ಶಿವಮೊಗ್ಗ, ಏ.20 : ಸತ್ಯ ಮತ್ತು ಶುದ್ದದಿಂದ ಕಾಯಕ ಮಾಡಿ ಅದರಿಂದ ಧನ ಗಳಿಸಿ ದಾಸೋಹಕ್ಕೆ ಬಳಸಿದರೇ ಅದುವೇ ಕೈಲಾಸಕ್ಕೆ ದಾರಿ ಎಂದು ಆಧ್ಯಾತ್ಮಕ ಚಿಂತಕ ಡಾ. ಸಂತೋಷ್ ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಶಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ಇವರ ಸಂಯುಕ್ತಾಶ್ರದಲ್ಲಿ ಸೋಮವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವಮಾನವ, ಮಹಾನ್ ಮಾನವತಾವಾದಿ, ಸಾಂಸ್ಕೃತಿ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉಪನ್ಯಾಸ ನೀಡಿದರು.
ಬಸವಣ್ಣ ನವರ ಕಾಯಕ, ದಾಸೋಹದ ಆಶಯವನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ. ಪ್ರತಿ ಪದದ ಹಿಂದೆ ಶರಣರು ಗೂಡಾರ್ಥ ಇಟ್ಟಿದ್ದಾರೆ . ಹಾಗಾಗಿ ನಾವುಗಳು ಕಾಯಕ ಹಿಂದೆ ಇರುವ ನಿಗೂಢ ಅರ್ಥವನ್ನು ತಿಳಿದುಕೊಳ್ಳಬೇಕಾಗಿದೆ. ಯಾವ ಕೆಲಸ ಮಾನವೀಯತೆ , ಧಾರ್ಮಿಕ ಮತ್ತು ಆಧ್ಯಾತ್ಮಕ ತಳಹದಿ ಆಧಾರ ಮೇಲೆ ನಿಂತಿರುತ್ತದೆ ಹಾಗೂ ಮಾಡುವ ಕೆಲಸ ಆತ್ಮಸಾಕ್ಷಿಯಾಗಿ ಇರುತ್ತದೆ ಅದುವೇ ಕಾಯಕ.
ಉದ್ಯೋಗಕ್ಕೂ ಕಾಯಕಕ್ಕೂ ಬಹಳ ವ್ಯತ್ಯಾಸವಿದ್ದು, ಭಾವದ ಆಧಾರ ಮೇಲೆ ಇವೆರಡು ನಿಂತಿವೆ. ಕೇವಲ ಸಂಪಾದನೆಗಾಗಿ ಮಾಡುವುದು ಉದ್ಯೋಗವಾದರೆ, ದೈವ ಸಾಕ್ಷಿಯಾಗಿ ಶ್ರಮ , ಪ್ರಾಮಾಣಿಕತೆ, ಸಮಾಜದ ಹಿತಚಿಂತನೆಗಾಗಿ ಯಾವುದೇ ಆತ್ಮ ವಂಚನೆ ಇಲ್ಲದೆ ಮೌಲ್ಯಯುತವಾಗಿ ಮಾಡುವ ಕೆಲಸವೇ ಕಾಯಕವಾಗಿದೆ ಎಂದರು.
ಗಮನಿಸಿ:ಮಹಿಳಾ ಮೀಸಲಾತಿ ಸೋಲಿಸಿದ ಕಾಂಗ್ರೆಸ್ನ್ನು ಮಹಿಳೆಯರು ಕ್ಷಮಿಸುವುದಿಲ್ಲ. ಸಂಸದ ಬಿ ವೈ ರಾಘವೇಂದ್ರ ವಾಗ್ದಾಳಿ
ಕಾಯಕ ಶುದ್ದವಾಗಿದ್ದರೆ ಕೈಲಾಸವನ್ನು ಕಾಣಬಹುದು, ಕೈಲಾಸ ಎಂದರೆ ಪರ್ವತ ಮಾತ್ರವಲ್ಲ. ಕೈ ಅಂದರೆ ಕರ ,ಲಾಸ ಎಂದರೆ ಸುಖ, ಆನಂದ , ಹರ್ಷ. ಯಾವಾಗ ನಮ್ಮ ಚಿತ್ತ ಇವೆಲ್ಲದರಿಂದ ಶುದ್ದಿಯಾಗಿರುತ್ತದೆಯೋ ಅದು ನಮ್ಮನ್ನು ಕೈಲಾಸ ಕಡೆ ಕೊಂಡ್ಯುತ್ತದೆ.
ಬಸವಣ್ಣ ತತ್ವದಲ್ಲಿ ದಾಸೋಹ ಎಂದರೆ ಯಾವುದೇ ಸ್ವಾರ್ಥ ಮನೋಭಾವ ಇಲ್ಲದೆ ಕೊಡುವುದಾಗಿ. ದಾಸ ಅಂದರೆ ಸೇವಕ, ಒಹ ಎಂದರೆ ಅರ್ಪಣೆ ಇವೆರಡನ್ನು ಹಂಚಿಕೊಂಡು ಸಮರ್ಪಣೆ ಮಾಡುತ್ತಾರೆ. ಬಸವಣ್ಣ ಚಿಂತನೆಯಲ್ಲಿ ದಾ ಅಂದರೆ ಕೊಡುಗೆ, ಸ ಎಂದರೆ ಸೇವಕ, ಹೋಹ ಎಂದರೆ ಯಾವುದೇ ಪ್ರತಿಫಲದ ಅಪೇಕ್ಷ ಇಲ್ಲದೆ ಕೊಡುವುದು ಎಂದು ಹೇಳಿದ್ದಾರೆ. ದಾಸೋಹ ಮಾಡುವಾಗ ನಿಷ್ಠೆಯಿಂದ ಇರಬೇಕು, ಬೇಧಭಾವ ಮಾಡಬಾರದು, ಅಹಂಕಾರ ಇರಬಾರದು, ಸೇವಾಮನೋಭಾವ ಇರಬೇಕು ಎಂದು ತಿಳಿಸಿದರು.
ಇಂತಹ ಮಹಾನೀಯರು ಜಯಂತಿಗೂ ಮಹತ್ವದ ಅರ್ಥವಿದೆ. ಜಯಂತಿ ಎಂದರೇ ಯಾರ ಹುಟ್ಟು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮನುಕುಲಕದ ಉದ್ದಾರಕ್ಕಾಗಿ ಪುನರ್ ಸ್ಥಾಪಿಸುವಾಗುತ್ತದೆಯೋ ಅದನ್ನು ಜಯಂತಿ ಎನ್ನುವರು. ಇನ್ನೊಂದು ಅರ್ಥದಲ್ಲಿ ಯಾರು ವಿಜಯಕ್ಕೆ ಕಾರಣವಾಗುವವರೊ ಅದಕ್ಕೆ ಜಯಂತಿ ಎಂದಾಗುತ್ತದೆ. ಇಂತಹ ಮಹಾನೀಯರು ಅಜ್ಞಾನ ಮೇಲೇ ಜ್ಞಾನ , ಕತ್ತಲೆ ಮೇಲೆ ಬೆಳಕಿನ ಜಯ ಸಾಧಿಸಿದ್ದಾರೆ ಎಂದರು.
