ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.11
ಪರಿಶೀಲನೆ ಹೆಸರಿನಲ್ಲಿ ರಾಜ್ಯ ಸರ್ಕಾರವು ನಗರದಲ್ಲಿ ಸುಮಾರು 6 ಸಾವಿರ ಜನರ ಪಿಂಚಣಿಯನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಕೂಡಲೇ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಿಂಚಣಿದಾರರ ಪರವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 12 ಸಾವಿರ ಜನರಿಗೆ ಪಿಂಚಣಿ ದೊರೆಯಬೇಕಿತ್ತು. ಆದರೆ ಸರ್ಕಾರದಿಂದ ಸುಮಾರು 6 ಸಾವಿರ ಜನರಿಗೆ ಮಾತ್ರ ಪಿಂಚಣಿ ನೀಡುತ್ತಿದ್ದು, ಇನ್ನುಳಿದ ಮಂದಿಗೆ ಪಿಂಚಣಿ ಕಡಿತಗೊಳಿಸಲಾಗಿದೆ.
ಈಗಾಗಲೇ ಪಿಂಚಣಿ ನೀಡುತ್ತಿರುವ 6 ಸಾವಿರ ಮಂದಿಯನ್ನು ಸಹ ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ಕಳೆದ ಆರು ತಿಂಗಳಿನಿಂದ ಪಿಂಚಣಿ ಪಡೆಯದೆ ಇರುವವರಿಗೆ ಸರ್ಕಾರ ಬಾಕಿ ಹಣವನ್ನು ಪಾವತಿಸುತ್ತದೆಯೇ? ಅರಿಯರ್ಸ್ ನೀಡುತ್ತದೆಯೇ? ಎಂದು ಪ್ರಶ್ನಿಸಿದರು.
ಪರಿಶೀಲನೆ ಪ್ರಕ್ರಿಯೆ ಹೆಸರಿನಲ್ಲಿ ಈ ಸರ್ಕಾರ ಬಡವರ ಹಣವನ್ನು ತಡೆಹಿಡಿಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರ ಕೂಡಲೇ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮರು ಪ್ರಾರಂಭಿಸಬೇಕು ಎಂದರು.
ಅಂಗವಿಕಲರಿಗೂ ಮರಣ ದೃಢೀಕರಣ ಪತ್ರ
ಅಂಗವಿಲಕ ಪಿಂಚಣಿದಾರರು ಮರಣ ದೃಢೀಕರಣ ಪತ್ರ ನೀಡಬೇಕೆಂಬ ಸರ್ಕಾರದ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿದ ಶಾಸಕರು, ಅಂಗವಿಕಲ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಿರುತ್ತಾರೆ. ಆದರೂ ಪುನಹ ಪರಿಶೀಲನೆ ನೆಪದಲ್ಲಿ ಮರಣ ದೃಢೀಕರಣ ಪತ್ರ ಕೇಳುವುದು, ಪಿಂಚಣಿ ತಡೆಹಿಡಿಯುವುದು ಸರಿಯಾದ ನಡೆಯಲ್ಲ. ಇದರಿಂದ ಬಡವರ ಮೇಲೆ ಮತ್ತಷ್ಟು ಹೊರೆ ಆಗುತ್ತದೆ.
ಅಂಗವಿಕಲರಂತಹ ಫಲಾನುಭವಿಗಳ ಅರ್ಹತೆಯನ್ನು ಪದೇ ಪದೇ ಪರಿಶೀಲಿಸುವ ಅಗತ್ಯವೇನು? ಸರ್ಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಹಿಂದೆ ನಡೆಸಿದ ಪರಿಶೀಲನೆ ಮತ್ತು ದಾಖಲಾತಿಗಳ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
