ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.2
ಕುವೆಂಪು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪ್ರತಿಷ್ಟಿತ ಸಹ್ಯಾದ್ರಿ ಕಲಾ ಕಾಲೇಜಿನ ಎನ್ ಎಸ್ ಎಸ್ ಘಟಕಗಳು ಹಾಗೂ ಶಿವಮೊಗ್ಗದ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಬುಧವಾರ ಕ್ಯಾನ್ಸರ್ ಕುರಿತು ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳು ಬಿ.ಎಚ್. ರಸ್ತೆ ಮತ್ತು ಗಾಂಧಿ ಬಜಾರ್ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಜನರ ಬಳಿ ತೆರಳಿ ಕ್ಯಾನ್ಸರ್ ಕುರಿತು ಅರಿವು ಮೂಡಿಸಿದರು. ಇದಕ್ಕೂ ಮುನ್ನ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಈ ಅಭಿಯಾನಕ್ಕೆ ಉದ್ಯಮಿ ಹಾಗೂ ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷ ಎನ್.ಗೋಪಿನಾಥ್ ಚಾಲನೆ ನೀಡಿ ಮಾತನಾಡಿದರು.
ಗಮನಿಸಿ: ಸಿಎ ನಿವೇಶನಗಳ ಶುಲ್ಕ ಸರಳೀಕರಣಗೊಳಿಸಿ: ಸಚಿವರಿಗೆ ಶಾಸಕರು ಮನವಿ
ಕ್ಯಾನ್ಸರ್ ಎನ್ನುವ ಕಾಯಿಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಜನರಲ್ಲಿ ಇದು ಗುಣಪಡಿಸಲಾಗದ ಕಾಯಿಲೆ ಎಂಬ ಭಯವಿದೆ. ಆದರೆ ಕ್ಯಾನ್ಸರ್ ಅನ್ನು ಆರಂಭದ ಹಂತದಲ್ಲಿ ಕಂಡು ಹಿಡಿದರೆ ಖಂಡಿತ ಇದನ್ನು ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಸಂಜೀವನಿ ಕ್ಯಾನ್ಸರ್ ಸಂಸ್ಥೆ ಮತ್ತು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಇವತ್ತು ಸರ್ವೇ ಮಾಡಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಶಿವಮೊಗ್ಗ ಬ್ರಾಹ್ಮೀನ್ ಅಸೋಸಿಯೆಷನ್ ಅಧ್ಯಕ್ಷ ವೆಂಕಟೇಶ್ ರಾವ್ ಕೆ ಮಾತನಾಡಿ, ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಬೇಕಿದೆ. ಮುಂಜಾಗೃತವಾಗಿ ಈ ಕಾಯಿಲೆ ಬಗ್ಗೆ ತಿಳಿದುಕೊಂಡರೆ ಭಯ ಪಡುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಸಹ್ಯಾದ್ರಿ ಕಲಾ ಕಾಲೇಜು ವಿದ್ಯಾರ್ಥಿಗಳೂ ಮತ್ತು ಸಂಜೀವನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಮ್ಮಿಕೊಂಡಿರುವ ಅಭಿಯಾನ ಪರಿಣಾಮಕಾರಿಯಾಗಿ ನಡೆಯಲಿದೆ. ಜನರ ಸಹಕಾರವು ಇದಕ್ಕೆ ಸಿಗಲಿ ಎಂದರು.
ಪರಿಸರವಾದಿ ಜರ್ನಾಧನ ಪೈ ಮಾತನಾಡಿ, ಕ್ಯಾನ್ಸರ್ ಎನ್ನುವುದು ಅತ್ಯಂತ ಕೆಟ್ಟ ಕಾಯಿಲೆಗಳಲ್ಲಿ ಒಂದು. ಈ ಕಾಯಿಲೆಯನ್ನು ಹೊಡೆದೊಡಿಸುವ ಸಲುವಾಗಿ ಶಿವಮೊಗ್ಗದ ಸಂಜೀವನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಮತ್ತು ಸಹ್ಯಾದ್ರಿ ಕಲಾ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಆರೋಗ್ಯಯುತ ಸಮಾಜಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಹಾಗೂ ಇತಿಹಾಸ ಉಪನ್ಯಾಸ ಎನ್. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳ ಸಾಮಾಜಿಕ ಸೇವೆಯ ಭಾಗವಾಗಿ ಶಿವಮೊಗ್ಗದ ಸಂಜೀವನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಈ ಸಮಾಜಮುಖಿ ಪ್ರಯತ್ನಕ್ಕೆ ಜನರ ಸಹಕಾರವೂ ಸಿಗಲಿ ಎಂದರು.
ಕಾರ್ಯಕ್ರಮದಲ್ಲಿ ಸಂಜೀವನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಪ್ರಮುಖರಾದ ಅ.ನಾ.ವಿಜಯೇಂದ್ರ ರಾವ್, ಯೂತ್ ಹಾಸ್ಟೇಲ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್ ವಾಗೇಶ್. ಶಿವಮೊಗ್ಗ ಬೈಕ್ ಕ್ಲಬ್ ನಿರ್ದೇಶಕರಾದ ಎನ್ ಎಸ್. ರವೀಂದ್ರ ಇನ್ನಿತರರು ಇದ್ದರು.
