Homeಜಿಲ್ಲೆಮೋಹನ್ ಇಡೀ ಜೀವನವೇ ಜನಸಾಮಾನ್ಯರ ಜೊತೆ ಬೆರೆತ್ತಿದ್ದರು: ಮಾಜಿ ಸಚಿವ ಸಿಂಧ್ಯಾ

ಮೋಹನ್ ಇಡೀ ಜೀವನವೇ ಜನಸಾಮಾನ್ಯರ ಜೊತೆ ಬೆರೆತ್ತಿದ್ದರು: ಮಾಜಿ ಸಚಿವ ಸಿಂಧ್ಯಾ

Spread the love

ಶಿವಮೊಗ್ಗ ,ಏ.13: ಸಹಕಾರಿ ಧುರೀಣ, ಉಂಬ್ಳೇಬೈಲು ಮೋಹನ್‌ರವರ ಇಡೀ ಜೀವನವೇ ಜನಸಾಮಾನ್ಯರ ಜೊತೆ ಬೆರೆತ್ತಿದ್ದು, ಅವರ ಸಂಪೂರ್ಣ ಜೀವನದ ಬಗ್ಗೆ ಬರೆದ ಈ ಕೃತಿ ಹೆಸರಿಗೆ ತಕ್ಕಂತೆ ಸಾರ್ಥಕವಾಗಿದ್ದು, ಅವರ ವ್ಯಕ್ತಿತ್ವವನ್ನು ಎತ್ತಿ ಹಿಡಿದಿದೆ ಎಂದು ಮಾಜಿ ಸಚಿವ ಡಾ.ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.

ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಉಂಬ್ಳೇಬೈಲು ಮೋಹನ್‌ರವರ ಅಭಿನಂದನಾ ಸಮಿತಿ ಮತ್ತು ಅಸ್ಮಿತೆ ಫೌಂಡೇಷನ್ ಕರ್ನಾಟಕ ವತಿಯಿಂದ ಡಾ.ಸಚಿನ್ ಬಿ.ಎಸ್. ಅವರ ಸಂಪಾದಕತ್ವದ ಉಂಬ್ಳೇಬೈಲು ಮೋಹನ್‌ರವರ ಸಾರ್ಥಕ ಬದುಕಿನ ಪಯಣದ ಅಭಿನಂದನಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಶಯ ನುಡಿಯನ್ನಾಡಿದರು.

ಜೆ.ಹೆಚ್.ಪಟೇಲ್, ಕಾಗೋಡು ತಿಮ್ಮಪ್ಪ, ಡಿ.ಬಿ. ಚಂದ್ರೇಗೌಡ, ಬಿ.ಎಲ್.ಶಂಕರ್, ಎಸ್.ಬಂಗಾರಪ್ಪ, ಮೊದಲಾದವರ ಜೊತೆಗೆ  ಬಾರೀ ಹತ್ತಿರದ ಒಡನಾಟ ಇದ್ದವರು.

ಉಂಬ್ಳೇಬೈಲು ಮೋಹನ್ ಯುವ ಪೀಳಿಗೆ ಈ ಪುಸ್ತಕ ಓದಬೇಕು. ಈ ಪುಸ್ತಕದಲ್ಲಿ ಮಲೆನಾಡಿನ ವಿಶೇಷತೆ, ಮುಳುಗಡೆ ಪ್ರದೇಶದ ಸಾಮಾನ್ಯ ಕುಟುಂಬದ ತಲ್ಲಣ ಮತ್ತು ಆ ಯೋಜನೆಗಳಿಂದ ಆ ಕಾಲಘಟ್ಟದಲ್ಲಿ ಪಟ್ಟ ಸಂಕಷ್ಟಗಳ ವಿವರಣೆ ಇದೆ. ಯೋಜನೆಗಳಿಂದ ಲಾಭವೂ ಆಗಿದೆ, ಸಾವಿರಾರು ಜನರಿಗೆ ನಷ್ಟವೂ ಆಗಿದೆ.  ಆ ಸಂದರ್ಭದಲ್ಲಿ ಅವರ ಕುಟುಂಬದವರ ಬೆಂಬಲ, ಹೇಗಿತ್ತು ? ಸಣ್ಣ ವಯಸ್ಸಿನಲ್ಲೇ ಪತ್ನಿಯನ್ನು ಕಳೆದುಕೊಂಡ ಮೋಹನ್‌ರವರ ಮಾನಸಿಕ ಸ್ಥಿತಿ ಸಾಮಾಜಿಕ ಕಳಕಳಿ, ಅವರ ಬದ್ಧತೆ, ಪ್ರಾಮಾಣಿಕ ಕ್ರಿಯಾಶೀಲತೆ ಅವರು ಗ್ರಾ.ಪಂ. ಅಧ್ಯಕ್ಷರಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಹಿರಿಯ ಸಹಕಾರಿಯಾಗಿ, ಅವರು ಮಾಡಿದ ಕಾರ್ಯಗಳ ಬಗ್ಗೆ ವಿವರಣೆ ಇದೆ. ಅವಕಾಶ ಇದ್ದರೂ ದೀಪದ ಕೆಳಕೆ ಕತ್ತಲೆ ಎಂಬಂತೆ ದೊಡ್ಡ ಸ್ಥಾನಮಾನವಿಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಜನತಾಪಕ್ಷದ ಸಂಘಟನೆಗೆ ಒತ್ತು ನೀಡಿದ ಅವರು, ಎಂದೂ ಕೂಡ ಅಧಿಕಾರದಾಹಿಯಾಗಿರಲಿಲ್ಲ. ತಮಗೆ ಸಿಕ್ಕ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕಾರಣದಲ್ಲಿ ಯಶಸ್ವಿ ಸವಾರ ಆಗಲಿಲ್ಲ. ಸಮಾಜದ ಕೆಲಸ ಮಾಡುವವರಿಗೆ, ಇಂತಹ ಸುಸಂಸ್ಕೃತ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸುವುದು, ಸನ್ಮಾನಿಸುವುದು, ಒಂದು ಗೌರವಪೂರ್ಣ ಕೆಲಸ. ಮತ್ತು ನಮ್ಮ ಕರ್ತವ್ಯವೂ ಹೌದು ಎಂದರು.

ಗಮನಿಸಿ: ಶರಾವತಿ ಪಂಪ್ಡ್ ಯೋಜನೆ ವಿರುದ್ಧ ಏ.16 ರಂದು ಜಾಥ: ಕೆ.ಎಸ್. ಈಶ್ವರಪ್ಪ

ಅಭಿನಂದನಾ ಗ್ರಂಥ ಸಾರ್ಥಕ ಬಿಡುಗಡೆಗೊಳಿಸಿದ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ನನಗೆ ಇಂದು ಎನ್‌ಆರ್‌ಪುರದಲ್ಲಿ ಸಿಎಂ ಕಾರ್ಯಕ್ರಮವಿತ್ತು. ಆದರೆ ಅಧಿಕಾರ ಇದ್ದಾಗ ಸಿಎಂ ಜೊತೆಗೆ ಬಹಳ ಜನ ಇರುತ್ತಾರೆ. ಅದಕ್ಕಿಂತ  ಅಧಿಕಾರ ಇಲ್ಲದ ಗೆಳೆಯನ ಕುರಿತು ಗ್ರಂಥ ಬಿಡುಗಡೆಯೇ ಶ್ರೇಷ್ಠ ಎಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಲ್ಲಿ ನೆರೆದ ಮಾಜಿ ರಾಜಕಾರಣಿಗಳು, ನಾಯಕರುಗಳು, ಮೋಹನ್ ಅವರ ಬಗ್ಗೆ ಅವರಿಗೆ ಇರುವ ಪ್ರೀತಿಯೇ ಸಾಕ್ಷಿಯಾಗಿದೆ. ಅಜಾತ ಶತ್ರುವಾಗಿ ಸಾರ್ಥಕ ಜೀವನ ನಡೆಸಿದ ಆತ್ಮತೃಪ್ತಿ ಅವರಿಗಿದೆ. ಪ್ರತಿಷ್ಠೆ ಅಹಂಕಾರದ ರಾಜಕಾರಣವನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ಪರಿಸ್ಥಿತಿಯ ಪಿತೂರಿಗೆ ಬಲಿಯಾದ ಪಿಜಿಆರ್ ಸಿಂಧ್ಯಾ, ನಾನು ಈಶ್ವರಪ್ಪ ಸೇರಿದಂತೆ ಅನೇಕರಿದ್ದಾರೆ. ಕೆಲವು ನಿರ್ಧಾರಗಳಿಂದ ಸಭ್ಯರು ಅಸಭ್ಯರಿಂದ ಆಳಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ನೂರಾರು ವರ್ಷ ಹಿಂದೆಯೇ ಪ್ಲೇಟೋ ಎಂಬ ರಾಜಕೀಯ ತಜ್ಞ ಹೇಳಿದ್ದರು. ಅದು ಈಗ ನಿಜವಾಗುತ್ತಿದೆ. ರಾಜಕಾರಣವು ವ್ಯಾಪಾರೀಕರಣವಾಗಿದೆ. ಇಲ್ಲ ರಾಜಕೀಯದಿಂದ ಹಿಂದೆ ಸರಿಯಬೇಕು ಅಥವಾ ನನಗೆ ಈ ರಾಜಕೀಯ ಜೀವನ ಸಾಕು ಎಂಬ ತೀರ್ಮಾನಕ್ಕೆ ಬರಬೇಕು. ಯಾವ ಉದ್ದೇಶಕ್ಕಾಗಿ ಸ್ವಾತಂತ್ರ್ಯ ಬಂದಿದೆಯೋ ಅದನ್ನು ಮರೆತು ಸ್ವಂತ ಹಿತಕ್ಕಾಗಿ ರಾಜಕಾರಣ ಮಾಡುವವರು ತುಂಬಿದ ಈ ದಿನಗಳಲ್ಲಿ ತಮಗೆ ಸಿಕ್ಕ ಅವಕಾಶದಲ್ಲಿ ಜನಸಾಮಾನ್ಯರ ಜೊತೆ ಬೆರೆತು ಮೋಹನ್ ತಮ್ಮ ವ್ಯಕ್ತಿತ್ವ ಉಳಿಸಿಕೊಂಡಿದ್ದಾರೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಒಬ್ಬ ಹಿರಿಯ ಸಹಕಾರಿ ಧುರೀಣರಾಗಿ ಸಾಧನೆಯ ಸಾರ್ಥಕತೆಯ ಜೀವನ ನಡೆಸಿ ಸರಳತೆಯ ಪ್ರತೀಕವಾಗಿ ಸರ್ವಪಕ್ಷಗಳಲ್ಲೂ ಅಭಿಮಾನಿಗಳನ್ನು ಹೊಂದಿದ ಸಹಕಾರ ರತ್ನ ಪ್ರಶಸ್ತಿ ಪಡೆದ ಪ್ರಾಮಾಣಿಕತೆ, ಬದ್ಧತೆಯಿಂದ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿದ ಮೋಹನ್‌ರವರನ್ನು ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪ ವಹಿಸಿದ್ದರು. ಇದಕ್ಕೂ ಮೊದಲು ಅಸ್ಮಿತೆ ಫೌಂಡೇಷನ್‌ನ ನಿರ್ದೇಶಕ ಮತ್ತು ಪುಸ್ತಕದ ಸಂಪಾದಕ ಡಾ.ಸಚಿನ್ ಬಿ.ಎಸ್., ಹಲವು ಅಧ್ಯಾಯಗಳಲ್ಲಿ ಮೋಹನ್ ಅವರ ಬಗ್ಗೆ ಇರುವ ಮಾಹಿತಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಉಂಬ್ಳೇಬೈಲು ಮೋಹನ್‌ರವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಶ್ರೀಕಾಂತ್, ಬಸವಾನಿ ವಿಜಯ್‌ದೇವ್, ಕಡಿದಾಳ್ ಗೋಪಾಲ್, ಎಂ.ಬಿ.ಚನ್ನವೀರಪ್ಪ, ಪ್ರೊ.ಜಿ.ಎಲ್. ಪದ್ಮನಾಭ್, ಬಿ.ಎ.ರಮೇಶ್ ಹೆಗ್ಡೆ, ವಿಜಯಕುಮಾರ್, ಸುನೀಲ್, ಶಾಂತವೀರಪ್ಪಗೌಡ್ರು ಸೇರಿದಂತೆ ಮೋಹನ್‌ರವರ ಸಹಕಾರಿ ರಂಗದ ಸ್ನೇಹಿತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments