ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.19:
ಅನುದಾನವನ್ನು ದುರುಪಯೋಗ ಮಾಡಿರುವ ಕುವೆಂಪು ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಕಿಯೋನಿಕ್ಸ್ ಸಂಸ್ಥೆಯ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಿಸಿ ಜೈಲಿಗೆ ಕಳಿಸಬೇಕು ಹಾಗೂ ದುರುಪಯೋಗ ಪಡಿಸಿಕೊಂಡಿರುವ 4.25 ಕೋಟಿ ಹಣವನ್ನು ಸರ್ಕಾರ ವಾಪಾಸ್ ಪಡೆಯುವಂತೆ ಡಿಎಸ್ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಆಗ್ರಹಿಸಿದರು.
ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ವಿವಿಯಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲು 2021-22 ಸಾಲಿನಲ್ಲಿ ಬಿಡುಗಡೆಯಾಗಿರುವ 4.25 ಕೋಟಿ ರೂ ಬಳಕೆಯಾಗದೆ ದುರುಪಯೋಗವಾಗಿದೆ ಎಂದು ದೂರಿದರು.
ಗಮನಿಸಿ: ಅಕ್ರಮ ಮನೆಗಳನ್ನು ಸಕ್ರಮಗೊಳಿಸಿ: ಕಲ್ಲೂರು ಮೇಘರಾಜ್
ಹಿಂದಿನ ಕುಲಪತಿ ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಅನುರಾಧ.ಜಿ, ಪ್ರಾಧ್ಯಾಪಕಿ ಪ್ರೋ.ಗೀತಾ, ಹಣಕಾಸು ಅಧಿಕಾರಿಗಳಾದ ಎಸ್.ರಾಮಕೃಷ್ಣ, ಡಾ.ವೈ.ಎನ್.ರಾಮಚಂದ್ರ ಇವರುಗಳು ಹಣ ದುರುಪಯೋಗ ಮಾಡಿಕೊಂಡಿದ್ದು, ಈ ಐವರ ವಿರುದ್ದ ಭದ್ರಾವತಿ ನ್ಯಾಯಾಲಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ದೂರು ದಾಖಲಿಸಿದ್ದಾರೆ. ಇದಕ್ಕೆ ಹೈಕೊರ್ಟ್ ತಡೆ ಆಜ್ಞೆ ತಂದಿದ್ದಾರೆ ಎಂದರು.
ಈ ಹಗರಣಕ್ಕೆ ಸಂಬಂಧಿಸಿದಂತೆ ಈ ಮಧ್ಯೆ ರಾಜ್ಯಪಾಲರು ಸಂಪೂರ್ಣ ತನಿಖೆ ನಡೆಸುವಂತೆ ನಿವೃತ್ತ ನ್ಯಾಯಾಮೂರ್ತಿ ಆರ್.ಗುರುರಾಜನ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಸಮಿತಿಯನ್ನು ರಚಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಈ ಸಂಬಂಧಿಸಿದಂತೆ ಈಗಾಗಲೇ ಹಲವು ಸಮಿತಿಗಳು ತನಿಖೆ ನಡೆಸಿ ಹಗರಣ ನಡೆಸಿದ್ದು ನಿಜವೆಂದು ವರದಿ ಸಲ್ಲಿಸಿವೆ. ಆದರಿಂದ ಈ ಐವರು ಮೇಲೆ ಕೂಡ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಏಳುಕೋಟಿ, ಬಿ.ಕೃಷ್ಣಪ್ಪ,, ಪ್ರೊ.ಚಂದ್ರಪ್ಪ ಜೋಗಿ, ಹರಿಗೆ ರವಿ, ಎಂ.ರಮೇಶ್ ಚಿಕ್ಕಮರಡಿ, ಜಿನಹಳ್ಳಿ ಅಶೋಕ್, ಗಂಗಮಾಳಮ್ಮ, ಬಸವರಾಜು ಹಸ್ವಿ, ಅತ್ತಿಗುಂದ ಕರಿಯಪ್ಪ ಮುಂತಾದವರು ಇದ್ದರು.
