ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.29
ರಾತ್ರೋರಾತ್ರಿ ನಮ್ಮ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸುವ ಕೆಲಸ ಸರ್ಕಾರ ಮಾಡಿದ್ದು, ಇದು ರೈತರಿಗೆ ಮಾಡಿದ ದ್ರೋಹ. ಇದನ್ನು ಖಂಡಿಸಿ ಜು. 31 ರಂದು ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಅವರು ಬುಧವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸಿಡಬ್ಲ್ಯೂಆರ್ ಸಿ ಯಲ್ಲಿ ವಾದ ಮಾಡುವ ನಮ್ಮ ವಕೀಲರು ಮತ್ತು ನ್ಯಾಯವಾದಿಗಳು ಇಲ್ಲಿನ ನೀರಿನ ಲಭ್ಯತೆ ವಿಚಾರದಲ್ಲಿ ಸಮಗ್ರ ಮಾಹಿತಿ ನೀಡುವಲ್ಲಿ ಸೋತಿದ್ದಾರೆ ಎಂದು ದೂರಿದರು.
ಗಮನಿಸಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ
ಕರ್ನಾಟಕದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾವೇರಿ ಕೊಳ್ಳದ ರೈತರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಮಳೆಯ ಅಭಾವವಿದೆ. ನಾವೀಗ ಎಚ್ಚರಿಕೆಯಿಂದ ಇರಬೇಕು ಮಳೆಯನ್ನು ನಂಬಿ ಬಿತ್ತನೆ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ರಾಜ್ಯದ ಮನವಿ ಮಾಡಿದ್ದರು. ಆದರೆ ಈಗ ತಮಿಳುನಾಡಿನ ನೀರನ್ನು ಹರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೆಆರ್ಎಸ್ ಡ್ಯಾಂನಲ್ಲಿ 17.39 ಟಿಎಂಸಿ ನೀರಿದ್ದು, ಡೆಡ್ ಸ್ಟೋರೇಜ್ ಶೇ.5ರಷ್ಟಿದ್ದು ನಮಗೆ 14.39 ಟಿಎಂಸಿ ಮಾತ್ರ ನೀರು ಲಭ್ಯವಿದ್ದು, ತಮಿಳುನಾಡಿಗೆ ನೀರು ಹರಿಬಿಟ್ಟರೆ ರೈತರ ಪರಿಸ್ಥಿತಿ ಏನಾಗಬಹುದು ? ಯಾಕೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದೀರಿ. ಮರು ಪರಿಶೀಲನೆ ಅರ್ಜಿ ತಕ್ಷಣ ಹಾಕಿ ಸಿಡಬ್ಲ್ಯೂಆರ್ ಸಿಗೆ ಮನವರಿಕೆ ಮಾಡಿಕೊಡಿ ಎಂದರು.
ಸರಕಾರವು ಸಿಡಬ್ಲ್ಯೂಆರ್ ಸಿ ಸೂಚನೆಗೂ ಮೊದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ. ಸಿಡಬ್ಲ್ಯೂಆರ್ ಸಿ ತೀರ್ಪಿನ ಕಾರಣ ರಾಜ್ಯವು ಹೆಚ್ಚು ನೀರನ್ನು ಬಿಡಬೇಕಾಗುತ್ತದೆ. ವಾಸ್ತವಾಂಶವನ್ನು ರಾಜ್ಯ ಸರಕಾರವು ತಿಳಿಸಬೇಕಿತ್ತಲ್ಲವೇ? ಕಾವೇರಿ ಜನಾನಯನ ಪ್ರದೇಶದ ರೈತರು ಕುಡಿಯುವ ನೀರಿಗೂ ತೊಂದರೆ ಎದುರಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಸರಕಾರವು ರಾಜ್ಯದ ರೈತರಿಗೆ ಮೋಸ ಮಾಡಿದೆ. ಯುಪಿಎ ಪಾಲುದಾರ ತಮಿಳುನಾಡು ಮುಖ್ಯಮಂತ್ರಿಯನ್ನು ಖುಷಿಯಿಂದಿಡಲು ಅದು ಕ್ರಮ ಕೈಗೊಂಡಿದೆ. ಇದೆನ್ನೆಲ್ಲಾ ಬದಿಗೊತ್ತಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಕರ್ನಾಟಕಕ್ಕೆ ಸಾಕಷ್ಟು ನೀರಿದ್ದರೆ ಬಳಿಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ಮಾಡಬಹುದು ಎಂದರು.
ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಎರಡುವರೆ ಲಕ್ಷ ಹುದ್ದೆಗಳು ಖಾಲಿಯಿದೆ. ಮೀಸಲಾತಿ ನೆಪವೊಡ್ಡಿ ಹುದ್ದೆ ಭರ್ತಿ ಮಾಡದೆ ಯುವಕರ ಜೀವನ ಹಾಳು ಮಾಡುತ್ತಿದ್ದಾರೆ. ಪಿಡಿಓ, ಪಶುವೈದ್ಯ ನೇಮಕಾತಿ 400 ಕೋಟಿಗೂ ಹೆಚ್ಚು ಮೊತ್ತದ ಹಗರಣವಾಗಿದೆ. ಪಶುವೈದ್ಯ ವಿದ್ಯಾರ್ಥಿಗಳು ಈ ಬಗ್ಗೆ ದಾಖಲೆ ಸಹಿತ ದೂರು ನೀಡಲು ಠಾಣೆಗೆ ಬೆಳಿಗ್ಗೆ ಹೋದರೆ ಮಧ್ಯರಾತ್ರಿ 3 ಗಂಟೆಗೆ ಎಫ್ಐಆರ್ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಮಾಲತೇಶ್, ಹರಿಕೃಷ್ಣ, ಚಂದ್ರಶೇಖರ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಮೋಹನ್ ರೆಡ್ಡಿ, ಶ್ರೀನಾಗ್, ಶರತ್ ಕಲ್ಯಾಣಿ ಮತ್ತಿತರರಿದ್ದರು.
