Homeಜಿಲ್ಲೆಉಪ ಚುನಾವಣೆಗೆ ಮುಸ್ಲಿಂರಿಂದ “ನೋಟಾ”- ಸಯದ್ ಮುಜಿಬುಲ್ಲ

ಉಪ ಚುನಾವಣೆಗೆ ಮುಸ್ಲಿಂರಿಂದ “ನೋಟಾ”- ಸಯದ್ ಮುಜಿಬುಲ್ಲ

Spread the love

ಶಿವಮೊಗ್ಗ, ಮಾ.3: ಕಾಂಗ್ರೆಸ್ ಮುಖಂಡರು ಈ ಬಾರಿಯ ವಿಧಾನಸಭಾ ಉಪ ಚುನಾವಣೆಯಲ್ಲಿ ಮುಸ್ಲಿಂರನ್ನು ಕಡೆಗಣಿಸಿರುವುದರಿಂದ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯವರನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡದೆ ನೋಟಾ ಮತ ನೀಡಬೇಕೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತಾರಕ್ಷಣೆ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸಯದ್ ಮುಜಿಬುಲ್ಲ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲು ಮುಸ್ಲಿಂ ಸಮುದಾಯ ಕಾರಣವಾಗಿದೆ. ದಾವಣಗೆರೆ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಅಭ್ಯರ್ಥಿಗೆ ಟಿಕೇಟ್ ನೀಡುವಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದರು. ಅಲ್ಲದೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಕೂಡ ಹೆಚ್ಚಾಗಿದ್ದವು ಆದರೂ ಮುಸ್ಲಿಂರಿಗೆ ಟಿಕೇಟ್ ನೀಡದೆ ಪುನಃ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೇಟ್ ನೀಡಿ ಇಡೀ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಇಷ್ಟಲ್ಲದೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕಾಂಗ್ರೆಸ್‌ನ ಸುರ್ಜಿವಾಲ ಅವರು ಜಮೀರ್ ಅಹಮ್ಮದ್ ಖಾನ್ ಮತ್ತು ನಮ್ಮ ಉಲೇಮಗಳಿಗೆ ಅವಮಾನಿಸಿದ್ದಾರೆ. ಇದು ಇಡೀ ಮುಸ್ಲಿಂ ಸಮುದಾಯವನ್ನೇ ಅವಮಾನ ಮಾಡಿದಂತೆ ಕೂಡಲೇ ಅವರು ನಮ್ಮ ನಾಯಕ ಜಮೀರ್ ಅಹಮ್ಮದ್ ಖಾನ್ ಅವರಲ್ಲಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಉಪ ಚುನಾವಣೆಯ ಎರಡು ಕ್ಷೇತ್ರಗಳ ಫಲಿತಾಂಶ ಏನೇ ಬಂದರು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ನಮಗು ಗೊತ್ತು ಆದರೂ ಕೂಡ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಳಿಸಲೇ ಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ನಾಯಕರು ನಮ್ಮನ್ನು ವೋಟ್ ಬ್ಯಾಂಕಿಗಾಗಿಯೇ ಬಳಸಿಕೊಳ್ಳತ್ತಾರೆಯೇ ವಿನಹ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಇವೆಲ್ಲವೂ ತೊರಿಕೆಗೆ ಮಾತ್ರ ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಮುಸ್ಲಿಂ ಸಮುದಾಯ ಕಲಿಸಲೇ ಬೇಕಾಗಿದೆ ಎಂದರು.

ಜಮೀರ್ ಅಹಮ್ಮದ್ ಖಾನ್ ಜನಪ್ರಿಯತೆಯನ್ನು ಸಹಿಸದ ಕೆಲವು ಕಾಂಗ್ರೆಸ್ ನಾಯಕರು ಒಡಕನ್ನು ಉಂಟು ಮಾಡಿ ಮುಸ್ಲಿಂ ನಾಯಕತ್ವವನ್ನೇ ಕೊನೆಗಾಣಿಸಲು ಮಾಡುತ್ತಿರುವ ಷಡ್ಯಂತ್ರ ಸ್ವಷ್ಟವಾಗಿಯೇ ಕಾಣುತ್ತಿದೆ. ಮುಸ್ಲಿಂರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬಾರೆಂದು ಕಾಂಗ್ರೆಸ್ ನಿರ್ಧರಿಸಿದಂತಿದೆ. ಇವೆಲ್ಲವೂ ಮುಸ್ಲಿಂ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಸಹನೆಯ ಕಟ್ಟೆ ಒಡೆದಿದೆ. ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಮುಸ್ಲಿಂರ ನಿರ್ಲಕ್ಷವನ್ನು ಎಷ್ಟು ದಿನವೆಂದು ಸಹಿಸಿಕೊಳ್ಳುವುದು. ಹಾಗಾಗಿ ಈ ಬಾರಿಯ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು. ಅಷ್ಟೆಯೆಲ್ಲಾ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕೂಡ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದೆ ಹೋದರೆ ಕಾಂಗ್ರೆಸ್ ಪಕ್ಷದ ವಿರುದ್ದ ಮುಸ್ಲಿಂ ಸಮುದಾಯದವರು ತಿರುಗಿ ಬೀಳುವುದು ದೂರವಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಮೊಹಮ್ಮದ್ ಸಾದತ್‌ವುಲ್ಲ, ಎಂ.ಡಿ. ಇರ್ಷದ್, ಮಹಮ್ಮದ್ ಗೌಸ್, ನೂರುಲ್ಲಾ, ಎಂ.ಡಿ.ದಸ್ತಗಿರ್, ಮುಕ್ತಿಯಾರ್ ಅಹಮ್ಮದ್, ಸುಲೇಮಾನ ಶರೀಫ್, ಫಾರೂಕ್ ಸಾಬ್, ರಿಯಾಜ್, ಅನ್ವರ್ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments