ಬಿಜೆಪಿ ಮನೆಯಲ್ಲಿ ಕಲಹ – ಕೋಲಾಹಲ
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಅವರು ಮಾತಾಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ವಿಜಯೇಂದ್ರ ಅಭಿಮಾನಿ ಪಡೆ ಡಿವಿಎಸ್ ವಿರುದ್ಧ ಮುಗಿಬಿದ್ದಿದೆ.
ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಪತ್ರಿಕಾ ಗೋಷ್ಠಿ ನಡೆಸಿ ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದರೆ, ಸಂಸದ ಶ್ರೀನಿವಾಸ್ ಪೂಜಾರಿ ಅವರು ಪಕ್ಷ ಕಟ್ಟುವಲ್ಲಿ ವಿಜಯೇಂದ್ರ ಅವರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ಬೆಂಬಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಜಯೇಂದ್ರ ಫ್ಯಾನ್, ಅಖಿಲ ಕರ್ನಾಟಕ ಲಿಂಗಾಯಿತ ಸೇನೆ ಹೆಸರಿನ ಖಾತೆಗಳು ಸೇರಿದಂತೆ ಹತ್ತಾರು ಪೇಜ್ ಗಳು
ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲಿ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ತೊಂದರೆ ಕೊಟ್ಟಂತೆ ವಿಜಯೇಂದ್ರ ಅವರಿಗೂ ತೊಂದರೆ ಕೊಡಲಾಗುತ್ತಿದೆ. ಇದು ಮುಂದುವರೆದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಪೋಸ್ಟರ್ ಗಳು ಹರಿದಾಡುತ್ತಿವೆ.
ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ “ಕಿಕ್ ಹಿಮ್ ಔಟ್” ಮಾಡಿ ಎಂದು
ಆಡಿಯೋದಲ್ಲಿ ಡಿ ವಿ ಸದಾನಂದ ಗೌಡರು ಆಡಿದ್ದಾರೆ ಎನ್ನಲಾದ ಮಾತಿಗೆ ಕೆರಳಿರುವ ವಿಜಯೇಂದ್ರ ಅಭಿಮಾನಿಗಳು ಕೇವಲ ಕೆ ಎಂ ಎಫ್ ಅಧ್ಯಕ್ಷ ಸ್ಥಾನಕ್ಕೆ ಗೋಗರೆಯು ತ್ತಿದ್ದ ನಿಮ್ಮನ್ನು ( ಸದಾನಂದ ಗೌಡ) ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪ . ಅಂತವರಿಗೆ ಬೆನ್ನಿಗೆ ಚೂರಿ ಇರಿಸಿದ್ದೀರ. “ಅಪ್ಪನಿಂದ ಅಧಿಕಾರ ಕಿತ್ಕೊಂಡ್ ತಿಂದರು . ಈಗ ಮಗನ ಪಟ್ಟ ‘ಕೀಳುವ ‘ ಚಟ.” ಎಂದು ಪೋಸ್ಟರ್ ಗಳ ಮೂಲಕ #b y vijayendra ವಿಜಯೇಂದ್ರ ಅಭಿಮಾನಿಗಳು ಡಿವಿಎಸ್ ವಿರುದ್ಧ ಕಿಡಿ ಕಾರಿದ್ದಾರೆ.
ಅಡ್ಡ ಮತದಾನದಿಂದ ಹೈರಾಣಾಗಿರುವ ಬಿಜೆಪಿಯಲ್ಲಿ ಇದೀಗ ಆಡಿಯೋ ವೈರಲ್ ನಿಂದಾಗಿ ಬಣ ರಾಜಕಾರಣ ಉಲ್ಬಣಗೊಂಡಿದೆ.
ಆಡಿಯೋದಲ್ಲಿರುವ ಮಾತುಗಳು ನನ್ನದಲ್ಲ, ಹೈಕಮಾಂಡ್ ಗೆ ಉತ್ತರಿಸುತ್ತೇನೆ ಎಂದು ಡಿವಿಎಸ್ ತಮ್ಮನ್ನು ಸಮರ್ಥಿಸಿಕೊಳ್ಳುವಲ್ಲಿ ಹೆಣಗಾಡುತ್ತಿದ್ದರೂ ಬಿಜೆಪಿ ಮನೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋದು ಬಹಿರಂಗವಾಗುತ್ತಲೇ ಇದೆ.
