ಶಿವಮೊಗ್ಗ,ಮಾ.4 : ಕುವೆಂಪು ವಿಶ್ವವಿದ್ಯಾನಿಲಯದ ಮಾನವ ಸಂಪನ್ಮೂಲ ವಿಭಾಗದ ಉಪ ಕುಲಸಚಿವ ಹುದ್ದೆಗೆ ಎಂ.ಚಂದ್ರಕಾಂತ್ ಅವರನ್ನು ನೇಮಕ ಮಾಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ವರಲಕ್ಷ್ಮಿ ಪ್ರಕಾಶ್ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ವಿವಿ ವಿವಿಧ ಸಮಸ್ಯೆ ಹಾಗೂ ಆರೋಪಗಳನ್ನು ಎದುರಿಸುತ್ತಿದ್ದು ಇಂತಹ ಸನ್ನಿವೇಶದಲ್ಲಿ ಪ್ರಭಾರ ಕುಲಸಚಿವರನ್ನು ಏ.1ರಂದು ತರಾತುರಿಯಲ್ಲೇನೋ ಎಂಬಂತೆ ಹೊರಡಿಸಿರುವ ಜ್ಞಾಪನಾ ಪತ್ರವು ಭಾರೀ ಚರ್ಚೆಗೆ ಗ್ರಾಸವಾಗಿದೆ ಎಂದರು.
ದಶಕಗಳ ಹಿಂದೆ ಹುದ್ದೆ ಖಾಯಂಮಾತಿ ರದ್ದುಪಡಿಸಲು ಆದೇಶವಾಗಿದ್ದರೂ ಸಹ ಕರ್ತವ್ಯದಲ್ಲಿ ಮುಂದುವರಿಯುತ್ತಿರುವ ಎಂ.ಚಂದ್ರಕಾಂತ್ ಅವರನ್ನು ಕುಲಪತಿಗಳ ಆದೇಶದ ಮೇರೆಗೆ ಪ್ರಭಾರ ಕುಲಸಚಿವರು ಮಾನವ ಸಂಪನ್ಮೂಲ ಮತ್ತು ನಿರ್ವಹಣಾ ವಿಭಾಗದ ಉಪಕುಲಸಚಿವ ಹುದ್ದೆಗೆ ಅಂತರಿಕ ಬದಲಾವಣೆ ಮಾಡಿರುವುದು ಖಂಡನೀಯ ಎಂದರು.
ರಾಜ್ಯ ಸರ್ಕಾರವು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಎನ್.ಹೇಮಂತ್ಕುಮಾರ್ ಅವರನ್ನು ವಿವಿಯ ಪ್ರಭಾರ ಕುಲಸಚಿವರ ಹುದ್ದೆಗೆ ನಿಯೋಜಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾ.30ರಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಹೇಮಂತ್ಕುಮಾರ್ ಅವರ ಕೈ ತಲುಪಿ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ತರಾತುರಿಯಲ್ಲಿ ಉಪಕುಲಸಚಿವ ಹುದ್ದೆಗೆ ಮತ್ತೆ ಎಂ.ಚಂದ್ರಕಾಂತ್ ಅವರನ್ನು ನೇಮಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಎಂ.ಚಂದ್ರಕಾಂತ್ ಅವರು ಭ್ರಷ್ಟಾಚಾರ ಹಾಗೂ ಹಲವಾರು ಆರೋಪಗಳಿದ್ದು, ಈಗಾಗಲೇ ಇಲಾಖಾ ತನಿಖೆಯನ್ನು ಎದುರಿಸುತ್ತಿದ್ದು, ಆಯಾಕಟ್ಟಿನ ಜಾಗಕ್ಕೆ ಬಂದಿದ್ದ ದಿಟ್ಟ ಅಧಿಕಾರಿ ಎಂದೇ ಹೆಸರಾಗಿರುವ ಜಿಪಂ ಸಿಇಓ ಹೇಮಂತ್ಕುಮಾರ್ ಅವರು ಪ್ರಭಾರ ರಿಜಿಸ್ಟ್ರಾರ್ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ಈ ಬಗ್ಗೆ ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೂಪಾ ಸತೀಶ್, ಲಕ್ಷ್ಮಿ, ಮೊಹಮ್ಮದ್ ಅಯೂಬ್ ಖಾನ್, ಭಾಗ್ಯ ಪಿ.ಗೌಡ. ಉಪಸ್ಥಿತರಿದ್ದರು.
