ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.28
ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಶಿವಮೊಗ್ಗ ಜಿಲ್ಲೆ ವತಿಯಿಂದ ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆ ವಿರೋಧಿಸಿ ನಾಳೆ ಪಾದಯಾತ್ರೆ ಮತ್ತು ಬಹಿರಂಗ ಸಭೆಯನ್ನು ಹೊಸನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅದ್ಯಕ್ಷ ಡಾ.ಆರ್ ಎಂ ಮಂಜುನಾಥ ಗೌಡ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ನಾಳೆ ಬೆಳಗ್ಗೆ 9 ಗಂಟೆಗೆ ಕಾರಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊಸನಗರದವರೆಗೆ ಪಾದಯಾತ್ರೆ ಮತ್ತು ಹೊಸನಗರದ ಬಸ್ ನಿಲ್ದಾಣದ ಬಳಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ.3 ರಂದು ಬೆಳಗ್ಗೆ 9 ಗಂಟೆಗೆ ಆವಿನಹಳ್ಳಿ ಶ್ರೀ ದುರ್ಗಾಂಬ ದೇವಸ್ಥಾನದಿಂದ ಪಾದಯಾತ್ರೆ ನಂತರ ಸಾಗರದ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಸೆ.7 ರಂದು ತೀರ್ಥಹಳ್ಳಿಯಲ್ಲಿ, ನಂತರ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಸಲಾಗುವುದು. ಕೊನೆಯಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ರೈತರ ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಗಮನಿಸಿ: ಅಧ್ಯಕ್ಷತೆ ಇಲ್ಲದ ವೇದಿಕೆ- ಈಡಿಗ ಮುಖಂಡರ ಆಕ್ರೋಶ
ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ರೈತರ ಬದುಕು ದುರ್ಬರವಾಗಲಿದ್ದು, ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಇದು ಪಕ್ಷಾತೀತವಾಗಿ ನಮ್ಮ ಧ್ವನಿ ಎತ್ತುವ ಹೋರಾಟ, ಕೇರಳ ಮಾದರಿಯಲ್ಲಿ ಈ ಹೋರಾಟಕ್ಕೆ ಕರೆ ನೀಡುತ್ತೇವೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರಕ್ಕೆ ಪತ್ರ ಬರೆದು ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದಿದ್ದಾರೆ. ಅಲ್ಲದೇ ಇದಕ್ಕಾಗಿ ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯುವುದಾಗಿಯು ಅವರು ತಿಳಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಆದರೆ ಶಿವಮೊಗ್ಗ ಸಂಸದ ಸೇರಿದಂತೆ ಪಶ್ಚಿಮ ಘಟ್ಟದ ಭಾಗಗಳಲ್ಲಿ ಬರುವ ಎಲ್ಲಾ ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ. ಕೇಂದ್ರ ಮನವಿ ಮಾಡಬೇಕಾಗಿದೆ ಎಂದರು.
ಸAಚಾಲಕ ಬಿ ಆರ್ ಜಯಂತ್ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಕೇರಳದ ಕೆಲವು ಭಾಗಗಳಲ್ಲಿ ಏಕೆ ಹೊರಗಿಟ್ಟರು ಎನ್ನುವುದೇ ದೊಡ್ಡ ಪ್ರಶ್ನೆ. ಕೇರಳ ಸರ್ಕಾರ ತನ್ನ ರೈತರ ಪರವಾಗಿ ನಿಂತಿದ್ದರಿಂದ ವರದಿಯಿಂದ ಆಚೆ ಬಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾವ ರೈತರನ್ನೂ ಭೇಟಿ ಮಾಡಲಿಲ್ಲ, ಜನರ ಅಭಿಪ್ರಾಯವನ್ನೇ ಕೇಳಲಿಲ್ಲ. ಏಕಪಕ್ಷೀಯವಾಗಿ 20,668 ಚ.ಕಿ.ಮೀ ಪ್ರದೇಶದ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ 7ನೇ ಕರಡು ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ ಎಂದು ದೂರಿದರು.
ನಮ್ಮ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 473 ಗ್ರಾಮಗಳು ಈ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ವಾಸವಿರುವ, ಬಗರ್ ಹುಕುಂನಲ್ಲಿ ಕೃಷಿ ಮಾಡುತ್ತಿರುವ ಸಾವಿರಾರು ಕುಟುಂಬಗಳಿಗೆ ಇನ್ನೂ ಹಕ್ಕುಪತ್ರವೇ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಇಡೀ ಗ್ರಾಮವನ್ನೇ ಇಎಸ್ಝೇಡ್ ಎಂದು ಘೋಷಿಸಿದರೆ ರೈತರು ಎಲ್ಲಿಗೆ ಹೋಗಬೇಕು?. ಈ ಹೋರಾಟ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ವಿಚಾರವಲ್ಲ, ಇದು ನಮ್ಮ ಮಣ್ಣಿನ ಪ್ರಶ್ನೆ. ಆದ್ದರಿಂದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲಾ ಪಕ್ಷಗಳ ಶಾಸಕರು ಒಗ್ಗೂಡಿ ಕೇಂದ್ರದ ಮೇಲೆ ಒತ್ತಡ ತರಬೇಕು. ಕೇರಳ ಮಾದರಿಯಲ್ಲೇ ಕರ್ನಾಟಕ ಕೂಡ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ವೆಬ್ ಸೈಟ್ ಬಿಡುಗಡೆ:
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.25 ಕೊನೆಯ ದಿನವಾಗಿದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೆಸ್ಸೈಟ್ ವೊಂದನ್ನು ಇಂದು ಮುಖಂಡರು ಬಿಡುಗಡೆ ಮಾಡಿದರು.
ವೆಬ್ ಸೈಟ್ ರೂವಾರಿ ತಸ್ರೀವ್ ಇಬ್ರಾಹಿಂ ಮಾತನಾಡಿ, ಆಕ್ಷೇಪಣೆಗಳನ್ನು ಕನ್ನಡ ಮತ್ತು ಇಂಗ್ಲೀಷ್ನಲ್ಲೂ ಸಹ ಸಲ್ಲಿಸಬಹುದಾಗಿದೆ. ಆದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ವಿನಂತಿಸಿದರು.
www.savefarmers.in ಗೆ ಸಲ್ಲಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿದ್ಯಾಧರ್, ಎಸ್.ಕೆ. ಮರಿಯಪ್ಪ, ಸುರೇಶ್ ವಾಟಗೋಡು, ದುಗ್ಗಪ್ಪಗೌಡ, ಪರಮೇಶ್ವರ, ಸುಧೀರ್,ರವಿಮಮ ನಾಗೇಶ್ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.
