ಶಿವಮೊಗ್ಗ,ಏ.26: ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಓದುವ ಹವ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎನ್. ಧನಂಜಯ ಮೂರ್ತಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್ಇಎಸ್ ಇನ್ಸ್ಟಿಟ್ಯೂಟ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಸೋಮವಾರ ಕನ್ನಡ ಸಾಹಿತ್ಯ ವೇದಿಕೆ, ಕುವೆಂಪು ವಿವಿ, ಪದವಿ ಕಾಲೇಜು, ಕನ್ನಡ ಅಧ್ಯಾಪಕರ ವೇದಿಕೆ ಹಾಗೂ ಐಕ್ಯೂಎಸ್ಸಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ನನ್ನ ನೆಚ್ಚಿನ ಪುಸ್ತಕ ಓದು” ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಓದು ಕೇವಲ ಜ್ಞಾನಾರ್ಜನೆ ಮಾತ್ರವಲ್ಲ ಅದು ವೈಚಾರಿಕತೆ, ಸಂವೇದನೆ, ಸೃಜನಶೀಲತೆಯಿಂದ ನೀಡುತ್ತದೆ. ಓದುವುದೆಂದರೆ ಸಮಾಜವನ್ನು ಓದುವುದು ಹೇಗೆ ಎಂಬುದು ಕೂಡ ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಪುಸ್ತಕ ಓದುವುದರ ಜೊತೆಗೆ ಸಮಾಜವನ್ನು ಓದಬೇಕಾಗುತ್ತದೆ. ಹಾಗಾಗಿ ಓದು ಎನ್ನುವುದು ಪ್ರಜ್ಞಾವಂತ ಸಮಾಜದ ಕಟ್ಟಲು ಬುನಾದಿಯಾಗುತ್ತದೆ. ಅಷ್ಟೇಯೆಲ್ಲಾ ಕೆರಳಿಸುವ ಮನಸ್ಸುಗಳಿಗೆ ಅರಳಿಸುವ ಉತ್ತರಗಳನ್ನು ನೀಡುತ್ತದೆ ಎಂದರು.
ಜಗತ್ತು ಕ್ರೌರ್ಯ, ತಲ್ಲಣಗಳಿಂದಲೇ ತುಂಬಿ ಹೋಗುತ್ತಿವೆ. ನಮ್ಮ ಮಾಧ್ಯಮಗಳು ಕೂಡ ಇದನ್ನೇ ವಿಭೃಂಜಿಸುತ್ತಿರುವುದು ವಿಷಾದನೀಯ. ಒಂದು ತಿಳಿಯಾದ ಸಮಾಜ ಕಟ್ಟಲು ಓದು ಬಹಳ ಮುಖ್ಯವಾಗುತ್ತದೆ. ಮನುಷ್ಯನ ಅತೀರೇಕಗಳನ್ನು ಇದು ಕಡಿಮೆ ಮಾಡುತ್ತದೆ. ಅಷ್ಟೇಯೆಲ್ಲಾ ಚಿಕ್ಕದ್ದು ಕೂಡ ಸುಂದರ ಹಾಗೇ ಮೌನವೂ ಮತ್ತು ನಿಧಾನವೂ ಕೂಡ ಸರಳ ಸತ್ಯವನ್ನ ಓದು ನೀಡುತ್ತದೆ ಎಂದರು.
ಇಂದು ಅಭಿವೃದ್ದಿಯ ಹೆಸರಿನಲ್ಲಿ ಮಾನವ ವಿವೇಕವನ್ನೇ ಕಳೆದುಕೊಳ್ಳುತ್ತಿದ್ದಾನೆ. ಜೀವಸಂಕುಲವೇ ನಾಶವಾಗುತ್ತಿವೆ. ಪರಿಸರಕ್ಕೆ ಮಾರಕವಾಗುವ ಅಭಿವೃದ್ದಿಗಳನ್ನು ನಮ್ಮ ಮಕ್ಕಳು ವಿರೋಧಿಸಬೇಕು. ಇಲ್ಲಿನ ವಿದ್ಯಾರ್ಥಿಗಳು ಪರಿಸರ ವಿರೋಧಿ ಯೋಜನೆಗಳನ್ನು ಪ್ರತಿಭಟನೆಯ ಮೂಲಕ ವಿರೋಧಿಸಿದ್ದು ಸ್ವಾಗತದ ವಿಷಯವಾಗಿದೆ.ಹಾಗಾಗಿ ಓದು ಸುಖ, ಸಂತೋಷಗಳನ್ನು ನೀಡುತ್ತದೆ. ಜಾತಿ, ಅಸಮಾನತೆಗಳನ್ನ ವಿರೋಧಿಸುತ್ತದೆ. ಸುಖ ಎಂದರೆ ತಾನ್ನೊಬ್ಬನೆ ಅನುಭವಿಸುವುದು, ಸಂತೋಷ ಎಂದರೆ ಇತರರಿಗೂ ಹಂಚುವುದು. ಹಾಗಾಗಿ ವಿದ್ಯಾರ್ಥಿಗಳು ಒಟ್ಟಾಗಿ ಬದುಕುವ ಸಹಜವಾದ, ಸರಳವಾದ ಬದುಕನ್ನು ಕಲಿಯಲಿ ಮತ್ತು ಓದು ಅವರನ್ನು ನೆರಳಿನಂತೆ ಕಾಪಾಡುತ್ತದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕಿ ಸೀತಾಲಕ್ಷ್ಮೀ ಎಂ.ಆರ್, ಮಕ್ಕಳು ಅದರಲ್ಲೂ ಸಾಹಿತ್ಯ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಬೇಕು. ಇದು ಅರಿವನ್ನ ವಿಸ್ತರಿಸುತ್ತದೆ. ಕುವೆಂಪು ತೇಜಸ್ವಿ, ಡಿವಿಜಿ, ಬಿ.ಜಿ.ಎಲ್ ಸ್ವಾಮಿ, ಮಾಸ್ತಿ, ಕೆ.ಎಸ್.ನರಸಿಂಹಸ್ವಾಮಿ, ಬಿಎಂಶ್ರೀ, ಲಂಕೇಶ್, ಗಿರೀಶ್ ಕಾರ್ನಾಡ್, ಎಸ್.ಎಲ್.ಭೈರಪ್ಪ ಸೇರಿದಂತೆ ಹಲವು ಸಾಹಿತ್ಯಗಳ ಪುಸ್ತಕಗಳನ್ನು ಹೆಸರಿಸಿ ಅವುಗಳನ್ನು ಓದುವಂತೆ ಪ್ರೇರಣೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಸರ್ಜಾಶಂಕರ್ ಅರಳಿಮಟ್, ಓದಿದಷ್ಟು ಮನಸ್ಸು ವಿಶಾಲವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಬೆಳೆಸುವ ಹಿನ್ನೆಯಲ್ಲಿ ಇಂತಹ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಓದು ಬದುಕಿಗೆ ಚೈತನ್ಯ ನೀಡುತ್ತದೆ ಎಂದರು.
ಪ್ರಾಂಶುಪಾಲ ಡಾ.ಶಿವಪ್ರಸಾದ್ ಜಿ.ಎಸ್ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಸುಜಾತ, ಅಭಿಷೇಕ್ ಸೇರಿದಂತೆ ಹಲವರು ಇದ್ದರು. ಅನನ್ಯ ಪ್ರಾರ್ಥಿಸಿದರು. ಯುಕ್ತ ಸ್ವಾಗತಿಸಿದರು.
ಪುಸ್ತಕ ಓದು ಕಾರ್ಯಾಗಾರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುವೆಂಪು, ತೇಜಸ್ವಿ, ಶೇಷಗಿರಿ ರಾವ್, ಜಿ.ಎನ್. ಧನಂಜಯ್ ಮೂರ್ತಿ ಸೇರಿದಂತೆ ಹಲವು ಸಾಹಿತಿಗಳ ಸಾಹಿತ್ಯ ಕೃತಿಗಳ ಪ್ರಬಂಧ ಮಂಡಿಸಿದರು.
