ಶಿವಮೊಗ್ಗ, ಮೇ.8 : ನಿರಾಣಿ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಬ್ಯಾಂಕ್ನ 71 ನೇ ಶಾಖೆ ಶಿವಮೊಗ್ಗ ನಗರದಲ್ಲಿ ಆರಂಭಗೊಂಡಿದೆ ಎಂದು ಸಂಸ್ಥೆಯ ಮಾಲೀಕ ಹಾಗೂ ಮಾಜಿ ಸಚಿವ ಹೆಸರಾಂತ ಉದ್ಯಮಿ ಮುರುಗೇಶ್ ನಿರಾಣಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದಾದ್ಯಂತ ನಮ್ಮ ಸಮೂಹ ಸಂಸ್ಥೆಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ವಿಶಾಲ ಸೌಹಾರ್ದ ಬ್ಯಾಂಕ್ 25 ಶಾಖೆಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
19 ವರ್ಷಗಳ ಹಿಂದೆ ಸ್ಥಾಪಿತವಾದ ನಮ್ಮ ಸೌಹಾರ್ದ ಬ್ಯಾಂಕ್ 48 ಸಾವಿರ ಕೋಟಿ ವಹಿವಾಟನ್ನು ನಡೆಸುತ್ತಿದೆ, ಕಳೆದ ವರ್ಷ 46 ಸಾವಿರ ಕೋಟಿ ವಹಿವಾಟು ನಡೆಸಿತ್ತು ಎಂದ ಅವರು, ವರ್ಷದಿಂದ ವರ್ಷಕ್ಕೆ ನಮ್ಮ ವಹಿವಾಟು ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿದೆ. ಕಳೆದ ವರ್ಷ 60 ಕೋಟಿ ಲಾಭವನ್ನು ಗಳಿಸಿದೆ. ಎನ್ಪಿಎ ಶೇ.1 ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.
ಗಮನಿಸಿ:ಮಗನಿಗೆ ರಾಜಕೀಯ ಬಳುವಳಿ ನೀಡಲು “ಅಭಿಮಾನೋತ್ಸವ”: ಮಧು ಬಂಗಾರಪ್ಪ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳು ನಮ್ಮ ಬ್ಯಾಂಕಿನಲ್ಲೇ ಲಭ್ಯವಿದೆ. ಆದರೆ ಗ್ರಾಹಕರಿಗೆ ಯಾವುದೇ ಸೇವಾಶುಲ್ಕ ವಿಧಿಸುವುದಿಲ್ಲ ಎಂದ ಅವರು, ಜನಸ್ನೇಹಿಯಾಗಿ ನಮ್ಮ ಬ್ಯಾಂಕ್ ಇಲ್ಲಿಯವರೆಗೂ ಹಾಗೂ ಮುಂದೆಯೂ ಸಹ ಕಾರ್ಯ ನಿರ್ವಹಿಸಿಕೊಂಡು ಹೋಗಲಿದೆ. ಕರ್ನಾಟಕದಲ್ಲೇ ನಮ್ಮ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಕರ್ನಾಟಕದಲ್ಲೇ ಪ್ರಥಮ ಸ್ಥಾನ ಪಡೆದ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ 125 ಶಾಖೆಗಳನ್ನು ತೆರೆಯುವ ಗುರಿ ಹಾಕಿಕೊಳ್ಳಲಾಗಿದ್ದು, ಪ್ರಾರಂಭದಲ್ಲಿ 400 ಸದಸ್ಯರಿಂದ 10 ಲಕ್ಷ ರೂ. ಬಂಡವಾಳದಿಂದ ಪ್ರಾರಂಭವಾಗಿ ಪ್ರಸ್ತುತ 2 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 21.60 ಕೋಟಿ ರೂ. ಶೇರು ಬಂಡವಾಳ ಹೊಂದಿದೆ. ಪ್ರತಿ ವರ್ಷ ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ಹಂಚಿಕೆ ಮಾಡಿದ ಕರ್ನಾಟಕದ ಏಕೈಕ ಸಹಕಾರಿ ಸಂಘವಾಗಿದೆ. ಪ್ರದಾನ ಕಛೇರಿ ಸಹಿತ ಎಲ್ಲಾ ಶಾಖೆಗಳು ಗಣಕೀಕೃತಗೊಂಡು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗ್ರಾಹಕರಿಗೆ ಎಸ್ಎಂಎಸ್ ಸೌಲಭ್ಯ, ಠೇವುಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಹಣ ವರ್ಗಾವಣೆಗಾಗಿ ಎನ್ಇಎಫ್ಟಿ/ಆರ್ಟಿಜಿಎಸ್ ಜೊತೆಗೆ ಸೌಹಾರ್ದ ಮಾದರಿಯಲ್ಲಿ ಪ್ರಥಮ ಬಾರಿಗೆ ಎಟಿಎಂ ಸೌಲಭ್ಯ ನೀಡುವುದರ ಜೊತೆಗೆ ಸದಸ್ಯರಿಗೆ ಜೀವವಿಮೆ ಮತ್ತು ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಎಸ್ ಬ್ಯಾಂಕ್ ಸಹಯೋಗದೊಂದಿಗೆ ಸ್ವಂತ ಐಎಫ್ಎಸ್ಸಿ ಕೋಡ್ ಪಡೆದು ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಿದ ಹೆಗ್ಗಳಿಕೆ ನಮ್ಮ ಸಹಕಾರಿಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಜ್ಯೋತಿ ಬೆಳಗಿಸಿ ಸಂಸ್ಥೆಗೆ ಚಾಲನೆ ನೀಡಿದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಸಂಸ್ಥೆಗೆ ಭೇಟಿ ನೀಡಿ, ಶುಭ ಹಾರೈಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಎಸ್.ದತ್ತಾತ್ರಿ, ವಡ್ನಾಳ್ ರಾಜಣ್ಣ, ಉದ್ಯಮಿ ಓಂಕಾರಪ್ಪ, ಬಿಜೆಪಿ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಎಸ್., ಮಂಜುನಾಥ್, ಶ್ರೀನಾಗ್ ಮತ್ತು ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
