ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.17
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರು ಭಾಗವಹಿಸಿದ್ದ ಸಭೆ ನಡೆದ ಸ್ಥಳವನ್ನು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು “ಅಶುದ್ಧವಾಗಿದೆ” ಎಂದು ಹೇಳಿ ಗಂಗಾಜಲದಿಂದ ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ, ಸೋಮವಾರ ಶಿವಮೊಗ್ಗ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, “ದೇಶದ ಹಿರಿಯ ರಾಷ್ಟ್ರೀಯ ನಾಯಕರೊಬ್ಬರು ಭಾಗವಹಿಸಿದ ಸಭೆಯ ಸ್ಥಳವನ್ನು ಜಾತಿಯ ಆಧಾರದ ಮೇಲೆ ಅವಮಾನಿಸುವುದು ಖಂಡನೀಯ. ಇದು ಸಂವಿಧಾನ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ. ಬಿಜೆಪಿಯವರ ಜಾತೀಯ ಮತ್ತು ಸಂಕುಚಿತ ಮನಸ್ಥಿತಿ ಈ ಘಟನೆಯಿಂದ ಸ್ಪಷ್ಟವಾಗಿದೆ” ಎಂದು ತಿಳಿಸಿದರು.
ಗಮನಿಸಿ: ಬಜರಂಗದಳದಿಂದ ಶಿಕಾರಿಪುರ ಬಂದ್ಗೆ ಕರೆ: ಯಾವಾಗ, ಏಕೆ? ಮಾಹಿತಿ ಇಲ್ಲಿದೆ.
“ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಇಂತಹ ಹೇಯ ಕೃತ್ಯಕ್ಕೆ ಕೈ ಹಾಕಿರುವುದು ವಿಷಾದನೀಯ. 75 ವರ್ಷಗಳ ಸ್ವಾತಂತ್ರ್ಯದ ನಂತರವೂ ಇಂತಹ ಘಟನೆಗಳು ನಡೆಯುತ್ತಿರುವುದು ದೇಶಕ್ಕೆ ಅವಮಾನವಾಗಿದೆ. ಕಾಂಗ್ರೆಸ್ ಪಕ್ಷ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು “ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ”, “ಜಾತೀಯತೆಯನ್ನು ಕಿತ್ತೊಗೆಯಿರಿ”, “ಸಂವಿಧಾನ ಉಳಿಸಿ” ಎಂಬ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಎಸ್.ಟಿ. ಚಂದ್ರಶೇಖರ್, ವಿಜಯಕುಮಾರ್, ವೇದಾ ವಿಜಯಕುಮಾರ್, ಭಾರತಿ ರಾಮಕೃಷ್ಣ, ನೇತ್ರಾವತಿ ಗೌಡ, ಆರೀಫ್, ಪಾಲಾಕ್ಷಿ, ಎಸ್.ಟಿ. ಹಾಲಪ್ಪ, ಕಲೀಂ ಪಾಶ, ಶಿವಕುಮಾರ್, ಹೆಚ್.ಸಿ. ಯೋಗೀಶ್, ರಂಗನಾಥ್, ಮಧುಸೂದನ್ ಸಿ.ಜಿ., ದೇವೇಂದ್ರಪ್ಪ, ಆರ್. ರಾಜಶೇಖರ್, ವಿಶ್ವನಾಥ್ ಕಾಶಿ, ನೇತಾಜಿ, ಶಿವಾನಂದ್, ದೇವಿಕುಮಾರ್ ಮೊದಲಾದವರು ಇದ್ದರು.
