ಶಿವಮೊಗ್ಗ,ಏ.28: ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ಮಾಡಿರುವುದಕ್ಕೆ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾ ಘಟಕ ಸ್ವಾಗತಿಸಿದೆ.
ರಾಜ್ಯ ಸರ್ಕಾರವು ವಿಶೇಷ ಸಂಪುಟ ಸಭೆಯಲ್ಲಿ ಕೈಗೊಂಡ ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ನಿರ್ಧಾರವನ್ನು ಸಮಸ್ತ ಮಾದಿಗ ಸಮುದಾಯದ ಪರವಾಗಿ ಸ್ವಾಗತ್ತಿಸುತ್ತೇನೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಶಿವಾಜಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಳಮೀಸಲಾತಿ ಹೋರಾಟ ಅಂತಿಮವಲ್ಲ, ಇದು ಹೋರಾಟದಲ್ಲಿನ ಆರಂಭದ ಪ್ರತಿಫಲ ಅಷ್ಟೆ. ಮಾದಿಗ ಸಮಾಜದ ಜನಸಂಖ್ಯೆ ಅನುಗುಣವಾಗಿ ಮತ್ತು ಶತ ಶತಮಾನಗಳಿಂದ ಹಿಂದುಳಿದಿರುವಿಕೆಯ ಆಧಾರದ ಮೇಲೆ ಎಲ್ಲದರಲ್ಲೂ ಅಂದರೆ ಶಿಕ್ಷಣ, ಉದ್ಯೋಗ, ರಾಜಕೀಯವಾಗಿ ಪ್ರಾಥಮಿಕ ಒಳಮೀಸಲಾತಿ ಸಿಗುವವರೆಗೂ ಹಾಗೂ ಮಾದಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಮಗೆ ಸಂವಿಧಾನ ಬದ್ಧವಾಗಿ, ನ್ಯಾಯಬದ್ಧವಾಗಿ ಸಿಗಬೇಕಾದ ಎಲ್ಲಾ ಹಕ್ಕುಗಳನ್ನು ಪಡೆಯುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದರು.
ಮಾದಿಗ ಸಮಾಜವು 35-40 ವರ್ಷಗಳ ಹೋರಾಟ ಹಾಗೂ ಹುಬ್ಬಳ್ಳಿಯಲ್ಲಿ ಮಾದಿಗ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡು ಹಿಂದಿರುಗುವ ಸಂದರ್ಭದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮಾದಿಗ ಸಮಾಜದ ಸೇನಾನಿಗಳ ಪ್ರಾಣ ಬಲಿದಾನವನ್ನು ಸ್ಮರಿಸುತ್ತಾ ಸರ್ಕಾರವು ಅವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಗಮನಿಸಿ:ಬಿರುಗಾಳಿ-ಮಳೆ ಹಾನಿ ಪ್ರದೇಶಗಳಿಗೆ ಭೇಟಿ : ತ್ವರಿತ ಪರಿಹಾರ ಕ್ರಮಕ್ಕೆ ಸಚಿವರು ಸೂಚನೆ
ಹೋರಾಟದ ಫಲವಾಗಿ ನಮ್ಮ ಸಮುದಾಯಕ್ಕೆ ಸಿಕ್ಕ ಗೆಲುವು ಶೇ.15ರಲ್ಲಿ ಗ್ರೂಪ್-ಎ ಶೇ.5.25, ಮಾದಿಗ ಮತ್ತು ಉಪಜಾತಿಗಳ ಗ್ರೂಪ್-ಬಿ ಶೇ.5.25, ಛಲವಾದಿ ಮತ್ತ ಉಪಜಾತಿಗಳು ಹಾಗೂ ಗ್ರೂಪ್-ಸಿ ಶೇ.4.5 ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮೂಲ ನಿವಾಸಿಗಳಾದ ನಾವು ಅಸ್ಪೃಶ್ಯರೆಂದರೆ ಮಾದಿಗ ಸಮಾಜವನ್ನು ತೋರಿಸುತ್ತಿದ್ದ ಕಾಲದಿಂದಲೂ ಇಲ್ಲಿಯವರೆಗೂ ಅಸ್ಪೃಶ್ಯರಂತೆ ಸಮಾಜ ಉಳಿದಿದೆ. ಮಾದಿಗ ಸಮಾಜಕ್ಕೆ ಅನ್ಯಾಯದ ಪ್ರತಿಫಲವಾಗಿ ಹೋರಾಟ ಮಾಡುತ್ತಾ ಬಂದಿದ್ದ ನಮ್ಮ ಸಮಾಜದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ, ಎ.ನಾರಾಯಣ ಸ್ವಾಮಿ, ಗೋವಿಂದ ಎಂ. ಕಾರಜೋಳ, ಹೆಚ್.ಆಂಜನೇಯ. ಬಿ.ಎನ್.ಚಂದ್ರಪ್ಪ, ಎಲ್. ಹನುಮಂತಪ್ಪ, ಎ. ಮುನಿಯಪ್ಪ, ಹನುಮಂತರಾಯಪ್ಪ, ಸಮಾಜದ ಮಾದಾರ ಚನ್ನಯ್ಯ ಮಹಾಪೀಠದ ಸ್ವಾಮೀಜಿಗಳು ಹಾಗೂ ಒಳಮೀಸಲಾತಿಗೆ ಹೋರಾಟ ಮಾಡಿದ ಎಲ್ಲಾ ಸಮಾಜ ಬಾಂಧವರಿಗೆ ಅಭಿನಂದಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೇಜಸ್ ರಾಮಚಂದ್ರ, ಸೂಲಪ್ಪ, ಅಣ್ಣಪ್ಪ, ಪ್ರವೀಣ್ ಹರಮಘಟ್ಟ, ಜಗದೀಶ್ ಬೋಜಪ್ಪ, ಗಾಜನೂರು ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು
