ಶಿವಮೊಗ್ಗ, ಮೇ.7: ಭವಿಷ್ಯತ್ತಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವವರು ಹಾಗೂ ಪ್ರಸ್ತುತ ಸೇವೆಯಲ್ಲಿ ಇರುವವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದುಕು ಉತ್ತಮ ಪಾಠವಾಗಲಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.9 ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠದ ಪಕ್ಕದಲ್ಲಿರುವ ಮೈದಾನಲ್ಲಿ ಜನಸೇವೆಯಲ್ಲಿ ಬಿ.ಎಸ್.ಯಡಿಯೂರಪ್ಪ 50 ಸಾರ್ಥಕ ವರ್ಷದ ಸಂಭ್ರಮ ಹಿನ್ನೆಯಲ್ಲಿ “ಬಿಎಸ್ವೈ ಅಭಿಮಾನೋತ್ಸವ” ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದಿನ ವಿದ್ಯಾಮಾನದಲ್ಲಿ ರಾಜಕಾರಣಕ್ಕೆ ಬರುವ ಅನೇಕರು ಬಹುತೇಕವಾಗಿ ಅಡ್ಡದಾರಿಯನ್ನೇ ಆಯ್ದುಕೊಳ್ಳತ್ತಾರೆ. ಆದರೆ ಯಡಿಯೂರಪ್ಪ ಇಂತಹ ಯಾವುದೇ ದಾರಿಯನ್ನು ತುಳಿದವರಲ್ಲ. ಸಿದ್ದಾಂತ, ಹೋರಾಟದ ಮೂಲಕ ರಾಜಕೀಯ ಹಾದಿಯನ್ನು ವಿಸ್ತಾರವಾಗಿ ಮಾಡಿಕೊಂಡು ಬಂದವರು ಎಂದರು.
ಗಮನಿಸಿ: ಉಗ್ರರಿಗೆ ತಕ್ಕ ಉತ್ತರ ನೀಡಿದ್ದ ಭಾರತ ಮಿಲಿಟರಿ
ಈಗ ಜಾತಿ, ಹಣದ ಮೂಲಕ ರಾಜಕಾರಣ ಮಾಡುವುದು ಸಾಧಾರಣವಾಗಿದೆ. ಯಡಿಯೂರಪ್ಪ ಅಂತಹದ್ಯಾವುದೇ ರಾಜಕಾರಣಕ್ಕೆ ಬಲಿಯಾಗದೆ ಹೋರಾಟದ ಮೂಲಕ ರೂಪಗೊಂಡರು. ದಕ್ಷಿಣ ಭಾಗದಲ್ಲಿ ಪಕ್ಷ ಕಟ್ಟಿದ್ದರು. ಜನಸಂಘ ಮತ್ತು ಬಿಜೆಪಿ ಮೇಲ್ವರ್ಗದ ವ್ಯಾಪಾರಿಗಳ ಪಕ್ಷ ಎನ್ನುತ್ತಿದ್ದ ಕಾಲದಲ್ಲಿ ಯಡಿಯೂರಪ್ಪ ಅದಕ್ಕೆ ಬಿಗ್ ಟ್ವಿಸ್ಟ್ ಕೊಟ್ಟರು. ದಲಿತರು, ರೈತರಿಗೆ ಸಹಾಯಕಾರಿಯಾಗಿ ನಿಂತರು. ದಲಿತರ ಮನೆಗಳಿಗೆ ಭೇಟಿ ನೀಡಿ ಉಪಚರಿಸಿದರು. ಬಗರ್ ಹುಕ್ಕಂ ಸಾಗುವಳಿ ಹೋರಾಟ ಅವರನ್ನು ರೈತರ ಹೊಲಕ್ಕೆ ಕರೆದುಕೊಂಡು ಹೊಯ್ತು. ರಾಜ್ಯದ ಮೂಲೆ ಮೂಲೆ ಸುತ್ತಿದ್ದರು. ಇಡೀ ಬದುಕೇ ಸಾರ್ವಜನಿಕ ಜೀವನಕ್ಕೆ ಅರ್ಪಣೆ ಮಾಡಿಕೊಂಡರು ಎಂದರು.
ಯಡಿಯೂರಪ್ಪ ಅಭಿಮಾನ ಬಳಗದಿಂದ ನಡೆಸುತ್ತಿರುವ ಈ ಬಿಎಸ್ವೈ ಅಭಿಮಾನೋತ್ಸವ ಕಾರ್ಯಕ್ರಮ ಯಡಿಯೂರಪ್ಪನವರಿಗಿಂತ ಸಾರ್ವಜನಿಕರ ಸೇವೆಯಲ್ಲಿ ತೊಡಸಿಕೊಳ್ಳುವವರಿಗೆ ಉಪಯುಕ್ತವಾಗುತ್ತದೆ. ಯಡಿಯೂರಪ್ಪ ರಾಜಕೀಯ ಬದುಕಿನಲ್ಲಿ ಅನೇಕ ಮಾನವೀಯ ಕಾರ್ಯ ಮಾಡುತ್ತ ಬಂದಿದ್ದು, ಮಾತೃ ಹೃದಯಿಯೂ ಆಗಿದ್ದರು. ಅವರ ಜೊತೆಗೆ ನಿರಂತರವಾಗಿ ಒಡನಾಟವಿದ್ದ ನನಗೆ ಯಡಿಯೂರಪ್ಪರಂತೆ ನಿಂತಲ್ಲೆ ನಿರ್ಣಯ ತೆಗೆದುಕೊಂಡ ಮುಖ್ಯಮಂತ್ರಿ ಇನ್ನೊಬ್ಬರನ್ನು ನಾನು ರಾಜಕಾರಣದಲ್ಲಿ ನೋಡಿಲ್ಲ ಎಂದು ನೆನೆದರು.
