ಹಸಿವು, ಬಡತನ ಮತ್ತು ವ್ಯವಸ್ಥೆಯ ವೈಫಲ್ಯ
ಯಲ್ಲಾಪುರ ಕಾಡಲ್ಲಿ ಹಸಿವಿನಿಂದ ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು! ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ ಈ ಸುದ್ದಿ ಕೇವಲ ಒಂದು ಕುಟುಂಬದ ದುರಂತವಲ್ಲ, ಅದು ನಮ್ಮ ಆಡಳಿತ ವ್ಯವಸ್ಥೆಯ ಆಳವಾದ ಕೊರತೆಗಳ ಬಯಲು. ಆಹಾರ, ಆರೋಗ್ಯ ಮತ್ತು ಆಡಳಿತ ಪ್ರಕ್ರಿಯೆಗಳ ದೌರ್ಬಲ್ಯ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದರೆ, ಅದರ ಬೆಲೆ ನಿರಪರಾಧ ಜೀವ ಪಾವತಿಸಬೇಕಾದ ಸ್ಥಿತಿ ಎದುರಾಗುತ್ತದೆ.
ಯಲ್ಲಾಪುರದಂತಹ ಘಟನೆಗಳು ಮತ್ತೆ ನಡೆಯದಂತೆ ತಡೆಗಟ್ಟುವುದು ಸರ್ಕಾರದ ನೈತಿಕ, ಸಾಮಾಜಿಕ ಮತ್ತು ಕಾನೂನುಬದ್ಧ ಜವಾಬ್ದಾರಿ. ಆಹಾರ ಭದ್ರತೆ, ಆರೋಗ್ಯ ಸೇವೆ, ಜಾಗೃತಿ ಮತ್ತು ಉದ್ಯೋಗಾವಕಾಶಗಳ ಬಲಪಡಿಸುವ ಮೂಲಕ ಮಾತ್ರ ಇಂತಹ ದುರಂತಗಳನ್ನು ತಪ್ಪಿಸಬಹುದು.
ಈ ಪ್ರಕರಣದಲ್ಲಿ ಮುಖ್ಯ ಕಾರಣ — ರೇಷನ್ ಕಾರ್ಡ್ ಇರದಿರುವುದು. ರೇಷನ್ ಕಾರ್ಡ್ ಇಲ್ಲದ ಕಾರಣ ಮಹಿಳೆ ಅನ್ನಭಾಗ್ಯ ಯೋಜನೆಗೆ ಒಳಪಡಲಿಲ್ಲ. ಬಡತನ ರೇಖೆ ಕೆಳಗಿನ ಕುಟುಂಬಗಳಿಗೆ ಆಹಾರ ಭದ್ರತೆ ನೀಡಲು ರೂಪಿಸಿರುವ ಯೋಜನೆ, ಕಾಗದದ ಕೊರತೆಯಿಂದ ಹಸಿದ ಹೊಟ್ಟೆಗೆ ತಲುಪದಿರುವುದು ವಿಷಾದನೀಯ.
ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆಯ ವೈಫಲ್ಯ
ಹೊಸ ರೇಷನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಸುಗಮವಾಗಬೇಕಾದರೆ, ಅದು ಈಗ ಜನರಿಗೆ ಕಷ್ಟದ ಗುಂಡಿಯಂತಾಗಿದೆ. ಅರ್ಜಿ ಪ್ರಕ್ರಿಯೆ ಪ್ರಾರಂಭವಾದರೆ ಎರಡು ತಾಸುಗಳಲ್ಲೇ ಮುಕ್ತಾಯ ಮತ್ತು ಅದರೊಂದಿಗೆ ಸರ್ವರ್ ಸಮಸ್ಯೆ ಇವು ಆಹಾರ ಭದ್ರತೆಯನ್ನು ಕಾಗದದ ಮೇಲಿನ ಕನಸಾಗಿಸುತ್ತಿವೆ. ಜನರು ಹಸಿದ ಹೊಟ್ಟೆಯೊಂದಿಗೆ ಆಡಳಿತದ ಬಾಗಿಲಲ್ಲಿ ಅಲೆದಾಡುವಂತಾಗಿದೆ.
ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು
1. ರೇಷನ್ ಕಾರ್ಡ್ ಪ್ರಕ್ರಿಯೆಯ ಸುಗಮೀಕರಣ – ಅರ್ಜಿ ಸಲ್ಲಿಕೆ ವ್ಯವಸ್ಥೆ ವರ್ಷಪೂರ್ತಿ ನಿರಂತರವಾಗಿ ಲಭ್ಯವಾಗಬೇಕು.
2. ಸರ್ವರ್ ಮೂಲಸೌಕರ್ಯ ಬಲಪಡಿಸುವುದು – ಗ್ರಾಮೀಣ ಪ್ರದೇಶಗಳಲ್ಲೂ ದೋಷರಹಿತ ಆನ್ಲೈನ್ ಸೇವೆ ಖಚಿತಪಡಿಸಬೇಕು.
3. ತಾತ್ಕಾಲಿಕ ಆಹಾರ ಪೂರೈಕೆ ಪಾಸ್ – ಹೊಸ ರೇಷನ್ ಕಾರ್ಡ್ ಸಿಗುವವರೆಗೆ ಬಡ ಕುಟುಂಬಗಳಿಗೆ ತಾತ್ಕಾಲಿಕ ಆಹಾರ ಹಕ್ಕುಪತ್ರ ನೀಡಬೇಕು.
4. ಪರಿಶೀಲನೆ ಮತ್ತು ಜವಾಬ್ದಾರಿ – ಯೋಜನೆಗಳನ್ನು ಅಡ್ಡಿಪಡಿಸುವ ತಾಂತ್ರಿಕ ಅಥವಾ ಆಡಳಿತ ದೋಷಗಳಿಗೆ ಅಧಿಕಾರಿಗಳ ಜವಾಬ್ದಾರಿ ನಿಗದಿ ಮಾಡಬೇಕು.
ಹಸಿವಿನಿಂದ ಮರಣ 21ನೇ ಶತಮಾನದಲ್ಲಿ ಸ್ವೀಕಾರಾರ್ಹವಲ್ಲ. ಆಹಾರ ಭದ್ರತೆ ಕೇವಲ ಯೋಜನೆಗಳ ಘೋಷಣೆಗಳಲ್ಲಿ ಸೀಮಿತವಾಗದೆ, ಅದರ ತಲುಪುವಿಕೆ ಖಚಿತವಾಗಬೇಕು. ಅನ್ನಭಾಗ್ಯ ಹಸಿದ ಹೊಟ್ಟೆಗೆ ತಲುಪದಿದ್ದರೆ, ಅದು ಯೋಜನೆಯ ವೈಫಲ್ಯವಷ್ಟೇ ಅಲ್ಲ — ಮಾನವೀಯ ಕರ್ತವ್ಯದ ಸೋಲು. ಸರ್ಕಾರವು ಈಗಲೇ ಎಚ್ಚರಗೊಂಡು, ಪ್ರಕ್ರಿಯೆ, ತಂತ್ರಜ್ಞಾನ ಮತ್ತು ತುರ್ತು ಪರಿಹಾರ ಕ್ರಮಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಇಂತಹ ದುರಂತಗಳ ಪಟ್ಟಿ ಇನ್ನೂ ಉದ್ದವಾಗಬಹುದು.
ಶಿವಾನಂದ ಎನ್ ದೊಡ್ಡಮನಿ
ಸಹಾಯಕ ಪ್ರಾಧ್ಯಾಪಕರು
