Homeಜಿಲ್ಲೆಹಾವು ಹಾಗೂ ನಾಯಿ ಕಡಿತ- ನಾಟಿ ವೈದ್ಯರ ಚಿಕಿತ್ಸೆಯಿಂದ ದೂರವಿರಿ : ಡಿಸಿ

ಹಾವು ಹಾಗೂ ನಾಯಿ ಕಡಿತ- ನಾಟಿ ವೈದ್ಯರ ಚಿಕಿತ್ಸೆಯಿಂದ ದೂರವಿರಿ : ಡಿಸಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಆ.4

ಹಾವು ಕಡಿತ ಹಾಗೂ ನಾಯಿ ಕಡಿತವಾದ ತಕ್ಷಣ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಹಾಗೂ ಶೀಘ್ರ ಚಿಕಿತ್ಸೆ ನೀಡಲು ಅವಶ್ಯಕವಾದ ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಹಾವು ಕಡಿತ ಆಡಿಟ್,ರಾಷ್ಟ್ರೀಯ ರೇಬಿಸ್ ನಿಯಂತ್ರಣ, ರಾಷ್ಟ್ರೀಯ ಹಾವುಕಡಿತ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ  ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಕುರಿತಾದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಮನಿಸಿ: ಜಿಲ್ಲೆಯಲ್ಲಿ 12.76 ಲಕ್ಷ ಟನ್ ಮೇವು ಲಭ್ಯ- ಪ್ರಭುಲಿಂಗ ಕವಳಿಕಟ್ಟಿ

ಹಾವು ಕಡಿತ ಅಥವಾ ನಾಯಿ ಕಡಿತವಾದಾಗ ಸಾರ್ವಜನಿಕರು ನಾಟಿ ವೈದ್ಯರ ಬಳಿ ಹೋಗದೇ ತಕ್ಷಣವೇ ಸೂಕ್ತ ಪ್ರಥಮ ಚಿಕಿತ್ಸೆ ಪಡೆದು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಎಲ್ಲಾ ತಾಲ್ಲೂಕುಗಳು ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸೂಕ್ತ ಔಷಧಿಗಳು ಲಭ್ಯವಿರುವಂತೆ ಕ್ರಮ ವಹಿಸಬೇಕು ಎಂದರು.

ನಾಯಿ ಕಡಿತ ಪ್ರಕರಣಗಳು : ಜಿಲ್ಲೆಯಲ್ಲಿ ಒಟ್ಟು 13,325 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಭದ್ರಾವತಿ 3,157, ಶಿವಮೊಗ್ಗ 2,910, ಸಾಗರ 2,287, ಶಿಕಾರಿಪುರ 1,583, ಸೊರಬ 1,360, ತೀರ್ಥಹಳ್ಳಿ 1,023 ಹಾಗೂ ಹೊಸನಗರ 1,005 ಪ್ರಕರಣಗಳಿದ್ದು ಜಿಲ್ಲೆಯಲ್ಲಿ ಯಾವುದೇ ಸಾವು ವರದಿಯಾಗಿಲ್ಲ ಎಂದರು.

ಕೆಎಫ್‌ಡಿ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗಿದ್ದರೂ ಸವೇಕ್ಷಣಾ ಚಟುವಟಿಕೆಗಳನ್ನು ಸಕ್ರಿಯಾಗಿ ಜಾರಿಗೊಳಿಸಬೇಕು. ಜೂನ್ ಮೊದಲನೇ ವಾರ ಕಡೆಯ ಪ್ರಕರಣ ದಾಖಲಾಗಿದೆ. ಅಸಹಜ ಮಂಗ ಮರಣ ಕಂಡು ಬಂದ ತಕ್ಷಣ ಗ್ರಾ.ಪಂ, ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ತಕ್ಷಣ ಪೋಸ್ಟ್ ಮಾರ್ಟ್ಂ ಗೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯುಲ್ಲಿ ಅಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಬೇಕು ಹಾಗೂ ಎಲ್ಲ ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಶುಚಿತ್ವದೊಂದಿಗೆ ಆಹಾರ ಸಿದ್ದಪಡಿಸಬೇಕು ಎಂದರು.

ಇಲಿ ಜ್ವರ ಬಾರದಂತೆ ಅರಿವು ಮೂಡಿಸಬೇಕು. ಇಲಿಗಳ ಓಡಾಟವನ್ನು ನಿಯಂತ್ರಿಸಬೇಕು. ಇಲಿ ಇಕ್ಕೆ, ಮೂತ್ರ ಆಹಾರದಲ್ಲಿ ಬೀಳದಂತೆ ಆಹಾರ ಮತ್ತು ನೀರಿನ ಸಂಗ್ರಹಣೆಗಳನ್ನು ಮುಚ್ಚಿಡಬೇಕು. ಜ್ವರ, ಮೈಕೈ ನೋವು, ಜಾಂಡಿಸ್‌ನಂತಹ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ನಾಯಿ/ಪ್ರಾಣಿ ಕಡಿದ ತಕ್ಷಣ ಗಾಯವನ್ನು ಸಾಬೂನು ಮತ್ತು ಹರಿಯುವ ನೀರಿನಿಂದ 15 ನಿಮಿಷಗಳ ಕಾಲ ತೊಳೆದು, ತಕ್ಷಣ ಹತ್ತಿರದ ಆಸ್ಪತ್ರೆ ಅಥವಾ ಆಂಟಿ-ರೇಬೀಸ್ ಕ್ಲಿನಿಕ್‌ಗೆ ಭೇಟಿ ನೀಡಿ ವೈದ್ಯರ ಸಲಹೆಯಂತೆ ರೇಬೀಸ್ ನಿರೋಧಕ ಲಸಿಕೆ ಕೋರ್ಸ್ ಪೂರ್ಣಗೊಳಿಸಬೇಕು. ಕಡಿದ ಗಾಯಕ್ಕೆ ಮಣ್ಣು, ಸಗಣಿ, ಕಾಫಿ ಪೌಡರ್, ಸಾಸಿವೆ ಎಣ್ಣೆ ಹಚ್ಚಬಾರದು.ಸಾಕು ನಾಯಿ ಕಡಿದರೂ ನಿರ್ಲಕ್ಷಿಸಬಾರದು ಮತ್ತು ಚಿಕಿತ್ಸೆಯನ್ನು ಮಧ್ಯದಲ್ಲೇ ನಿಲ್ಲಿಸಬಾರದು ಎಂದರು.

ಹಾವು ಕಡಿತ ಪ್ರಕರಣಗಳು : ಜಿಲ್ಲೆಯಲ್ಲಿ ಒಟ್ಟು 606 ಹಾವು ಕಡಿತದ ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಶಿಕಾರಿಪುರ 141 ಪ್ರಕರಣ, 1 ಸಾವು, ಶಿವಮೊಗ್ಗ 122, ಭದ್ರಾವತಿ 113 , ಸೊರಬ 72, ಹೊಸನಗರ 64 ಪ್ರಕರಣ, 1 ಸಾವು, ತೀರ್ಥಹಳ್ಳಿ 49 ಹಾಗೂ ಸಾಗರ 45 ಪ್ರಕರಣ, 4 ಸಾವು ವರದಿಯಾಗಿದೆ.

ಹಾವು ಕಡಿತಕ್ಕೊಳಗಾದಾಗ ಸಾರ್ವಜನಿಕರು ಮೊದಲು ಸಂತ್ರಸ್ತ ವ್ಯಕ್ತಿಯನ್ನು ಹೆದರದಂತೆ ಸಮಾಧಾನಪಡಿಸಿ ಕಡಿದ ಭಾಗವನ್ನು ಅಲುಗಾಡಿಸದಂತೆ ನೇರವಾಗಿ ಮಲಗಿಸಿ, ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಿರಿ. ಬಿಗಿಯಾದ ಬಟ್ಟೆಯನ್ನು ಕಟ್ಟಬಾರದು. ಗಾಯವನ್ನು ಕತ್ತರಿಸುವುದು, ಬಾಯಿಯಿಂದ ವಿಷ ಹೀರುವುದು ಅಥವಾ ಅಸಾಂಪ್ರದಾಯಿಕ/ಮೂಢನಂಬಿಕೆಯ ನಾಟಿ ಚಿಕಿತ್ಸೆಗೆ ಒಳಗಾಗುವುದು ಮಾಡಬಾರದು ಎಂದರು.

ಜಿಲ್ಲೆಯಲ್ಲಿ ಈವೆಗೆ 102 ಇಲಿ ಜ್ವರ ಪ್ರಕರಣಗಳು ಕಂಡು ಬಂದಿದೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಅಸಾಂಕ್ರಾಮಿಕ ರೋಗಗಳ ಬಗ್ಗೆ ಸಮುದಾಯದಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಹೆಚ್‌ಓ ಡಾ. ನಟರಾಜ್, ಆರ್‌ಸಿಹೆಚ್‌ಓ ಡಾ. ಓ ಮಲ್ಲಪ್ಪ, ಡಾ.ಗುಡುದಪ್ಪ ಕಸಬಿ, ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments