ಚಾಮರಾಜನಗರ.ಆ.7: ಎಸ್ಸಿ ಎಸ್ಟಿ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನೇ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.
ಗುರುವಾರ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ನನಗು ಫ್ರೀ, ನನ್ನ ಹೆಂಡ್ತಿಗು ಫ್ರೀ.. ಕಾಕಾ ಪಾಟೀಲ್ಗು ಫ್ರೀ.. ಮಹದೇವಪ್ಪನಿಗು ಫ್ರೀ ಅಂತ ಸಿದ್ದರಾಮಯ್ಯ ಹೇಳಿದ್ರು ಆದರೆ ಈಗ
ಸಿದ್ದರಾಮಯ್ಯಗೆ ಫ್ರೀ ಆಯ್ತು, ಅವರ ಹೆಂಡ್ತಿಗು ಫ್ರೀ ಆಯ್ತು, ಕಾಕಾ ಪಾಟೀಲ್ಗು ಫ್ರೀ ಆಯ್ತು, ಆದ್ರೆ ಮಹದೇವಪ್ಪನಿಗೆ ಎಲ್ಲಿ ಫ್ರೀ ಆಯ್ತು? ಎಂದು ವ್ಯಂಗ್ಯವಾಡಿದ್ದಾರೆ.
ಖಜಾನೆಯಿಂದ ಗ್ಯಾರಂಟಿ ಯೋಜನೆಗೆ ಹಣ ಕೊಡಬೇಕು. ಆದರೆ ಬೇರೆ ವರ್ಗಗಳ ಖಜಾನೆಯಿಂದ ಕೊಡ್ತಿದ್ದಾರೆ. ಎಸ್ಸಿ ಎಸ್ಟಿ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲೇ ಗ್ಯಾರಂಟಿಗೆ ಬಳಕೆ ಯಾಕೆ ಮಾಡ್ತಿದ್ದಿರಾ, ಇದು ಎಸ್ಸಿ ಎಸ್ಟಿ ವರ್ಗಗಳಿಗೆ ಬಗೆದ ದ್ರೋಹ ಅಲ್ವಾ? ಎಂದು ಪ್ರಶ್ನಿಸಿದರು.
ಎಸ್ಸಿ ಎಸ್ಟಿ ವರ್ಗದ ಅಭಿವೃದ್ಧಿಗೆ 42 ಸಾವಿರ ಕೋಟಿ ಘೋಷಣೆ ಮಾಡಿದ್ದರು ಕೂಡ ನಿಗಮಗಳಿಗೆ ಒಂದು ನಯಾ ಪೈಸೆ ಕೊಟ್ಟಿಲ್ಲ. ಹೀಗೆ ವಂಚನೆ ಮಾಡುತ್ತಿದ್ದರೂ ಹಲವಾರು ದಲಿತ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ. ಕಾಂಗ್ರೆಸ್ ಏನೆ ತಪ್ಪು ಮಾಡಿದರು ಅದರ ಜೊತೆ ಇರ್ತೇವೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿವೆ. ಆ ಕಾರಣಕ್ಕಾಗಿಯೇ ನಾವು ಧ್ವನಿ ಎತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.
