ಆದರೆ ನಮಗೆ ಕುಡಿಯಲು ಶೇ 1.5 ನೀರು ಮಾತ್ರ ಇರುವುದು. ಇದರಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳಿಗು ಕೂಡ ಹಂಚಬೇಕಾಗಿದೆ. ಈ ಸಂಬಂಧ ವಾಟರ್ ಆಫ್ ವಾಯ್ಸ್ ಲೆಸ್ ಎನ್ ಜಿಒ ಪ್ರಾಣಿಗಳಿಗೆ ನೀರಿನ ಅಗತ್ಯ ಕುರಿತು ರಾಜ್ಯದ ಎಲ್ಲೆಡೆ ಮಾಹಿತಿ ನೀಡುತ್ತಿದ್ದಾರೆ.
ಇತ್ತೀಚಿಗೆ ಮನೆಗಳಿಗೆ 24 * 7 ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದ್ದು, ನೀರಿನ ಬಳಕೆಯನ್ನು ಅಳೆಯಲು ಅದಕ್ಕೆ ಮೀಟರ್ ಅಳಡಿಸಿದ್ದಾರೆ. ಆದರೆ ಮೀಟರ್ ಪ್ರಕಾರ ಪ್ರತಿ ದಿನ 24 ಲಕ್ಷ ನೀರು ಖರ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಮಿತವಾಗಿ ಬಳಸಬೇಕು. ಇದರಿಂದ ಪ್ರಾಣಿ ಪಕ್ಷಿಗಳಿಗು ಕೂಡ ನೀರು ದೊರಕುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, ನೀರು ರೈತಾಪಿ ವರ್ಗಕ್ಕೆ ಬಹು ಮುಖ್ಯವಾಗಿದೆ. ಆತನಿಗು ಬೆಳೆ ಬೆಳೆಯಲು ನೀರು ಅಗತ್ಯ, ನೀರು ಸಿಗದೆ ಇದ್ದರೆ ಆಹಾರ ಉತ್ಪಾದನೆ ನಿಂತು ಹೊಗುತ್ತದೆ. ಯೋಗ್ಯವಾದ ನೀರಲ್ಲಿ ಆಹಾರ ಬೆಳೆದು ಅದನ್ನು ನಾವು ಕೂಡ ಉಪಯೋಗಿಸಬೇಕಾಗಿದೆ. ಹಾಗಾಗಿ ನೀರನ್ನು ಮಿತವಾಗಿ ಬಳಸಬೇಕು ಎಂದರು.
ವಾಟರ್ ಆಫ್ ವಾಯ್ಸ ಲೆಸ್ ನ ಸಹ ಸಂಸ್ಧಾಪಕರು ಪ್ರಫುಲ್ ಮೌನ್, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಅಮಿ ಪ್ರಫುಲ್ ಮೌನ್, ಸುಪ್ರಿಯಾ ಹಾಗೂ ವಕೀಲರು ಹಾಜರಿದ್ದರು.
