ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.30
ರಾಜ್ಯದಲ್ಲಿ ಫೇಸ್ಬುಕ್, ವ್ಯಾಟ್ಸಪ್ ನಿಯಂತ್ರಣ ಮಾಡುವ ಹೊಸ ಇಲಾಖೆ ಆರಂಭವಾಗಿದ್ದು, ಪ್ರಿಯಾಂಕ್ ಖರ್ಗೆ ವ್ಯಾಟ್ಸಪ್ ಹಾಗೂ ಫೇಸ್ಬುಕ್ ನಿಯಂತ್ರಣ ಸಚಿವರಾಗಿ ಮಾರ್ಪಾಡಾಗಿದ್ದಾರೆ. ಈಗ ರಾಜ್ಯದಲ್ಲಿ ಗೃಹ ಇಲಾಖೆ ಎಂಬುದು ಇಲ್ಲವೇ ಇಲ್ಲ ಎಂದು ಶಾಸಕ ಸುನೀಲ್ ಕುಮಾರ್ ವ್ಯಂಗ್ಯವಾಡಿದರು.
ಅವರು ಗುರುವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್ ದಂಧೆಗಳು, ಅಪರಾಧಗಳು, ಕೊಲೆ ಪ್ರಕರಣಗಳು ಸೇರಿದಂತೆ ಸಾರ್ವಜನಿಕ ಭದ್ರತೆಯ ವಿಷಯಗಳತ್ತ ಸರ್ಕಾರ ಗಮನ ಹರಿಸದೆ, ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳ ಭಾಷಣಗಳು, ಫೇಸ್ಬುಕ್ ಮತ್ತು ವಾಟ್ಸಾಪ್ ಪೋಸ್ಟ್ಗಳನ್ನು ಹುಡುಕಿ ಕ್ರಮ ಕೈಗೊಳ್ಳುವುದರಲ್ಲೇ ಕಾಲ ಕಳೆಯುತ್ತಿದೆ ಎಂದರು.
ಗಮನಿಸಿ: ಆರ್ಎಸ್ಎಸ್ ನೊಂದಣಿಗೆ ಕಾಂಗ್ರೆಸ್ನಲ್ಲೆ ಅಭಿಮತವಿಲ್ಲ: ಆರಗ ಹೇಳಿದ್ದೇನು?
ಬಿಜೆಪಿ ಶಾಸಕರಿಗೆ ನೀಡಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿ, ಸಿ.ಟಿ. ರವಿ ಹಾಗೂ ಯಶ್ಪಾಲ್ ಸುವರ್ಣ ಅವರಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವವರು ಹಾಗೂ ವಿರೋಧಿಸುವವರ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಬಿಡದಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.
ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಪ್ರಕರಣಗಳು ಹಾಗೂ ವಿದ್ಯಾರ್ಥಿಗಳ ವಿರುದ್ಧವೂ ಪ್ರಕರಣ ದಾಖಲಿಸುತ್ತಿದ್ದಾರೆ. ಒಟ್ಟು ಕಾಂಗ್ರೆಸ್ ವಿರುದ್ದ ಯಾರು ಮಾತನಾಡಬಾರದು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ನಮ್ಮನ್ನು ಸರ್ಕಾರ ಎದುರಿಸುವ ಪ್ರಯತ್ನ ಮಾಡುತ್ತಿದೆ. ನಾವು ಗೋಲಿಬಾರ್, ಲಾಠಿ ಚಾರ್ಜ್ ಳಿಗೆ ಎದುರಲಿಲ್ಲ. ಇಂತಹ ನೋಟಿಸ್ಗಳಿಗೆ ಹೆದರುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ಸರ್ಕಾರ ಆ ಭ್ರಮೆಯಲ್ಲಿ ಇದೆ.
ರಾಜ್ಯದಲ್ಲಿ ಇನ್ನೂ ಸುಮಾರು ಒಂದೂವರೆ ವರ್ಷ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಸಹಿಸಿಕೊಳ್ಳಬೇಕಾಗಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ನೋಟಿಸ್ಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ರೈತರ ಸಮಸ್ಯೆ ಅಧ್ಯಯನ ಕುರಿತು ಮಾತನಾಡಿ,ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಆರು ತಂಡಗಳನ್ನು ರಚಿಸಿ ಪ್ರವಾಸ ನಡೆಸುತ್ತಿದ್ದು, ರೈತರ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಅಧ್ಯಯನ ನಡೆಸಲಾಗಿದೆ. ರಾಜ್ಯ ಸರ್ಕಾರ ಮಾಡಬೇಕಾಗುದ್ದ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದೇವೆ.
ಸರ್ಕಾರದಲ್ಲಿ ತೋಟಗಾರಿಕೆ, ಕೈಗಾರಿಕಾ, ಕೃಷಿ ಹಾಗೂ ಸಹಕಾರ ಇಲಾಖೆಗಳ ಸಚಿವರಿಲ್ಲ. ಇಂತಹ ಅನಾಥಪ್ರಜ್ಞೆ ಕರ್ನಾಟಕದ ರೈತರಿಗೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ರೈತರಿಗೆ ಆತ್ಮವಿಶ್ವಾಸ ತುಂಬಲು ಹಾಗೂ ಅವರು ವಿಚಲಿತರಾಗದ್ದಂತೆ ಮಾಡಲು ಬಿಜೆಪಿ ಅಧ್ಯಯನ ನಡೆಸಿದ್ದು, ಇಲ್ಲಿ ಪರಿಸ್ಥಿತಿ ಅರಿತುಕೊಂಡು ಸತ್ಯ ಸಂಗತಿಯನ್ನು ವಿಧಾನಸಭೆಯಲ್ಲಿ ಮಂಡಿಸುತ್ತೇವೆ ಎಂದರು.
