ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ. 30
ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ವಿಶೇಷ ಘಟಕ ಯೋಜನೆಯ ಅನುದಾನ ದುರ್ಬಳಕೆಯನ್ನು ಖಂಡಿಸಿ ಮತ್ತು ಭೂಮಿ, ವಸತಿ ಸೌಲಭ್ಯ ಹಾಗೂ ಬ್ಯಾಕಲಾಗ್ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯಿಂದ ಜುಲೈ 3 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ದಸಂಸ ವಿಭಾಗೀಯ ಸಂಚಾಲಕ ಟಿ.ಎಸ್.ಹಾಲೇಶಪ್ಪ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಸೆ, ಅಮಿಷಗಳ ಮೂಲಕ ದಲಿತರ ಮತ ಪಡೆದು ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಶೋಷಿತ ಸಮುದಾಯಗಳನ್ನು ನಿರಂತರವಾಗಿ ವಂಚಿಸುತ್ತಾ ಬಂದಿದ್ದು, ಪರಿಶಿಷ್ಠರಿಗೆ ಮೀಸಲಿಟ್ಟ ವಿಶೇಷ ಘಟಕ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಗಮನಿಸಿ: ಧರ್ಮೇಂದ್ರ ಪ್ರದಾನ್ ರಾಜೀನಾಮೆಗೆ ಆಗ್ರಹಿಸಿ ನಾಳೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆನ್ನುವ ಉದ್ದೇಶದಿಂದ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ) ಯು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯಾದ್ಯಂತ ನೂರಾರು ದಲಿತ ಸಂಘಟನೆಯ ಕಾರ್ಯಕರ್ತರು ಅದರ ಗೆಲುವಿಗೆ ಶ್ರಮಿಸಿದ್ದಾರೆ. ಆದರೆ ಕಾಂಗ್ರೆಸ್ ಅದ್ಯಾವುದನ್ನು ನೆನಪಲಿಟ್ಟುಕೊಳ್ಳದೆ ದಲಿತ ವಿರೋಧಿ ನೀತಿಯನ್ನು ತೋರುತ್ತಾ ಬರುತ್ತಿದೆ.
ಪರಿಶಿಷ್ಟರ ಭೂ ರಹಿತರ ಕುಟುಂಬಕ್ಕೆ ಹಾಗೂ ಭೂ ಹೀನ ಕೃಷಿ ಕಾರ್ಮಿಕರಿಗೆ ಕನಿಷ್ಠ 2 ಎಕರೆ ಭೂಮಿ ಒದಗಿಸಬೇಕು, ಇದಕ್ಕೆ ಪೂರಕವಾಗಿ ಭೂ ಸುದಾರಣೆ ಕಾಯ್ದೆಗೆ ತಿದ್ದುಪಡಿತರಬೇಕು, ಅರಣ್ಯ ವಾಸಿಗಳು ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ರಚಿಸಿರುವ ಡಿಸಿ ಆರ್ ಇ ಪೊಲೀಸ್ ಠಾಣೆಗಳಿಗೆ ಕರ್ತವ್ಯ ಬದ್ದ ಅಧಿಕಾರಿ/ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆನ್ನುವ ಬೇಡಿಕೆಗಳ ಜತೆಗೆ ಸುಮಾರು 19 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಸಮಾವೇಶದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಿಂದ ಸುಮಾರು 1500 ಕ್ಕೂ ಹೆಚ್ಚು ಕಾರ್ಯಕರ್ತರು ಈ ಸಮಾವೇಶಕ್ಕೆ ತೆರಳಲಿದ್ದಾರೆಂದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಹುಣುಸೋಡು ಶೇಷಪ್ಪ, ಜಿಲ್ಲಾ ಸಹಾಯಕ ಸಂಚಾಲಕ ಎಂ. ಆರ್. ಶಿವಕುಮಾರ್, ಮುಖಂಡರಾದ ಕೀರ್ತಿ, ಮೋನಿಕ, ಕಲ್ಲೇಶ್, ಮಧನ್, ಎಂ.ಪಿ. ಚಂದ್ರಪ್ಪ ಮತ್ತಿತರರು ಇದ್ದರು.
