ಶಿವಮೊಗ್ಗ, ಏ.9: ಏ.3 ರಂದು ರಾಜ್ಯದ 20 ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ಮಾಲ್ಗಳಲ್ಲಿ ಬಿಡುಗಡೆಗೊಂಡಿರುವ ನಾನು ಕರುಣಾಕರ್ ಎಂಬ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಪ್ರದರ್ಶನಗೊಂಡ ಎಲ್ಲಾ ಶೋಗಳು ಹೌಸ್ಫುಲ್ ಆಗುತ್ತಿದೆ ಎಂದು ಚಿತ್ರದ ನಿರ್ಮಾಪಕ ನಮನ್ನಾರಾಯಣ್ ಸಂತೋಷ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ ಪಾಪ್ಕಾರ್ನ್ ಸಿನಿಮಾ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಒಬ್ಬ ತಂದೆ ಮತ್ತು ಮಗನ ಬಾಂಧವ್ಯದ ಕುರಿತಾದ ಸಿನಿಮಾ ಎಂದರು.
ಗಮನಿಸಿ: ವಾಹನಗಳ ಬಹಿರಂಗ ಹರಾಜು
ಒಬ್ಬ ಕೆಳ ಮಧ್ಯಮ ವರ್ಗದ ತಂದೆ, ತನ್ನ ಮಗನ ಆಸೆಯನ್ನು ಪೂರೈಸಲು ಯಾವ ರೀತಿಯ ಕಷ್ಟಗಳನ್ನು ಅನುಭವಿಸುತ್ತಾನೆ. ಯಾವ ರೀತಿ ತ್ಯಾಗಗಳನ್ನು ಮಾಡುತ್ತಾನೆ ಎಂಬುದನ್ನು ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಹೆಣೆದಿರುವ ಚಿತ್ರ ಇದಾಗಿದೆ ಎಂದರು.
ಇವತ್ತಿನ ಕಾಲಘಟ್ಟದಲ್ಲಿ ಈ ಚಿತ್ರವನ್ನು ನೋಡುವ ಅನಿವಾರ್ಯತೆ ಇದೆ. ಏಕೆಂದರೆ ಇವತ್ತಿನ ಕುಟುಂಬಗಳಲ್ಲಿ, ಸಂಬಂಧಗಳಲ್ಲಿ ಬಾಂಧವ್ಯದ ಕುರಿತಾದ ಭಾವನೆಗಳು ಬದಲಾಗುತ್ತಿದೆ. ಮತ್ತು ಅದರ ಮೇಲಿನ ಒಲವು ಕೂಡಾ ಕಡಿಮೆಯಾಗುತ್ತಿದೆ. ಈ ಚಿತ್ರದ ಮುಖಾಂತರ ಅದೆಲ್ಲವುದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.
ಈ ಚಿತ್ರದ ನಾಯಕ ನಟಿ ರಾಧಾ ಭಾಗವತಿ ಕಿರುತೆರೆಯ ನಟಿಯಾಗಿದ್ದು, ಅಮೃತಧಾರೆ ಮತ್ತು ಭಾರ್ಗವಿ ಎಲ್ಎಲ್ಬಿ ಧಾರಾವಾಹಿಯಲ್ಲಿ ಮಿಂಚಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಭಾರತ್ ಸಿನಿಮಾಸ್ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, 14 ವರ್ಷದೊಳಗಿನ ಮಕ್ಕಳಿಗೆ ಶೇ.50 ರಷ್ಟು ರಿಯಾಯಿತಿಯಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡುವ ಅವಕಾಶವಿದೆ. ಈ ಸೌಲಭ್ಯ ಏ.19 ರವರೆಗೆ ಸಿಗಲಿದೆ. ಮಕ್ಕಳ ಜೊತೆಗೆ ಪೋಷಕರು ಕೂಡಾ ಬರಲೇಬೇಕು ಎಂದರು.
ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಆರ್ಯನ್ ತೇಜಸ್ ಮಾತನಾಡಿ, ಇದು ನನ್ನ ೨ನೇ ಚಿತ್ರ. ರಂಗಭೂಮಿ ಹಿನ್ನೆಲೆಯಿಂದ ಸಿನಿಮಾ ಪ್ರಪಂಚಕ್ಕೆ ಬಂದಿದ್ದು, ನಾಯಕ ನಟನಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಬಿಡುಗಡೆಗೊಂಡ ಎಲ್ಲಾ ಕಡೆಗಳಲ್ಲಿ ತುಂಬಾ ಸಂತೋಷವಾಗಿದೆ. ಶಿವಮೊಗ್ಗದ ಜನರು ಬೆಂಬಲಿಸಿದರೆ ಮುಂದೆ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಮಾಡುವ ಅಭಿಲಾಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಜು, ವಿನಯ್, ಅನಿಲ್ ಉಪಸ್ಥಿತರಿದ್ದರು.
