ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.12
ಬಾಲ ಕಾರ್ಮಿಕ ಪದ್ದತಿ ವಿರುದ್ದ ಆಂದೋಲನ ಅಗತ್ಯವಾಗಿದ್ದು, ಆಗ ಮಾತ್ರ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ದತಿಯನ್ನು ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ ಎಸ್ ಸಂತೋಷ್ ಮಕ್ಕಳಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ದೇಶೀಯ ವಿದ್ಯಾಶಾಲಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಡಿವಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ “ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ-2026” ಉದ್ಘಾಟಿಸಿ ಅವರು ಮಾತನಾಡಿದರು.
ಗಮನಿಸಿ: ಮೋದಿ 12 ವರ್ಷದಲ್ಲಿ 12 ಐತಿಹಾತಿಕ ನಿರ್ಣಯ: ಬಿ.ವೈ. ರಾಘವೇಂದ್ರ
ಶಿಕ್ಷಣವು ಮಕ್ಕಳ ಬದುಕು ಸಂಪೂರ್ಣಗೊಳಿಸುತ್ತದೆ. ಆದರೆ ಬಾಲ ಕಾರ್ಮಿಕ ಪದ್ದತಿ ಅದೇ ಶಿಕ್ಷಣವನ್ನು ಮೊಟಕುಗೊಳಿಸಿ ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತದೆ. ಇದರ ವಿರುದ್ದ ನಾವೆಲ್ಲಾ ಹೋರಾಡಬೇಕಿದೆ. ಶಿಕ್ಷಣ ಮಕ್ಕಳ ಹಕ್ಕು ಅದನ್ನು ಕೊಡಿಸುವಲ್ಲಿ ನಮ್ಮೆಲ್ಲಾ ಪಾತ್ರ ಹಿರಿದು. ಆ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪೋಕ್ಸೊ, ಬಾಲ ಕಾರ್ಮಿಕ ಪದ್ದತಿಯಿಂದ ಮಕ್ಕಳ ಹಕ್ಕಗಳು ಉಲ್ಲಂಘನೆಯಾಗುತ್ತಿದೆ. ಮಕ್ಕಳಿಗಾಗಿ ಅವರ ಹಕ್ಕುಗಳ ರಕ್ಷಣೆಗೆ ಸರ್ಕಾರವು ಅನೇಕ ಯೋಜನೆಯನ್ನು ತರಲಾಗಿದೆ. ಆದರೂ ಈ ಪದ್ದತಿಗಳು ನಮ್ಮ ಸುತ್ತಮುತ್ತಲಿನಲ್ಲಿವೆ. ಹಾಗಾಗಿ ನಿಮ್ಮ ಸುತ್ತಮುತ್ತಲಿನಲ್ಲಿ ಬಾಲ ಕಾರ್ಮಿಕರು ಕಂಡು ಕೂಡಲೇ 1098 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮಕ್ಕಳಿಗೆ ಸೂಚಿಸಿದರು.
“ದೇವರು ಯಾವಗಲು ನಮ್ಮ ಜೊತೆ ಇರುತ್ತಾನೆ” , “ಇವತ್ತು ನನ್ನ ದಿನ” “ನಾನು ಇದನ್ನು ಮಾಡುತ್ತೇನೆ” , “ನಾನೇ ಉತ್ತಮ”, “ನಾನೇ ಗೆಲ್ಲುವುದು” ಎಂಬ ಐದು ಸೂತ್ರಗಳನ್ನು ಜೀವನ ನಡೆಸಲು ಮಾಜಿ ರಾಷ್ಟçಪತಿ ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಹಾಕಿಕೊಟ್ಟಿದ್ದಾರೆ. ಈ ಮಂತ್ರಗಳು ನಿಮ್ಮ ನಿತ್ಯಕರ್ಮ ಸಹಾಯವಾಗುತ್ತದೆ. ಇದರಿಂದ ನಿಮ್ಮ ಮನಸ್ಸು ಒಳ್ಳೆಯ ಕಡೆ ಸಾಗುತ್ತದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಾಜುದ್ದೀನ್ ಖಾನ್ ಮಾತನಾಡಿ, ಇತ್ತೀಚಿಗೆ ಮಕ್ಕಳು ಮೊಬೈಲ್ ದಾಸ್ಯರಾಗಿದ್ದಾರೆ. ಬದಲಾಗುತ್ತಿರುವ ತಂತ್ರಜ್ಞಾನದಿಂದ ಮಕ್ಕಳು ತಮ್ಮ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು ಇದರಿಂದ ಹೊರ ಬಂದು ಶಿಕ್ಷಣದ ಕಡೆ ಗಮನ ಕೊಡಬೇಕು. ತಂದೆ ತಾಯಿ ನಿಮ್ಮ ಮೇಲೆ ನಿರೀಕ್ಷೆ ಇಟ್ಟಿರುತ್ತಾರೆ. ಅವರ ಆಸೆಯನ್ನು ಈಡೇರಿಸಿ ಎಂದು ಕಿವಿಮಾತು ಹೇಳಿದರು.
ಬಾಲ ಕಾರ್ಮಿಕ ಪದ್ದತಿ ಮತ್ತು ದುಶ್ಚಟ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. 7 ಮತ್ತು 8 ನೇ ತರಗತಿ ಮಕ್ಕಳು ಗಾಂಜಾ, ಡ್ರಗ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ದೂರ ಉಳಿಯಬೇಕೆಂದರೆ ಉತ್ತಮ ಶಿಕ್ಷಣ ಜೊತೆಗೆ ಉತ್ತಮ ಗೆಳೆತನ ಪಡೆಯುವುದು ಮುಖ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕ ಕಾರ್ಮಿಕ ಜಿಲ್ಲಾ ಅಧಿಕಾರಿ ವೇಣುಗೋಪಾಲ್ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಅರ್. ರಾಘವೇಂದ್ರ ಸ್ವಾಮಿ, ಡಿವಿಎಸ್ ಸಂಸ್ಥೆಯ ಅಧ್ಯಕ್ಷರಾದ ಬಸಪ್ಪಗೌಡ , ಡಿವಿಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್ ಪಿ ದಿನೇಶ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್, ಸಂಪನ್ಮೂಲ ವ್ಯಕ್ತಿಯಾದ ದಿವಕರ್ ಆರ್, ಕಾಲೇಜಿನ ಪ್ರಾಂಶುಪಾಲರಾದ ಸವಿತಾ ಎನ್ ರಾವ್, ವೆಂಕಟೇಶ್, ಕಾರ್ಮಿಕ ಇಲಾಖೆ ಅಧಿಕಾರಿಗಳು, ಡಿವಿಎಸ್ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
