ಬೀದರ್, ಏ.11: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗಿದ್ದು, ಇದರ ನಿಯಮಗಳಲ್ಲಿ ತೊಂದರೆ ಇದ್ದರೆ ಕೂಡಲೇ ಬಗೆ ಹರಿಸಲಾಗುತ್ತದೆ ಹಾಗೂ ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮಾವನ್ನು ಜಾರಿ ಮಾಡುವ ಕುರಿತು ಚಿಂತಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಮನಿಸಿ:ಮನುವಾದಿಗಳಿಗೆ ಸಮ ಸಮಾಜ ಬೇಕಿಲ್ಲ: ಸಿದ್ದರಾಮಯ್ಯ
ಈ ಸಮ್ಮೇಳನವನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಪತ್ರಕರ್ತರು ಸಮಾಜವನ್ನು ತಿದ್ದುವ, ಜಾಗೃತಿ ಮೂಡಿಸುವ ಹಾಗೂ ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಬೇಕು. ವಸ್ತುನಿಷ್ಠವಾದಂತಹ ಸತ್ಯವನ್ನು ಜನರ ಮುಂದು ಇಡಬೇಕು. ಆ ಮೂಲಕ ಸಮಾಜದಲ್ಲಿರುವ ಅನೇಕ ನ್ಯೂನತೆಗಳಿಂದ ಹೊಗಲಾಡಿಸಿ ಉತ್ತಮ ಸಮಾಜ ಕಟ್ಟುವಲ್ಲಿ ಕೆಲಸ ಮಾಡಬೇಕು ಎಂದರು.
ಇಂದಿನ ವಿದ್ಯಮಾನದಲ್ಲಿ ಸುದ್ದಿ ಮಾಧ್ಯಮಗಳು ಕಾರ್ಪೊರೇಟ್ ಕಂಪನಿಗಳ ಕೈಯಲ್ಲಿದೆ. ಅವರು ಹೇಳಿದಂತೆ ಪತ್ರಕರ್ತರು ಕೇಳುವಂತಾಗಿದೆ. ಹಾಗಾಗಿ ಪತ್ರಕರ್ತರು ಬರೆಯುವಾಗ ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಿರೆ. ಊಹೆ ಮೇಲೆ ಬರೆಯಬೇಡಿ ಅದು ಬಹಳ ಅಪಾಯಕಾರಿ. ಕ್ಷುಲಕ ವಿಚಾರಗಳನ್ನು ವೈಭವೀಕರಿಸಬೇಡಿ, ಇದರಿಂದ ವ್ಯಕ್ತಿಯ ಮೇಲೆ ಆತನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ನೀವು ಬರೆಯುವ ಸುದ್ದಿಗಳು ಸಮಾಜಕ್ಕೆ, ರಾಜ್ಯ ರಾಷ್ಟ್ರಕ್ಕೆ ಉಪಯೋಗವಾಗುವಂತೆ ಇರಬೇಕು ಎಂದರು.
