ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.26
ರಾಜ್ಯದಲ್ಲಿ 1955-56ರಲ್ಲಿ ಜಾರಿಗೆ ಬಂದ ಭೂವಿದ್ಯಾದಾನದ ಶಾಲಾ ಜಮೀನುಗಳ ಗೇಣಿದಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸರ್ಕಾರ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಭೂವಿದ್ಯಾದಾನ ಶಾಲಾ ಜಮೀನು ಗೇಣಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದರು.
ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಜಮೀನು ಗೇಣಿ ಸಾಗುವಳಿದಾರರ ಸಮಸ್ಯೆ ಹಲವು ವರ್ಷಗಳಿಂದ ಇದೆ. ಸುಮಾರು 70 ವರ್ಷಗಳವರೆಗೆ ರೈತರು ಆ ಗೇಣಿ ಜಮೀನಿನಲ್ಲಿ ನಿರಂತರವಾಗಿ ಸಾಗುವಳಿ ಮಾಡುಕೊಂಡು ಬರುತ್ತಿದ್ದಾರೆ. `ಉಳುವವನೇ ಹೊಲದೊಡೆಯ’ ಎಂಬ ಕಾನೂನಿನ ಅಂಶ ಕೂಡ ಇವರಿಗೆ ಸಹಾಯಕವಾಗಿಲ್ಲ. ಆಗಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಜಾರಿಗೆ ತಂದ ಭೂಸುಧಾರಣಾ ಕಾನೂನಿನಲ್ಲಿ ಸೆಕ್ಷನ್ 107ರ ಅನ್ವಯ ಭೂ
ಒಡೆತನದ ಸೌಲಭ್ಯ ಕೂಡ ನೀಡಿಲ್ಲ. ಇದರಿಂದ ಸಾಗುವಳಿದಾರರ ಸಮಸ್ಯೆ ಹಾಗೆಯೇ ಉಳಿದಿದೆ ಎಂದರು.
ಗಮನಿಸಿ: ಮಹಾನಗರ ಪಾಲಿಕೆಯಿಂದ ಹಗಲು ದರೋಡೆ: ನಾಗರೀಕ ಹಿತರಕ್ಷಣಾ ವೇದಿಕೆ ಆರೋಪ
ನಮ್ಮ ಹೋರಾಟ ಸಮಿತಿ ಕಳೆದ 30 ವರ್ಷಗಳಿಂದ ಗೇಣಿ ರೈತರ ಪರವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸಿದ್ದರು. ಆದರೆ ಈಗ ಯಾವ ಮುಂಜಾಗ್ರತೆಯೂ ಇಲ್ಲದ ಯೋಚನೆಯೂ ಮಾಡದ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಮಾತು ಕೇಳಿಕೊಂಡು ಮುಖ್ಯಮಂತ್ರಿಗಳು ಶಾಲಾ ಸ್ವತ್ತು ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಸಾವಿರಾರು ಶಾಲಾ ಜಮೀನು ಗೇಣಿ ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳು ಶಿವಮೊಗ್ಗಕ್ಕೆ ಬರಲಿದ್ದಾರೆ. ಶಾಲಾ ಜಮೀನು ಗೇಣಿ ಸಾಗುವಳಿ ಮಾಡುತ್ತಿರುವ ಗೇಣಿ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷದ 20 ಅಂಶಗಳ ಕಾರ್ಯಕ್ರಮದಂತೆ ಉಳುವವನೇ ಹೊಲದೊಡೆಯ ಎಂಬ ಸಿದ್ಧಾಂತದ ಅಡಿಯಲ್ಲಿ ಭೂ ಒಡೆತನದ ಹಕ್ಕು ನೀಡುವಂತೆ ಒತ್ತಾಯಿಸಲಾಗುವುದು ಎಂದರು.
ಶಾಲಾ ಜಮೀನು ಗೇಣಿದಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಅನುಕೂಲವಾಗುವಂತೆ ಹಿರಿಯ ಲೇಖಕರುಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರುಗಳನ್ನೊಳಗೊಂಡ ಒಂದು ಸಮಿತಿಯನ್ನು ಸರ್ಕಾರ ರಚಿಸಿ, ಆ ವರದಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಪಿ.ಡಿ. ಮಂಜಪ್ಪ, ಹೆಚ್.ಎಂ.ಸಂಗಯ್ಯ, ಲೋಕೇಶ್, ಭೈರಪ್ಪ, ಮಂಜಪ್ಪ, ಶಂಕ್ರಾನಾಯ್ಕ, ಕರಿಬಸಪ್ಪ, ಮಲ್ಲೇಶಪ್ಪ ಮುಂತಾದವರಿದ್ದರು.
