ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.25
ತೀರ್ಥಹಳ್ಳಿಯ ಮೂರು ಸಹಕಾರ ಸಂಘಗಳಲ್ಲಿ ಅವ್ಯವಹಾರಗಳು ನಡೆದಿದ್ದು ಕೋಟ್ಯಾಂತರ ರೂ. ಭ್ರಷ್ಟಾಚಾರವಾಗಿದೆ. ಈ ಇಡೀ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ತೀರ್ಥಹಳ್ಳಿಯ ಸಹಕಾರ ಸಂಘಗಳ ಸಂತ್ರಸ್ತ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾನೀನ ಕಡಿದಾಳ ವಿಹಂಗಮ ಅವರು ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತೀರ್ಥಹಳ್ಳಿ ಸಮೃದ್ಧಿ ತೋಟಗಾರಿಕಾ ಉತ್ಪನ್ನ ಮತ್ತು ಮಾರಾಟ ಸಹಕಾರಿ ಸಂಘ, ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ, ಶರಾವತಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ಸದಸ್ಯರಿಂದ ಖಾಲಿ ಸ್ಟಾಂಪ್ ಪೇಪರ್ಗಳಲ್ಲಿ ಹಾಗೂ ಖಾಲಿ ಬಿಳಿಹಾಳೆಗಳಲ್ಲಿ ಸಹಿಮಾಡಿಸಿಕೊಂಡು ವಂಚಿಸಿದ್ದಾರೆ. ಸಾಲದ ವಿವರಗಳ ದಾಖಲಾತಿಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಮಂಜೂರಾತಿಗೆ ಸಂಬಂಧಪಟ್ಟಂತೆ ಯಾವ ವಿವರಗಳನ್ನಾಗಲೀ, ದೃಢೀಕರಣ ಪತ್ರಗಳನ್ನಾಗಲೀ, ನೀಡಿಲ್ಲ ಎಂದು ಆರೋಪಿಸಿದರು.
ಕೋವಿಡ್ ಸಮಯದಲ್ಲಿ ಸಾಲ ಮರುಪಾವತಿ ವಿಳಂಬವಾದ ಪರಿಸ್ಥಿತಿಯನ್ನೇ ದುರುಪಯೋಗಪಡಿಸಿಕೊಂಡು ಖಾಲಿ ಚೆಕ್ ಪಡೆದು ಹೆಚ್ಚಿನ ಮೊತ್ತ ನಮೂದಿಸಿ, ನ್ಯಾಯಾಲಯಗಳಲ್ಲಿ ಕೇಸು ದಾಖಲಿಸಿದ್ದಾರೆ. ಬಿಳಿ ಸ್ಟಾಂಪ್ಪೇಪರ್ ಮೇಲೆ ಸಹಿಮಾಡಿಸಿಕೊಂಡು ಆಸ್ತಿಗಳನ್ನೇ ಲಪಟಾಯಿಸುವ ಹುನ್ನಾರ ಮಾಡುತ್ತಿದ್ದಾರೆ. ಈಗಾಗಲೇ ಸಹಕಾರ ಸಂಘಗಳ ನಿಬಂಧಕರು ಈ ಎಲ್ಲಾ ಘಟನೆಗಳನ್ನು ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ. ಆದ್ದರಿಂದ ವಂಚನೆ ಮಾಡಿದ ಈ ಮೂರೂ ಸಂಸ್ಥೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘದಲ್ಲಿ ಕೂಡ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಚೆಕ್ಬೌನ್ಸ್ ಎಂಬ ಕೇಸುಗಳನ್ನು ಹಾಕಿ ಕಿರುಕುಳ ನೀಡುತ್ತಿದ್ದಾರೆ. ದಾಖಲಾತಿಗಳನ್ನು ಕೇಳಿದರೆ ಯಾವ ದಾಖಲಾತಿಗಳನ್ನು ನೀಡಿಲ್ಲ. ಈ ಮೂರೂ ಸಂಸ್ಥೆಗಳು ಒಬ್ಬರ ಅಧಿಕಾರದಲ್ಲೇ ಇರುತ್ತವೆ. ಒಂದು ರೀತಿಯ ತಂದೆ-ಮಕ್ಕಳ ಆಸ್ತಿಯಂತೆ ಇವು ಅಗಿವೆ. ಅಲ್ಲದೆ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಕೇವಲ ನೆಪಮಾತ್ರಕ್ಕೆ ನಡೆಸಿ ಕುಟುಂಬದ ಸದಸ್ಯರನ್ನೇ ನಿರ್ದೇಶಕರುಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಗಮನಿಸಿ: ಆದಿವಾಸಿಗಳಿಗೆ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿ: ಮಲ್ಲೇಶಪ್ಪ ಎಂ.ಸಿ.ಕವುಲಿ
ನಕಲಿ ದಾಖಲೆಗಳ ಆಧಾರದ ಮೇಲೆ ದಾವೆ ಸಲ್ಲಿಸಿದ್ದಾರೆ. ಸದಸ್ಯರು ಪಡೆದ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ತೋರಿಸಿ, ದಾಖಲೆಗಳನ್ನು ಸೃಷ್ಟಿಸಿ ಒಂದು ರೀತಿಯಲ್ಲಿ ಮೀಟರ್ ಬಡ್ಡಿ ವಸೂಲಿ ಮಾಡಿದ್ದಾರೆ. ಇದೂವರೆಗೂ ಯಾರಿಗೂ ಸಾಲಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲಾತಿಗಳನ್ನು ಕೇಳಿದರೂ ಕೊಡುತ್ತಿಲ್ಲ. ನೂರಾರು ಜನರು ಇವರ ಮೋಸಕ್ಕೆ ಒಳಗಾಗಿದ್ದಾರೆ. ಈ ಮೂರು ಸಂಸ್ಥೆಗಳಿAದ ಕೋಟಿ ಕೋಟಿ ಹಣ ದುರುಪಯೋಗವಾಗುತ್ತಿದೆ. ಮತ್ತು ನಾವು ಸಾಲ ವಾಪಾಸ್ಸು ಕೊಡುತ್ತೇವೆ. ಅದರ ವಿವರ ಕೊಡಿ ಎಂದು ಕೇಳಿದರೆ ಕೊಡುತ್ತಿಲ್ಲ. ಅವರಿಗೆ ಸಾಲಗಾರರ ಆಸ್ತಿಗಳನ್ನೇ ನುಂಗುವ ಯೋಚನೆ ಇದು ಎಂದು ಆರೋಪಿಸಿದರು.
ಸಂತ್ರಸ್ತೆ ಅನ್ನಪೂರ್ಣ ಆರ್. ಜವಳಿ ಮಾತನಾಡಿ, ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘದಲ್ಲಿ ಚಿಟ್ಫಂಡ್ ವ್ಯವಹಾರಗಳು ನಡೆಯುತ್ತಿವೆ. ಇಲ್ಲಿಯೂ ಕೂಡ ಸಾಕಷ್ಟು ಜನರಿಗೆ ವಂಚನೆಯಾಗಿದೆ. ಈ ಚಿಟ್ಫಂಡ್ ವ್ಯವಹಾರ ನಡೆಸಲು ಸಹಕಾರ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಈ ಬಗ್ಗೆ ವಿವರಗಳನ್ನು ಕೇಳಿದರೆ ಅದನ್ನು ನೀಡುತ್ತಿಲ್ಲ. ಚೀಟಿ ನಡೆಸಲು ಎಷ್ಟು ಗ್ರೂಪ್ ಮಾಡಲಾಗಿದೆ. ಸದಸ್ಯರು ಚೀಟಿ ಎತ್ತಿದಾಗ ಸಂಘ ಯಾವ ರೀತಿ ದಾಖಲೆಗಳನ್ನು ನೀಡಿದೆ. ಆ ಸಾಲಕ್ಕೆ ಚೀಟಿ ಹಣವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂಬುದು ಕೂಡ ಹೊರಬರಬೇಕಿದೆ. ನಾನೂ ಕೂಡ ಈ ಚೀಟಿಯ ಚಿಟ್ಫಂಡ್ನಲ್ಲಿ ಹಣಹಾಕಿ ಮೋಸ ಹೋಗಿದ್ದೇನೆ ನನ್ನಂತೆ ಹಲವರು ಚಿಟ್ಫಂಡ್ಗೆ ಹಣಹಾಕಿ ಕಳೆದುಕೊಂಡಿದ್ದಾರೆ ಎಂಬುದು ಬಯಲಾಗಬೇಕಾಗಿದೆ. ಹಣ ಕೇಳಿದರೆ ಖಾಲಿ ಚೆಕ್ಕಿಗೆ ಸಹಿ ಹಾಕಿದ್ದನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದಾರೆ ಎಂದರು.
ಒಟ್ಟಾರೆ ಈ ಮೂರು ಸಹಕಾರ ಸಂಘಗಳಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಮುಖ್ಯಮಂತ್ರಿಗಳು ಕೂಡ ಅಗತ್ಯಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆಗೆ ಟಿಪ್ಪಣಿ ಬರೆದಿದ್ದಾರೆ. ವಿನಾಃಕಾರಣ ಚೆಕ್ಬೌನ್ಸ್ ಪ್ರಕರಣಕ್ಕೆ ಸಂಘದ ಸದಸ್ಯರು ಸಿಲುಕಿದ್ದಾರೆ. ಈ ಎಲ್ಲಾ ಅವ್ಯವಹಾರಗಳನ್ನು ವಿಳಂಬಮಾಡದೆ ತನಿಖೆ ನಡೆಸಿ ಮೂರೂ ಸಹಕಾರ ಸಂಘಗಳ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಆರ್. ಪೂಜಾರ್ ಸೇರಿದಂತೆ ಹಲವರು ಸಂತ್ರಸ್ತರು ಹಾಜರಿದ್ದರು.
