ಡಿಸಿಸಿ ಬ್ಯಾಂಕ್ಗೆ 36.75 ಕೋ. ರೂ ಲಾಭ, 1690 ಕೋ.ರೂ ಠೇವಣಿ ಸಂಗ್ರಹ: ಆರ್. ಎಂ ಮಂಜುನಾಥಗೌಡ
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ( ಎಸ್ಡಿಸಿಸಿ) 2024-25ನೇ ಸಾಲಿನಲ್ಲಿ
36.75ಕೋಟಿ ರೂ. ಲಾಭಗಳಿಸಿದ್ದು ಇತಿಹಾಸದಲ್ಲೆ ದಾಖಲೆಯ ಲಾಭಾಂಶ ಇದಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಆರ್. ಎಂ ಮಂಜುನಾಥಗೌಡ ಅವರು ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದರು.
ಬ್ಯಾಂಕ್ ಸ್ಥಾಪನೆಯಾಗಿ 73ನೇ ವರ್ಷಕ್ಕೆ ಕಾಲಿಟ್ಟಿದ್ದು, ಬ್ಯಾಂಕಿನ ಇತಿಹಾಸದಲ್ಲಿಯೇ ಅತೀ ಹೆಚ್ಚು ಲಾಭ ಗಳಿಸಿದ ಕೀರ್ತಿ ಇದಾಗಿದ್ದು, ಮುಂದಿನ ವರ್ಷ ೪೫ ಕೋಟಿ ರೂ. ಲಾಭದ ಗುರಿ ಹೊಂದಲಾಗಿದೆ. ಡಿಸಿಸಿ ಬ್ಯಾಂಕ್ ತನ್ನ ಆರ್ಥಿಕ ಚಟುವಟಿಕೆಗಳ ಸಾಧನೆಗಾಗಿ ಅಪೆಕ್ಸ್ ಬ್ಯಾಂಕ್ ನಿಂದ ಉತ್ತಮ ಡಿಸಿಸಿ ಬ್ಯಾಂಕ್ ಪ್ರಶಸ್ತಿಯನ್ನು ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 1690.17 ಕೋಟಿ ಠೇವಣಿ ಸಂಗ್ರಹಿಸಿದ್ದು, ಮುಂದಿನ ಸಾಲಿಗೆ 2000 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ 3221.8 ಕೋಟಿ ವಾರ್ಷಿಕ ವ್ಯವಹಾರ ನಡೆದಿದೆ. ಇದು ನಬಾರ್ಡಿನ ಪರಿವೀಕ್ಷಣಾ ವರದಿಯಲ್ಲಿಯೇ ‘ಎ’ದರ್ಜೆ ಪಡೆದಂತ್ತಾಗಿದೆ. ಒಟ್ಟು 26,71,156 ಗ್ರಾಹಕರಿದ್ದು 1,41,454 ಠೇವಣಿದಾರರಿದ್ದಾರೆ. ಅದರಲ್ಲಿ12 ಲಕ್ಷಕ್ಕೂ ಹೆಚ್ಚು ಗ್ರಾಹಕರು ಸಾಲ ಪಡೆದಿದ್ದಾರೆ. ನಬಾರ್ಡಿನ ಪುನರ್ಧನ ಸೌಲಭ್ಯ ಈಗಾಗಲೇ ಸಾಕಷ್ಟು ಕಡಿತಗೊಂಡಿದೆ. ಕೇವಲ ಶೇ.10 ರಷ್ಟು ಮಾತ್ರ ನೀಡಲಾಗುತ್ತಿದೆ. ಅದನ್ನೂ ನಿಲ್ಲಿಸಬಹುದಾಗಿದೆ. ಹಾಗಾಗಿ ಜಿಲ್ಲಾ ಬ್ಯಾಂಕುಗಳು ಸ್ವಯತ್ತತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ ಇದರ ಮಧ್ಯೆಯೂ ಕೂಡ ೧೦,೮೫,೦೦ ರೈತರಿಗೆ ೧೨೦೬.೬೦ ಕೋಟಿ ಬೆಳೆ ಸಾಲ ನೀಡಲಾಗಿದ್ದು, ರೈತರ ಸಾಲಕ್ಕೆ ಈಗ ಹೊಸದಾಗಿ ಯೋಜನೆಯೊಂದನ್ನು ರೂಪಿಸಿದ್ದು, 1 ಲಕ್ಷ ರೂ. ಸಾಲಕ್ಕೆ 720 ರೂ. ವಿಮೆ ಕಟ್ಟಬೇಕು. ಆಕಸ್ಮಾತ್ ಸಾಲ ಪಡೆದವರು ತೀರಿಹೋದರೆ ಈ ಸಾಲ ಕಟ್ಟುವ ಅವಶ್ಯಕತೆ ಇಲ್ಲ. ವಿಮೆ ಇಲ್ಲದಿದ್ದರೆ ಅವರ ಮನೆಯವರು ಕಟ್ಟಬೇಕಾಗುತ್ತಿತ್ತು. ಈ ವಿಮಾ ಯೋಜನೆ ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ವಿವರಿಸಿದರು.
ಕೃಷಿಯೇತರ ಸಾಲಗಳಿಂದ ಬ್ಯಾಂಕಿಗೆ ಹೆಚ್ಚು ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ಶಾಖೆಗಳ ಮೂಲಕ 17.202 ವ್ಯಕ್ತಿಗಳಿಗೆ 771.12 ಕೋಟಿ ರೂ. ಸಾಲ ನೀಡಲಾಗಿದೆ. ಆಧುನಿಕತೆಗೆ ತಕ್ಕಂತೆ ಬ್ಯಾಂಕಿನ ವ್ಯವಹಾರಗಳು ಕೂಡ ಬದಲಾವಣೆಯಾಗುತ್ತಿದ್ದು, ಇದೀಗ ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯನ್ನು ಮುಟ್ಟಿಸಲಾಗುವುದು. ಇದಕ್ಕಾಗಿ ಮೊಬೈಲ್ ವ್ಯಾನ್ನಲ್ಲಿ ಎಟಿಎಂ ಬಳಸಲಾಗಿದೆ. ಈ ವ್ಯಾನ್ ಹಳ್ಳಿಗಳಲ್ಲಿ ಸಂಚರಿಸುತ್ತದೆ. ಒಂದು ವ್ಯಾನಿನ ಜೊತೆಗೆ ಈಗ ಮತ್ತೊಂದು ವ್ಯಾನನ್ನು ನೀಡಲಾಗುವುದು. ಇದರ ಜೊತೆಗೆ ಬ್ಯಾಂಕಿಂಗ್ ಮೊಬೈಲ್ ಆಪನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ಗ್ರಾಹಕರು ತಮ್ಮ ವ್ಯವಹಾರಗಳನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಮಾಡಬಹುದಾಗಿದೆ. ಇದರ ಜೊತೆಗೆ ನೆಫ್ಟ್ ಮತ್ತು ಆರ್ಟಿಜಿಎಸ್ ವ್ಯವಹಾರಗಳನ್ನು ಕೂಡ ಮಾಡಬಹುದಾಗಿದೆ ಎಂದು ಮಂಜುನಾಥಗೌಡ ತಿಳಿಸಿದರು.
ಸರ್ಕಾರದ ಏಳನೇ ವೇತನ ಆಯೋಗವನ್ನು ಮೊದಲಬಾರಿಗೆ ಡಿಸಿಸಿ ಬ್ಯಾಂಕಿನ ನೌಕರರಿಗೆ ಜಾರಿ ಮಾಡಲಾಗಿದೆ. ಹಾಗಾಗಿ ಸರ್ಕಾರದ ಉದ್ದೇಶವನ್ನು ಕೂಡ ನಾವು ಈಡೇರಿಸುತ್ತಿದ್ದೇವೆ. ಇದರ ಜೊತೆಗೆ ಸರ್ಕಾರದ ಷೇರುಗಳನ್ನು ಕೂಡ ವಾಪಾಸ್ಸು ಮಾಡಲಾಗುವುದು. ಸರ್ಕಾರದ ಹಸ್ತಕ್ಷೇಪ ಸಹಕಾರಿ ಕ್ಷೇತ್ರಕ್ಕೆ ಇರಬಾರದು ಎಂಬ ಉದ್ದೇಶ ನಮ್ಮದು ಎಂದರು.
ಬ್ಯಾಂಕಿನ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಸೆ.೧೦ರಂದು ಬಂಜಾರ ಭವನದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಉತ್ತಮ ಸಹಕಾರ ಸಂಘಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರುಗಳಾದ ಮಹಾಲಿಂಗಶಾಸ್ತ್ರೀ, ಜಿ.ಎನ್. ಸುಧೀರ್, ಬಸವರಾಜ್, ಕೆ.ಪಿ. ದುಗ್ಗಪ್ಪಗೌಡರು, ಚಂದ್ರಶೇಖರ್, ಪರಮೇಶ್ವರ್, ಹೆಚ್.ಎಸ್. ರವೀಂದ್ರ, ಕೆ.ಪಿ. ರುದ್ರೇಗೌಡ, ಎಂ.ಡಿ. ರಾಜಣ್ಣರೆಡ್ಡಿ ಉಪಸ್ಥಿತರಿದ್ದರು.
