ಖರ್ಗೆ ಅವರಿಗೆ ಅವಮಾನ: ಮೋದಿ -ಷಾ ಕ್ಷಮೆಗೆ ರಮೇಶ್ ಅಗ್ರಹ
ಹಿಂದೂತ್ವದ ಹೆಸರಲ್ಲಿ ಜಾತಿವಾದ ವನ್ನು ಪೋಷಿಸುತ್ತಲೇ ಬರುತ್ತಿರುವ ಬಿಜೆಪಿ ಪ್ರಾಯೋಜಿತ ಸಂಘಟನೆಗಳು ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕಂಟಕವಾಗಿವೆ
ಶಿವಮೊಗ್ಗ: ಉತ್ತರಾಖಂಡದ ಹಲ್ಡ್ವಾನಿ ರಾಮ ಲೀಲಾ ಮೈದಾನದಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವ ಹಿಂದೂ ಸಂಘಟನೆಗಳ ಕೃತ್ಯವನ್ನು ಪ್ರದೇಶ ಕಾಂಗ್ರೇಸ್ ಸಮಿತಿ ಪ್ರಧಾನಕಾರ್ಯದರ್ಶಿ ಎನ್. ರಮೇಶ್ ತೀವ್ರವಾಗಿ ಖಂಡಿಸಿದ್ದಾರೆ.
ದಲಿತ ಸಮುದಾಯದಿಂದ ರಾಷ್ಟ್ರ ಮಟ್ಟದ ನಾಯಕತ್ವದವರೆಗೂ ಬೆಳೆದು ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ದಲಿತ ನಾಯಕರಾಗಿ ಉಳಿದಿಲ್ಲ,ಅವರೂ ರಾಷ್ಟ್ರ ನಾಯಕರೂ ಆಗಿದ್ದಾರೆ. ೯ ಬಾರಿ ಶಾಸಕರಾಗಿ, ಸಚಿವರಾಗಿ, ಲೋಕಸಭೆ,ರಾಜ್ಯ ಸಭೆಗಳು ಸೇರಿದಂತೆ ನಾಲ್ಕು ಬಾರಿ ಸಂಸತ್ತಿನಲ್ಲಿ ಮುತ್ಸದ್ದಿ ನಾಯಕತ್ವವನ್ನು ಮೆರೆದಿರುವ ಮಲ್ಲಿಕಾರ್ಜುನ ಖರ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಂಡ ಸಮ ಸಮಾಜದ ಕನಸನ್ನು, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಜೀವನ ಪರ್ಯಂತ ಹೋರಾಡುತ್ತಿದ್ದಾರೆ. ಈ ದೇಶ ಕಂಡ ನಿಷ್ಕಳಂಕ ನಾಯಕರೂ ಕೂಡ. ಬುದ್ಧ ಮಾರ್ಗದ ಮೂಲಕ ಈ ದೇಶವನ್ನು ಕಟ್ಟುವ ಸಂಕಲ್ಪ ಮಾಡಿದವರು. ಇಂತಹ ಮಾನವೀಯ ಗುಣವುಳ್ಳ ನಾಯಕರನ್ನು ಜಾತಿ ಯ ಕಾರಣಕ್ಕೆ ಅವಮಾನಿಸುವುದು ಒಂದು ಪೈಶಾಚಿಕ ಕೃತ್ಯ ಎಂದು ಎನ್. ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎನ್. ರಮೇಶ್ ಅವರು ಜಾತಿಯೇತೆ ಎಲ್ಲಿದೆ ಎಂದು ಕೇಳುವವರಿಗೆ ರಾಮಲೀಲಾ ಮೈದಾನದಲ್ಲಿ ಹಿಂದೂ ಸಂಘಟನೆಗಳು ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಹೋಮ,ಹವನ ನಡೆಸಿ ಶುದ್ಧೀಕರಣ ಮಾಡಿರುವುದು ಜಾತಿವಾದ ದ ಬೆತ್ತಲೇ ಪ್ರದರ್ಶನವಾಗಿದೆ. ಇಂದೊಂದು ಅಸ್ಪ್ರಶ್ಯತೆ ಆಚರಣೆಯೇ ಆಗಿದ್ದು, ಇಡೀ ದೇಶ ತಲೆ ತಗ್ಗಿಸುವಂತ ಕೃತ್ಯ ಇದಾಗಿದೆ. ಈ ದೇಶದ ಹಿರಿಯ ರಾಜಕಾರಣಿ,ಜನನಾಯಕ ರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾತಿ ಆಧಾರಿತ ಅವಮಾನಗಳು ನಡೆಯುತ್ತಿರುವಾಗ ಸಾಮಾನ್ಯ ದಲಿತರ ,ಶೋಷಿತರ ಪಾಡೇನು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದೂತ್ವದ ಹೆಸರಲ್ಲಿ ಜಾತಿವಾದ ವನ್ನು ಪೋಷಿಸುತ್ತಲೇ ಬರುತ್ತಿರುವ ಬಿಜೆಪಿ ಪ್ರಾಯೋಜಿತ ಸಂಘಟನೆಗಳು ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕಂಟಕವಾಗಿವೆ. ಮಲ್ಲಿಕಾರ್ಜುನ ಖರ್ಗೆ ಅವರ ನಿಂತ ಸ್ಥಳವನ್ನು ಶುದ್ಧೀಕರಣದ ಹೆಸರಲ್ಲಿ ಅಸ್ಪೃಶ್ಯತೆ ಆಚರಿಸಿದ ಹಿಂದೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಲ್ಲಿಕಾರ್ಜುನ ಖರ್ಗೆ ಅವರಿಗಾದ ಈ ಅವಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವ ಅಮಿತ್ ಷಾ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
