ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.20
ಲೇಖನಿಯ ಮೂಲಕ ಸಮಾಜದ ಕುಂದುಕೊರತೆಗಳಿಗೆ ಚಿಕಿತ್ಸೆ ನೀಡುವ ಪತ್ರಕರ್ತರು, ರಕ್ತದಾನದ ಮೂಲಕ ಜೀವ ಉಳಿಸುವ ಸಂಕಲ್ಪ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಭದ್ರಾವತಿಯ ಲಯನ್ಸ್ ಕ್ಲಬ್ ಸಭಾಂಗಣದ ‘ಡಿ.ವಿ.ಗುಂಡಪ್ಪ ವೇದಿಕೆ’ಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ, ಹಮ್ಮಿಕೊಳ್ಳಲಾಗಿದ್ದ “ಪತ್ರಿಕಾ ದಿನಾಚರಣೆ – 2026” ಹಾಗೂ “ಬೃಹತ್ ರಕ್ತದಾನ ಶಿಬಿರ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಮೊಬೈಲ್ ಹಾಗೂ ಡಿಜಿಟಲ್ ಯುಗದಲ್ಲಿ ಸುದ್ದಿಯ ವೇಗಕ್ಕಿಂತ ಅದರ ‘ವಿಶ್ವಾಸಾರ್ಹತೆ’ ಅತ್ಯಂತ ಮುಖ್ಯವಾಗುತ್ತದೆ. ಸತ್ಯ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಯೇ ಪ್ರತಿಯೊಬ್ಬ ಪತ್ರಕರ್ತರ ಧೇಯವಾಗಬೇಕು ಎಂದು ಆಶಿಸಿದರು.

ಪತ್ರಿಕಾ ದಿನಾಚರಣೆಯ ಸವಿನೆನಪಿನಲ್ಲಿ ಪತ್ರಕರ್ತರು ಸಮಾಜಮುಖಿ ಕಾರ್ಯವಾಗಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದ್ದು, ಪತ್ರಕರ್ತರು ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜ ಉತ್ತಮ ಸಂದೇಶ ನೀಡಬೇಕು. ಉಕ್ಕಿನ ನಗರಿ ಭದ್ರಾವತಿಯ ಪ್ರಗತಿಗೆ ಹಾಗೂ ನಮ್ಮ ಭಾಗದ ಪತ್ರಕರ್ತರ ಹಿತರಕ್ಷಣೆ ಮತ್ತು ಯೋಗಕ್ಷೇಮಕ್ಕೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದರು.
ಇದೇ ಸಂದರ್ಭದಲ್ಲಿ ದಶಕಗಳ ಕಾಲ ಸಮಾಜದ ಕಣ್ಣಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
