ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ 29
ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶದ ಸಂಪರ್ಕ ಸೇತುವೆಗಳಾದ ಸುತ್ತ ಸೇತುವೆ ಮತ್ತು ಬೆಕ್ಕೋಡಿ ಸೇತುವೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಶುಕ್ರವಾರ ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ನಡೆಸಿದರು.
ಸಂಪರ್ಕ ಕ್ರಾಂತಿಗೆ ಅತ್ಯಂತ ನಿರ್ಣಾಯಕವಾಗಿರುವ ರಾಷ್ಟ್ರೀಯ ಹೆದ್ದಾರಿ-766C (NH-766C) ರಸ್ತೆ ಅಭಿವೃದ್ಧಿ ಯೋಜನೆಯಡಿ, ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ತಲೆಎತ್ತಲಿರುವ ಎರಡು ಪ್ರಮುಖ ಬೃಹತ್ ಸೇತುವೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಒಟ್ಟು 13.832 ಕಿ.ಮೀ ಉದ್ದದ ಸಂಪೂರ್ಣ ಮರು-ಜೋಡಣೆ ಒಳಗೊಂಡಿರುವ ಯೋಜನೆ ಇದಾಗಿದೆ. ಈ ಬೃಹತ್ ಯೋಜನೆಯ ಒಟ್ಟು ಮಂಜೂರಾದ ವೆಚ್ಚ ರೂ.313.56 ಕೋಟಿ ರೂ.ಗಳಾಗಿದೆ. ಮಲೆನಾಡಿನ ಸಾರಿಗೆ ವ್ಯವಸ್ಥೆಯನ್ನೇ ಬದಲಾಯಿಸಲಿರುವ ಈ ಯೋಜನೆಯ ಪ್ರಗತಿಯನ್ನು ವೇಗಗೊಳಿಸಲು ಇಲಾಖೆಯ ಮುಖ್ಯ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರಿಗೆ ಸಂಸದರು ಸೂಚಿಸಿದರು.
ಸೇತುವೆಗಳ ತಾಂತ್ರಿಕ ವಿವರ ಹಾಗೂ ವಿಶೇಷತೆ: ಸೇತುವೆ 1 (ಚೈನೇಜ್ 2+010 ಕಿ.ಮೀ.ನಿಂದ 3+550 ಕಿ.ಮೀ.): ಕಾಮಗಾರಿ ಸ್ಥಳ ವೀಕ್ಷಿಸಿ ಗುಣಮಟ್ಟ ಪರಿಶೀಲಿಸಲಾಯಿತು. ಈ ಸೇತುವೆಯು ಸಾರ್ವಜನಿಕರ ಅನುಕೂಲಕ್ಕಾಗಿ ಫುಟ್ಪಾತ್ ವ್ಯವಸ್ಥೆಯೊಂದಿಗೆ ಒಟ್ಟು 16.00 ಮೀಟರ್ ಅಗಲವನ್ನು (11.00 ಮೀಟರ್ ಕ್ಯಾರೇಜ್ ವೇ) ಹೊಂದಿರಲಿದೆ. ಸೇತುವೆ 2 (ಚೈನೇಜ್ 6+730 ಕಿ.ಮೀ.ನಿಂದ 7+430 ಕಿ.ಮೀ) : ಹಿನ್ನೀರಿನ ಮತ್ತೊಂದು ಪ್ರಮುಖ ಕೊಂಡಿಯಾಗಿರುವ ಈ ಭಾಗದ ಕಾಮಗಾರಿಯ ತಾಂತ್ರಿಕ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು. ಇದು ಸಹ ಫುಟ್ಪಾತ್ ಸೇರಿದಂತೆ ಒಟ್ಟು 16.00 ಮೀಟರ್ ವೈಜ್ಞಾನಿಕ ಅಗಲದೊಂದಿಗೆ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ನಿಗದಿಪಡಿಸಲಾದ ಅವಧಿಯೊಳಗೆ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ವೇಗವನ್ನು ಹೆಚ್ಚಿಸುವುದು. ಹಿನ್ನೀರು ಪ್ರದೇಶವಾಗಿರುವುದರಿಂದ ಪರಿಸರ ಸಮತೋಲನ ಕಾಯ್ದುಕೊಂಡು, ಅತ್ಯುನ್ನತ ಗುಣಮಟ್ಟದ ಇಂಜಿನಿಯರಿಂಗ್ ಮಾನದಂಡಗಳೊಂದಿಗೆ ಸುಸ್ಥಿರ ಸೇತುವೆಗಳನ್ನು ನಿರ್ಮಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
