ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.18
ಹೊಸ ಆಟೋಗಳಿಗೆ ನೀಡುತ್ತಿರುವ ಪರವಾನಗಿಗಳನ್ನು ಸ್ಥಗಿತಗೊಳಿಸಬೇಕು ಮತ್ತು ಆಟೋ ಚಾಲಕರ ಕುಂದು-ಕೊರತೆಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ತಮ್ಮ ಆಟೋಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗಮನಿಸಿ: ಜುಲೈ 11 ರಂದು ಎರಡನೇ ರಾಷ್ಟ್ರೀಯ ಲೋಕ್ ಅದಾಲತ್
ನಗರದಲ್ಲಿ ಆಟೋಗಳ ಸಂಖ್ಯೆ ಅಧಿಕವಾಗಿದ್ದು, ಹೊಸ ಆಟೋಗಳಿಗೆ ನೀಡುತ್ತಿರುವ ಪರವಾನಿಗೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಪ್ರೀಪೇಡ್ ವ್ಯವಸ್ಥೆಯನ್ನು ಮರು ಸರ್ವೇಮಾಡಬೇಕು. ಶಿವಮೊಗ್ಗ ನಗರ ವ್ಯಾಪ್ತಿಯು ಕಡಿಮೆ ಇರುವುದರಿಂದ ಬೈಕ್ ರ್ಯಾಪಿಡೋ, ನಮ್ಮ ಯಾತ್ರಿ ಮುಂತಾದ ಆ್ಯಪ್ಗಳಿಗೆ ಕಾರ್ಯನಿರ್ವಹಿಸದಂತೆ ನಿರ್ಬಂಧ ವಿಧಿಸಬೇಕು. ಪ್ರಾಮಾಣಿಕ ಆಟೋ ಚಾಲಕರಿಗೆ ಸರ್ಕಾರಿ ಸೌಲಭ್ಯ ಒದಗಿಸಬೇಕು. ಗ್ಯಾಸ್ಬೆಲೆ, ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆಟೋ ಚಾಲಕರಿಗೆ ಕನಿಷ್ಠ ಬಾಡಿಗೆ ರೂ.50 ನಿಗಧಿಪಡಿಸಬೇಕು. ಗ್ಯಾಸ್ ಬಂಕ್ಗಳಲ್ಲಿ ಒಂದೇ ರೀತಿಯ ಬೆಲೆ ಇಲ್ಲದಿರುವ ಕಾರಣ ಚಾಲಕರಿಂದ ಕೆಲವು ಬಂಕ್ಗಳಲ್ಲಿ ಅನಧೀಕೃತವಾಗಿ ಅಧಿಕ ಹಣ ಪಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರೈಲ್ವೆ ಸ್ಟೇಷನ್ ಆಟೋ ನಿಲ್ದಾಣದ ಹತ್ತಿರ ಪರವಾನಿಗೆ ಇಲ್ಲದ ಸಿಟಿಬಸ್ಗಳನ್ನು ತಡೆಹಿಡಿಯಬೇಕು ಎಂದು ಸಂಘ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರಾದ ಅಲ್ಲಾಭಕ್ಷಿ, ಅಧ್ಯಕ್ಷರಾದ ಅಜ್ಗರ್ ಭಾಷಾ, ಗೌರವ ಅಧ್ಯಕ್ಷ ಅನ್ವರ್ ಅಹ್ಮದ್ (ಅನ್ನು) ಉಪಾಧ್ಯಕ್ಷ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಹರೀಶ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಎ.ಎನ್. ಮತ್ತಿತರರಿದ್ದರು
