ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.6
ಸುಮಾರು 150 ವರ್ಷಗಳಷ್ಟು ಹಳೆಯದಾಗಿರುವ ತುಂಗಾ ಸೇತುವೆ ಶಿಥಿಲವಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ 40 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಇದಕ್ಕಾಗಿ ಸಹಕರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಿಶೇಷ ಅಭಿನಂದನೆಗಳು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019 ರಲ್ಲಿ ಸುರಿದ ಮಳೆಯಿಂದ ಶಿವಮೊಗ್ಗ ನಗರ ಅನೇಕ ಸಮಸ್ಯೆ ಎದುರಿಸಿತು. ಈ ವೇಳೆ ಬಿರುಕು ಬಿಟ್ಟಿದ ಹಳೆ ಸೇತುವೆ ಎಲ್ಲಿ ಬಿಳುತ್ತದೆ ಎಂದು ಆತಂಕ ಇತ್ತು. ಈ ಕಾರಣದಿಂದ
ಅಲ್ಲಿ ಭಾರೀ ವಾಹನ ಬಿಡಬಾರದು ಎಂದು ಅವತ್ತೇ ನಿರ್ಧಾರ ಆಗಿದ್ದು, ಸತತ ಪ್ರಯತ್ನ ಮಾಡಿದ ಪರಿಣಾಮ ನಾಗರೀಕರಿಗೆ ಹೊಸ ಸೇತುವೆಯ ನಿರೀಕ್ಷೆ ಸಫಲವಾಗುವ ಸನಿಹಕ್ಕೆ ಬಂದು ನಿಂತಿದೆ ಎಂದರು.
ಗಮನಿಸಿ: ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ: ಚನ್ನಬಸಪ್ಪ ಆಕ್ರೋಶ
ಬಹಳ ಮುಖ್ಯವಾಗಿ ಶಿವಮೊಗ್ಗಕ್ಕೆ ಹೊಸ ಸೇತುವೆ ನಿರ್ಮಾಣಕ್ಕೆ ಈಗಿನ ಮತ್ತು ಆಗಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೇ ಕಾರಣ. ಅವರು ಈ ಸೇತುವೆ ನಿರ್ಮಾಣ ಸಂಬಂಧಿಸಿದಂತೆ ವಿಶೇಷ ಆಸಕ್ತಿ ವಹಿಸಿದರು. ನಾನು ಸುಮಾರು 6 ಬಾರಿ ಅವರನ್ನು ಭೇಟಿ ಮಾಡಿದ್ದು, ಸದಾ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ ಇದರ ಪರಿಣಾಮ ಹೊಸ ಸೇತುವೆ ನಿರ್ಮಾಣಕ್ಕೆ 40 ಕೋಟಿ ಬಿಡುಗಡೆ ಆಗಿದೆ ಎಂದರು.
ಯಾವುದೇ ಸರ್ಕಾರ ಇದ್ದರೂ ಕೂಡ ನಾವು ಆ ಸರ್ಕಾರದ ಜೊತೆ ಸ್ಪಂದನೆ ನಡೆಸಿದಾಗ ಮತ್ತು ಸರ್ಕಾರದ ಸಚಿವರಿಗೆ ಇಚ್ಛಾಶಕ್ತಿ ಇದ್ದಾಗ ಈ ರೀತಿಯ ಒಳ್ಳೆಯ ಕೆಲಸಗಳು ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಶಿವಮೊಗ್ಗದ ಬಗ್ಗೆ ಅಭಿಮಾನ ಇಟ್ಟುಕೊಂಡು ನನ್ನ ಮನವಿಗೆ ಸ್ಪಂದಿಸಿದ್ದಾರೆ. ಇನ್ನು 3 ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು. ಉಳಿದಂತೆ ಈಗಿರುವ ಹಳೆ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ಹೊಸ ಸೇತುವೆ ನಿರ್ಮಾಣವಾಗಿ ಶಿವಮೊಗ್ಗ ಜನರ ಕನಸು ನನಸಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ದೀನದಯಾಳ್, ನಾಗರಾಜ್, ಪ್ರಭಾಕರ್, ಮಂಜುನಾಥ್ ನವುಲೆ, ಪ್ರಭು, ಶ್ರೀನಾಗ್ ಇದ್ದರು.
