ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.19
ಬಲಪಂಥೀಯ ಕೋಮುವಾದಿ ಶಕ್ತಿಗಳು ಗಂಗಾಜಲದ ಮೂಲಕ ದಲಿತ ನಾಯಕ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ್ದ ಜಾಗವನ್ನು ಶುದ್ದೀಕರಣ ಮಾಡಿದ್ದು, ಇದು ಇಡೀ ದಲಿತ ಸಮುದಾಯಕ್ಕೆ ಹಾಗೂ ಸಂವಿಧಾನಿಕ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ ಎಂದು ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಈ ಪ್ರಕರಣವನ್ನು ವಿರೋಧಿಸಿ ಬುಧವಾರ ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ಶಿವಮೊಗ್ಗ ಮಹಾನಗರ ಪಾಲಿಕೆಯ ಅಂಬೇಡ್ಕರ್ ಪತ್ರಿಮೆ ಎದುರು ಪ್ರತಿಭಟನೆ ನಡೆಸಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳ ಆದರೂ ಜಾತೀಯತೆ ಹಾಗೂ ಸಾಮಾಜಿಕ ತಾರತಮ್ಯ ಹೋಗಿಲ್ಲ. ಮನುವಾದಿ ಸಿದ್ದಾಂತದ ಸಂಘ ಪರಿವಾರದವರು ಹಾಗೂ ಕೋಮುವಾದಿ ಶಕ್ತಿಗಳು ಇಂತಹ ಜಾತಿ ತಾರತಮ್ಯವನ್ನು ಪೋಷಣೆ ಮಾಡುತ್ತಿದೆ.
ಸಂಘ ಪರಿವಾರದ ಮನುವಾದಿಗಳು ಈ ದೇಶದ ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ, ಇಲ್ಲಿನ ಕಾನೂನಿಗೂ ಬಗ್ಗೆ ಭಯವಿಲ್ಲ. ಈ ಘಟನೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಇದರಿಂದ ಅವರೊಳಗೆ ಇರುವ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯದ ಕೆಟ್ಟ ಮನಸ್ಥಿತಿಯನ್ನು ತೊರುತ್ತಿವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷ ನಾಯಕರು ಮಾತ್ರವಲ್ಲ, ಈ ದೇಶದ ಹಿರಿಯ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ. ಅಂತಹ ನಾಯಕ ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿ ಬಂದ ಎರಡು ದಿನಗಳ ಬಳಿಕ ಆ ಜಾಗ ಅಶುದ್ಧವಾಗಿದೆ ಎಂದು ಗಂಗಾಜಲದ ಮೂಲಕ ಶುದ್ಧೀಕರಣ ಮಾಡುವ ಕೋಮುವಾದಿಗಳು, ಈ ದೇಶದ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.
ಭಾರತ ದೇಶ ಸರ್ವ ರೀತಿಯಲ್ಲೂ ವಿಶ್ವ ಗುರುವಾಗಿದೆ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎನ್ನುವ ಗೃಹ ಸಚಿವ ಅಮಿತಾ ಷಾ ದೇಶದ ಸಂವಿಧಾನ ಮತ್ತು ದಲಿತ ಸಮುದಾಯಕ್ಕೆ ಆದ ಈ ಅವಮಾನದ ಘಟನೆಗೆ ಉತ್ತರ ನೀಡಬೇಕು ಎಂದು ಗ್ರಾಮಾಂತರ ಯುವ ಕಾಂಗ್ರೆಸ್ ಘಟಕ ಒತ್ತಾಯಿಸಿದೆ.
ಈ ಘಟನೆಗೆ ಕಾರಣರಾದವರನ್ನು ತಕ್ಷಣ ಗುರುತಿಸಿ, ಅನ್ವಯಿಸುವ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು. ಸಂವಿಧಾನ ವಿರೋಧಿ ಹಾಗೂ ಜಾತೀಯ ಮನೋಭಾವದ ಇಂತಹ ಕೃತ್ಯಗಳನ್ನು ಯಾವುದೇ ಸರ್ಕಾರ ಸಹಿಸಬಾರದು ಎಂದು ಪ್ರತಿಭಟನೆಯ ಮೂಲಕ ಗ್ರಾಮಾಂತರ ಯುವ ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಮಧುಸೂದನ್, ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್, ಬ್ಲಾಕ್ ಅಧ್ಯಕ್ಷರಾದ ಶಶಿಕುಮಾರ್, ಪ್ರವೀಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್,ಮಲಗಪ್ಪ ಶಿವು, ಆಕಾಶ್, ಬಾಬು,ತೌಫಿಕ್, ಸಚಿನ್, ಸಾಯಿ ಕುಮಾರ್, ನಾಗೇಂದ್ರ ಆಟೋಕಾ, ಕುಮಾರ್ ಹಾಗೂ ಸಾಕಷ್ಟು ಯುವಕರು ಪಾಲ್ಗೊಂಡಿದ್ದರು.
