ಶಿವಮೊಗ್ಗ,ಆ.4: ನಾವೆಲ್ಲರು ಬುದ್ದ ಬಸವ ಅಂಬೇಡ್ಕರ್ ಹಾದಿಯಲ್ಲಿ ಸಾಗಬೇಕು. ಯಾವುದೇ ಜಾತಿ, ಧರ್ಮ ಬೇದಭಾವವಿಲ್ಲದೆ ದೇಶದಲ್ಲಿ ಹಿಂದೂ ಮುಸ್ಲಿಮರೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಸೋಮವಾರ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯ ಭವನ ಲೋಕಾರ್ಪಣೆ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಯಾರು ಶಾಶ್ವತವಲ್ಲಾ, ಸಾವೊಂದೆ ಶಾಶ್ವತ. ಯಾವುದೇ ಪಕ್ಷ ಬರಲಿ ಹೊಗಲಿ ಮುಂದಿನ ತಲೆಮಾರಿಗೆ ಹೊಸ ರಾಜಕಾರಣ ಬೇಕೆ ಬೇಕು. ಎಲ್ಲಾ ಸರ್ಕಾರಗಳು ಅವರ ಅವಧಿಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಮೂಲಕ ರಾಜ್ಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದರು.
ದೇಶದ ಪ್ರಗತಿ ಆಗಬೇಕೆಂದರೆ ಪ್ರತಿಯೊಬ್ಬ ಬಡವರ ಕೈಯಲ್ಲಿ ದುಡ್ಡು ಬರಬೇಕು. ಆ ಕೆಲಸವನ್ನು ಗ್ಯಾರಂಟಿ ಯೋಜನೆ ಮಾಡಿದೆ. ಈಗಾಗಲೆ ಜಿಲ್ಲೆಯಲ್ಲಿ 56,000 ಕೋಟಿ ಹಣ ಗೃಹಲಕ್ಷ್ಮಿ ಗೆ ಬಳಕೆಯಾಗಿದೆ. ಶಕ್ತಿ ಯೋಜನೆಯಡಿಯಲ್ಲಿ 5.20 ಕೋಟಿ ಹೆಣ್ಣು ಮಕ್ಕಳು ಉಚಿತ ಪ್ರಯಾಣ ಮಾಡಿದ್ದಾರೆ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆ ಮೀಸಲಿಟ್ಟ 60 ಸಾವಿರ ಕೋಟಿ ಹಣ ಮಧ್ಯಮ ವರ್ಗ ಮತ್ತು ಬಡವರು ತಲುಪಿಸುವ ಮೂಲಕ ಮತ್ತೆ ಕರ್ನಾಟಕಕ್ಕೆ ಸೇರುತ್ತಿದೆ. ಇದರಿಂದ
ಹೆಣ್ಣು ಮಕ್ಕಳು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢ ಆಗುತ್ತಿದ್ದಾರೆ ಎಂದರು.
ಈ ದೇಶ ನಡೆಯುತ್ತಿರುವುದು ಯಾವುದೇ ಪಕ್ಷ, ವ್ಯಕ್ತಿ ಇಂದಲ್ಲ. ಈ ದೇಶದ 145 ಕೋಟಿ ಜನರಿಂದ. ಯಾವ ದೇಶ ವಿಜ್ಞಾನ, ಸಂಶೋಧನೆ ಬಗ್ಗೆ ಮಾತನಾಡುತ್ತದೆಯೊ ಅಂತಹ ದೇಶ ಮಾತ್ರ ಮುಂದೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ನೀವೆಲ್ಲಾ ನಿಮ್ಮ ಮಕ್ಕಳ ಮುಂದಿನ ಭವಿಷ್ಯ ಬಗ್ಗೆ ಆತ್ಮವಲೋಕ ಮಾಡಿಕೊಳ್ಳಬೇಕು. ಇಂತಹ ವಿಚಾರಗಳ ಮೂಲಕ ಮಾತ್ರ ಬದಲಾವಣೆ ಸಾಧ್ಯ ಎಂದರು.
