ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಳನಿಮೇಡು ಗ್ರಾಮದ 5 ನೇ ತರಗತಿಯ ವರ್ಣೀಕ ಆರ್ ತಮ್ಮ ತಾಯಿ-ತಂದೆಗಳನ್ನು ಕೃಷಿಯಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಸಹಿಸಲಾಗದೆ, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಮಕ್ಕಳು ತಮ್ಮ ಮನವಿಯಲ್ಲಿ, “ಇತ್ತೀಚಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿತಗೊಂಡಿದೆ. ಈ ಕಾರಣದಿಂದ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ನಿಂತಂತಾಗಿದ್ದು, ಜನರು ಬೇಸಾಯ ಬಿಟ್ಟು ಉದ್ಯೋಗಕ್ಕಾಗಿ ಇತರೆ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸ್ಥಿತಿಯನ್ನು ನೋಡಿದಾಗ ನಮ್ಮ ಮನಸ್ಸು ತೀವ್ರವಾಗಿ ದುಃಖಗೊಂಡಿದೆ,” ಎಂದು ತಿಳಿಸಿದ್ದಾರೆ.
ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಹನೂರು ತಾಲೂಕಿನ ರಾಮಾಪುರ ಹೋಬಳಿಯ ಎಲ್ಲ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಬೇಕು, ಎಂದು ವಿನಂತಿಸಿದ್ದಾರೆ. ಈ ಮೂಲಕ ಭೂಮಿಯಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ಮಕ್ಕಳ ಪ್ರಮುಖ ಬೇಡಿಕೆಯಾಗಿದೆ.


ಈ ಪುಟ್ಟ ಮಕ್ಕಳ ಸಾಮಾಜಿಕ ಜಾಗೃತಿ ಹಾಗೂ ಪರಿಸರದ ಬಗ್ಗೆ ಅವರ ಚಿಂತನಶೀಲತೆಯು ರಾಜ್ಯದ ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಮನವಿಗೆ ಸರ್ಕಾರ ಸ್ಪಂದಿಸಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ.
ಈ ಸಂದರ್ಭದಲ್ಲಿ ವರಣಿಕಾ, ಮೀನಾ, ಋಷಿಕೇಷ್ ಶ್ರಿಕಂಠ ಧನ್ನಸ್ಸು ಹಾಜರಿದ್ದರು.
ಬಾಲಕಿಯ ಪತ್ರಕ್ಕೆ ಶಾಸಕರು ಸ್ಪಂದನೆ:
ಹನೂರು ಶಾಸಕ ಎಂ. ಆರ್. ಮಂಜುನಾಥ್
ಪ್ರತಿಕ್ರಿಯಿಸಿ “ಬಾಲಕಿ ಪತ್ರ ಬರೆದ ವಿಚಾರ ನನ್ನ ಗಮನಕ್ಕೂ ಬಂದಿದೆ. ಹಿಂಗಾರು ಮಳೆಯು ವಾಡಿಕೆಗಿಂತ ಶೇ.40 ರಷ್ಟು ಕಡಿಮೆ ಬಿದ್ದಿರುವುದರಿಂದ ನೀರಿನ ತತ್ವಾರ ಉದ್ಭವಿಸಿದೆ” ಎಂದರು.
ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಕಳುಹಿಸಿ ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸೂಚಿಸಿದ್ದೇನೆ. ಉಡುತೊರೆ ಹಳ್ಳದಿಂದ- ಆಲೇರಿ ಕೆರೆಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಕ್ರಮ ವಹಿಸಿದ್ದೇನೆ” ಎಂದರು.
