ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.6
ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆಯ ಮಾಸಿಕ ಪಿಂಚಣಿ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ. ಇದು ಬಡಜನರಿಗೆ ಮಾಡಿದ ದ್ರೋಹ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಅವರು ಮಾಧ್ಯಮಗಾರರೊಂದಿಗೆ ಮಾತನಾಡಿ, ಆದಾಯ ಮಿತಿ ಮತ್ತು ಇನ್ನಿತರ ಕಾರಣಕ್ಕಾಗಿ ಮಾನವೀಯತೆಯನ್ನು ಬಿಟ್ಟು ಬಡವರಿಗೆ ಸಿಗುತ್ತಿದ್ದ ಮಾಸಿಕ ಪಿಂಚಣಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಯಾವುದೇ ಸರ್ಕಾರ ಸಾಮಾಜಿಕ ಭದ್ರತೆಯ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತದೆ. ಆದರೆ, ಈ ಸರ್ಕಾರ ಈಗ ಸಂಧ್ಯಾ ಸುರಕ್ಷಾ, ಅಂಗವಿಕಲರು, ಅವಿವಾಹಿತೆಯರಿಗೆ ನೀಡುವ ಮನಸ್ವಿನಿ ಯೋಜನೆ, ಮಂಗಳಮುಖಿಯರಿಗೆ ಪಿಂಚಣಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದರು.
ಗಮನಿಸಿ: ರಾಜಕಾರಣದಲ್ಲಿ ಸಿದ್ದರಾಮಯ್ಯನವರ ಪ್ರಭಾವ ಇದ್ದೇ ಇರುತ್ತದೆ: ಸಿ.ಟಿ.ರವಿ
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 59,847 ಜನರಿಗೆ ಪಿಂಚಣಿ ಸ್ಥಗಿತವಾಗಿದೆ. ಶಿವಮೊಗ್ಗ ನಗರವೊಂದರಲ್ಲಿಯೇ ನಿರ್ಗತಿಕ, ಸಂಧ್ಯಾ ಸುರಕ್ಷಾ, ಹಿರಿಯ ನಾಗರಿಕ, ಅಂಗವಿಕಲ ಸೇರಿದಂತೆ ಸುಮಾರು 5603 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ. ಇದರ ಮೊತ್ತ 56 ಲಕ್ಷ ರೂ. ಆಗುತ್ತಿತ್ತು. ಮೂರು ತಿಂಗಳಿAದ ತಡೆ ಹಿಡಿಯಲಾಗಿದೆ. ಪ್ರತಿ ತಿಂಗಳು 5.98 ಲಕ್ಷ ರೂ. ಆಗುತ್ತಿತ್ತು. ಮಂಗಳಮುಖಿಯರು ಕೇವಲ 4 ಜನರಿದ್ದು, ಅವರಿಗೂ ಕೂಡ ಮಾಸಾಶನ ನಿಲ್ಲಿಸಲಾಗಿದೆ. ಇದು ಅತ್ಯಂತ ನೋವಿನ ಸಂಗತಿ ಎಂದರು.
ಪಿಂಚಣಿದಾರರ ವಾರ್ಷಿಕ ಆದಾಯ ಮಿತಿಯನ್ನು ಕೇವಲ 32 ಸಾವಿರ ರೂ.ಗೆ ನಿಗದಿಪಡಿಸಲಾಗಿದೆ. ಇದು ಅವೈಜ್ಞಾನಿಕವಾಗಿದೆ. ಅನೇಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಣ್ಣಪುಟ್ಟ ಮನೆಗಳ ದುರಸ್ತಿಗೆ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಸಂದರ್ಭದಲ್ಲಿ ಆದಾಯವನ್ನು ತಮಗೆ ಗೊತ್ತಿಲ್ಲದೇ ನೀಡಿರುತ್ತಾರೆ. ಈಗ ಅದನ್ನೇ ಇಟ್ಟುಕೊಂಡು ಯೋಜನೆಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ ಬಿಪಿಎಲ್ ಕಾರ್ಡ್ ಗಳನ್ನು ಕೂಡ ನಿಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಬಿಪಿಎಲ್ ಕಾರ್ಡ್ಗಳು ರದ್ದಾಗಿವೆ. ಇದರಿಂದ ಬಡವರಿಗೆ ಔಷಧ ಖರೀದಿಸಲು ಕೂಡ ಕಷ್ಟವಾಗುತ್ತದೆ. ಅಲ್ಲದೇ ಪಡಿತರ ವ್ಯವಸ್ಥೆ ನಿಂತಿರುವುದರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಆರ್ಥಿಕ ದಿವಾಳಿತನದ ಸಂಕೇತವೆಂಬಂತೆ ನಿರ್ಗತಿಕರ ಪಿಂಚಣಿಯನ್ನು ತಡೆಹಿಡಿಯಲಾಗಿದೆ. ಮತ್ತು ರದ್ದು ಮಾಡಲಾಗಿದೆ. ಅಲ್ಲದೇ, ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ವಿವಿಧ ಕಾರಣಗಳನ್ನು ನೀಡಿ ಅರ್ಜಿಯೇ ಸಲ್ಲಿಸದಂತೆ ತಡೆಹಿಡಿಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮನೆ ಬಾಗಿಲಿಗೆ ಮಾಸಾಶನ ಯೋಜನೆಯನ್ನೇ ರದ್ದು ಮಾಡಲಾಗಿದೆ ಎಂದರು.
ಆದಾಯ ಮಿತಿಯನ್ನು 33 ಸಾವಿರ ರೂ.ನಿಂದ 3 ಲಕ್ಷ ರೂ.ಗೆ ಏರಿಸಬೇಕಾದ ಅವಶ್ಯಕತೆ ಇದ್ದು, ಸರ್ಕಾರ ಕೂಡಲೇ ಇದನ್ನು ಪರಿಗಣಿಸಬೇಕಾಗಿದೆ. ಮತ್ತು ಈಗ ನಿಂತಿರುವ ಎಲ್ಲಾ ರೀತಿಯ ಪಿಂಚಣಿಯನ್ನು ಪುನಃ ನೀಡಬೇಕು. ಸರ್ಕಾರ ಈ ಕೂಡಲೇ ಮರುಪರಿಶೀಲನೆ ಮಾಡಬೇಕು. ಮಾನವೀಯತೆಯನ್ನು ಮರೆತ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯಬಾರದು ಎಂದರು.
