ಶಿವಮೊಗ್ಗ ,ಮೇ.5 : ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಣುವಿದ್ಯುತ್ ಸ್ಥಾವರವನ್ನು ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗ ತೀವ್ರವಾಗಿ ವಿರೋಧಿಸುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವಾದ ಈ ಭಾಗದಲ್ಲಿ ಭೂಮಿಯಲ್ಲಿ ಬೃಹತ್ ಯೋಜನೆಗಳನ್ನು ಹೊರುವ ಧಾರಣ ಸಾಮರ್ಥ್ಯವಿಲ್ಲ. ಪಂಪ್ಡ್ ಸ್ಟೋರೇಜ್, ಚಕ್ರಾ, ವರಾಹಿ, ಲಿಂಗನಮಕ್ಕಿ, ಹಿರೇಭಾಸ್ಕರ, ಮೇಲೇನೂರು, ಸಾವೇಹಕ್ಲು, ಮಾಣಿ ಜಲಾಶಯದಂತಹ ಪರಿಸರ ಮಾರಕ ಯೋಜನೆಗಳು ಜಾರಿಗೊಂಡಿದ್ದು, ಈಗ ಸಾಗರ ಸಮೀಪದ ಬೇಸೂರಿನಲ್ಲಿ ಎನ್ಟಿಪಿಎಲ್ ಮಾರಕ ಅಣು ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂಬ ಅಧಿಕೃತ ಮಾಹಿತಿ ದೊರೆತ್ತಿದೆ. ಇದಕ್ಕೆ ಅನುಮತಿ ನೀಡುವುದರ ಮೂಲಕ ಜಿಲ್ಲಾಡಳಿತ ತನ್ನ ಬೆಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಮನಿಸಿ:ಹಲ್ಮೆಟ್ ಧರಿಸುವುದಿಲ್ಲವೆಂದ ಸವಾರ- ಪೊಲೀಸರಿಂದ ಕಠಿಣ ಶಿಕ್ಷೆ
ಕಳೆದ ಫೆ.6 ರಂದು ಎನ್ಟಿಪಿಸಿ ಸಂಸ್ಥೆಯ ನಿರ್ದೇಶನದಂತೆ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದು ಪರಮಾಣು ಸ್ಥಾವರನ್ನು ಸ್ಥಾಪಿಸಲು ಸಂಭಾವ್ಯ ಪ್ರದೇಶಗಳ ಸೂಕ್ತತೆ ಕುರಿತು ಪ್ರಾಥಮಿ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿರುತ್ತಾರೆ ಎಂದ ನಿಖರ ಮಾಹಿತಿ ಲಭ್ಯವಾಗಿದೆ ಎಂದರು.
ಬೇಸೂರಿನಲ್ಲಿ 3190 ಎಕರೆ ಜಮೀನು ಲಭ್ಯತೆ ಇದೆ ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಅಣುಸ್ಥಾವರ ಯೋಜನೆಗೆ ರಾಯಚೂರು, ವಿಜಯನಗರ, ಕೊಪ್ಪಳ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಮ್ಮಲ್ಲಿ ಭೂಮಿ ಇಲ್ಲ. ಮಾಲಿನ್ಯ ಉಂಟು ಮಾಡುವ, ಅಣುಸ್ಥಾವರದ ಅಣು ವಿಕೇಂದ್ರೀಕರಣದಿಂದ ಆಗುವ ಹಾನಿ ಹಾಗೂ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಬಾರದೆಂದು ಸಾರ್ವಜನಿಕರು, ಪರಿಸರ ವಾದಿಗಳು, ಧರಣಿ, ಮುಷ್ಕರ ನಡೆಸುತ್ತಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವಾಗ ನಮ್ಮ ಜಿಲ್ಲಾಧಿಕಾರಿಗಳಿಗೆ ಏನಾಗಿದೆ ? ಜಾಗ ಇದೆ ಎಂದು ತಿಳಿಸುವುದರ ಮರ್ಮವೇನು ? ಇಂತಹ ಮಾರಕ ಯೋಜನೆಗಳು ಬೇಡ ಎಂದು ಜಲ್ಲಾಧಿಕಾರಿಗಳು ಏಕೆ ಹೇಳುತ್ತಿಲ್ಲ ಎಂದು ಗುಡುಗಿದ ಅವರು, ಇಲ್ಲಿಯ ಜನ ಧಂಗೆ ಏಳುವುದನ್ನು ಜಿಲ್ಲಾಧಿಕಾರಿಗಳು ಇಷ್ಟಪಡುತ್ತಿದ್ದಾರೆಯೇ ? ಎಂದು ಕಿಡಿಕಾರಿದರು.
ಬೇಸೂರು ಅಣುಸ್ಥಾವರ ಸ್ಥಾಪನೆಯ ಕುರಿತಂತೆ ಇಲ್ಲಿಯವರೆಗೆ ಆದ ಸಭೆಗಳ ನಡಾವಳಿಗಳನ್ನು ತೆಗೆದುಕೊಳ್ಳುತ್ತೇನೆ. ಡಿಸಿಯವರು ರಜೆಮುಗಿಸಿ ಬಂದ ಬಳಿಕ ಅವರ ಜೊತೆ ಸಭೆ ಮಾಡುತ್ತೇನೆ ಎಂದ ಅವರು, ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರು ಸೋಲಾರ್, ಪವನ ವಿದ್ಯುತ್ಗಳಿಗೆ ತಾವು ಆದ್ಯತೆ ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಪರಿಸರ ಮಾರಕವಲ್ಲದ ಯೋಜನೆಗಳನ್ನು ಜಾರಿಗೆ ತರಲು ಎಲ್ಲಾ ಜಿಲ್ಲಾಡಳಿತಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ.ಶೇಖರ್ಗೌಳೇರ್, ಪರಿಸರ ರಮೇಶ್, ಪ್ರಕಾಶ್, ಮಹಾದೇವ ಸ್ವಾಮಿ, ಶ್ರೀಕಾಂತ್, ಎಸ್.ಬಿ.ಅಶೋಕ್ಗಾಂಧಿ, ಹರೀಶ್ಕಾರ್ಣೀಕ್, ವಿ.ರಾಜು, ಜನಾರ್ಧನ್ ಪೈ, ಸುಬ್ರಹ್ಮಣ್ಯ, ನವ್ಯಶ್ರೀ ನಾಗೇಶ್ ಮೊದಲಾದವರು ಇದ್ದರು.
