ಶಿವಮೊಗ್ಗ,ಏ.7 : ಡಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಹಾಗೂ ಶಿವಮೊಗ್ಗದ ಪಂಚತಾರ ಐಸ್ಕ್ರೀಮ್ಸ್ ಪಾರ್ಲರ್ ಇವರ ಸಹಯೋಗದಲ್ಲಿ ಏ.9 ಸಂಜೆ 5.30 ಕ್ಕೆ ನಗರದ ಕುವೆಂಪುರಂಗಮಂದಿರದಲ್ಲಿ ಇದೇ ಮೊದಲ ಬಾರಿಗೆ “ನಾಮಾಮೃತ” ಎಂಬ ವಿಶೇಷ ಭಜನೆ ಮತ್ತು ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ವಿನಯ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸುವರು. ಈ ಸುಶ್ರಾವ್ಯ ಸಂಗೀತ ಸಂಜೆಯಲ್ಲಿ ಪ್ರಸಿದ್ಧ ಗಾಯಕಿ ಶಿವಶ್ರೀ ತೇಜಸ್ವಿಸೂರ್ಯ ಅವರು ತಮ್ಮ ಕಂಠಸಿರಿಯಿಂದ ಭಕ್ತಿ ಸುಧೆಯನ್ನು ಹರಿಸಲಿದ್ದಾರೆ. ಅವರಿಗೆ ಸಹ ಗಾಯನದಲ್ಲಿ ಜಿ. ಸ್ಕಂದಪ್ರಸಾದ್ ಅವರು ಸಾಥ್ ನೀಡಲಿದ್ದಾರೆ.
ವಾದ್ಯ ವೃಂದದಲ್ಲಿ ಪರಿಣಿತ ಕಲಾವಿದರು ಭಾಗವಹಿಸಲಿದ್ದಾರೆ, ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಎರಡು ಕನಸು ಕನ್ನಡ ಚಲನಚಿತ್ರದಲ್ಲಿ ಶಿವಶ್ರೀ ತೇಜಸ್ವಿಸೂರ್ಯ ಹಾಡಿದ ‘ಪೂಜಿಸಲೆಂದೆ ಹೂಗಳ ತಂದೆ ಗೀತೆಯನ್ನು ಮೆಚ್ಚಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಎಂದರು.
ಹಾರ್ಮೋನಿಯಂ: ಗೌರವ್ ಗಡಿಯಾರ್ ಮೃದಂಗ: ಅನಿರುದ್ಧ್ ಭಟ್, ತಬಲಾ: ಪ್ರದ್ಯುಮ್ನ ಕಪೂರ್ ನುಡಿಸಲಿದ್ದಾರೆ. ಗಾಯನವು ಸಂಜೆ 5.30 ರಿಂದ 8.30 ರವರೆಗೆ ಸುಮಾರು 3 ಗಂಟೆಗಳ ಕಾಲ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಡಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಪ್ರಕಾಶ್ಪ್ರಭು, ನೀತಾಪ್ರಭು, ಪ್ರೀತಿ ನಾಯ್ಕ ಇದ್ದರು.
