ಜಸ್ಟೀಸ್ ನಾಗಮೋಹನ್ದಾಸ್ ಆಯೋಗ ವರದಿ ಸಲ್ಲಿಕೆ: ಒಳಮೀಸಲು ಜಾರಿಗೆ ದಾರಿ ಸುಗಮ
ಬೆಂಗಳೂರು: ಪರಿಶಿಷ್ಟಜಾತಿಯಲ್ಲಿ ಒಳಮೀಸಲಾತಿ ಸಮೀಕ್ಷಾ ವರದಿಯನ್ನು ಹೈ ಕೋರ್ಟು ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು.
ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಸ್ಟೀಸ್ ನಾಗಮೋಹನ್ ದಾಸ್ ಪರಿಶಿಷ್ಟಜಾತಿಯಲ್ಲಿ ಒಳಮೀಸಲು ಕಲ್ಪಿಸುವ ಸಂಬಂಧ ನಡೆಸಲಾದ ಸಮೀಕ್ಷೆಯ ವರದಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ, ಸಚಿವರಾದ ಪ್ರಿಯಾಂಕಖರ್ಗೆ, ಆರ್. ಬಿ ತಿಮ್ಮಾಪುರ್ , ಡಾ . ಜಿ ಪರಮೇಶ್ವರ್ , ಕೆ.ಹೆಚ್ ಮುನಿಯಪ್ಪ, ಶಿವರಾಜತಂಗಡಗಿ ಮತ್ತು ಮುಖ್ಯಕಾರ್ಯದರ್ಶಿ ಶಾಲೀನಿ ರಜನೀಶ್ ಹಾಜರಿದ್ದರು.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಅಳವಡಿಸಬೇಕೆಂದು ಮಾದಿಗ ಸಮುದಾಯ 30ವರ್ಷಗಳ ಹೋರಾಟ ನಡೆಸಿದ್ದು ಕಳೆದ ವರ್ಷ ಆಗಸ್ಟ್ 1 ರಂದು ಸುಪ್ರೀಮ್ ಕೋರ್ಟು ಒಳಮೀಸಲು ಎತ್ತಿ ಹಿಡಿದು ಮಹತ್ವದ ತೀರ್ಪು ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಜನವರಿ 2025 ರಲ್ಲಿ ಒಳಮೀಸಲು ಅಳವಡಿಸಲು ನಿಖರವಾದ ದತ್ತಾಂಶಗಳನ್ನು ಅಧ್ಯಯನ ನಡೆಸಲು ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು.
ಅದರಂತೆ ಅಧ್ಯಯನ ನಡೆಸಿದ ನಾಗಮೋಹನ್ ದಾಸ್ ಅವರು ಇಂದು ದತ್ತಾಂಶಗಳನ್ನೊಳಗೊಂಡ 1766 ಪುಟಗಳ ಮತ್ತು ಶಿಫಾರಸ್ಸುಗಳ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಒಳಮೀಸಲಾತಿ ಜಾರಿಗೊಳಿಸುವಂತೆ ರಾಜ್ಯಾದ್ಯಂತ ಮಾದಿಗ ಸಮುದಾಯ ಸಂಘಟನೆಗಳು ಮತ್ತು ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರಕ್ಕೆ ತೀವ್ರ ಒತ್ತಡ ಹೇರುತ್ತಿವೆ. ಇದೀಗ ನಾಗಮೋಹನ್ ದಾಸ್ ವರದಿ ಸಲ್ಲಿಸಿರುವುದು ಒಳಮೀಸಲಾತಿ ಜಾರಿಗೆ ದಾರಿ ಸುಗಮವಾದಂತಾಗಿದೆ.
ವರದಿ ಗೆ ನೇಮಿಸಲಾದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರು ಸರ್ಕಾರದಿಂದ ಯಾವುದೇ ರೀತಿಯ ಸಂಭಾವಣೆ, ಗೌರವ ಧನವನ್ನು ಪಡೆದಿಲ್ಲ ಎಂದು ಸರ್ಕಾರ ತಿಳಿಸಿದೆ.
