ಶಿವಮೊಗ್ಗ ಟೆಲೆಕ್ಸ್ ಮೇ 27
ಆಕಾಶ್.ಆರ್.ಎಸ್
ಸಿದ್ದರಾಮಯ್ಯ ತನ್ನ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುವ ಸಮಯ ನಿಗದಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಡಿ.ಕೆ.ಶಿವಕುಮಾರ್ ಬಣಗಳು ಇದರಲ್ಲಿ ಯಶಸ್ವಿಯಾಗಿದೆ. ಆದರೆ ಇಡೀ ದೇಶದಲ್ಲಿ ರಾಹುಲ್ ಗಾಂಧಿ ಹರಡಿರುವ ಸೈದ್ಧಾಂತಿಕ ರಾಜಕಾರಣ ಹೋರಾಟದ ಸೋಲಿಗೆ ಇದು ಮುನ್ನುಡಿ.
ಇತ್ತೀಚಿನ ಕರ್ನಾಟಕದ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪೊಲಟಿಕಲ್ ಕಾಂಬಿನೇಷನ್ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಸೈದ್ದಾಂತಿಕತೆ ಮತ್ತು ಸಂಘಟನೆ ರಾಜಕೀಯ ವಲಯದಲ್ಲಿ ಎಷ್ಟು ಪ್ರಬಲವೆಂಬುದು ಇವೆರೆಡು ವ್ಯಕ್ತಿತ್ವ ತೊರಿಸಿದೆ. ರಾಜಕೀಯ ವಿರೋಧಗಳನ್ನು ಒಟ್ಟಿಗೆ ಎದುರಿಸಿದ್ದಾರೆ. ಆದರೆ ಇಂದಿನ ವಿದ್ಯಮಾನದಲ್ಲಿ ಹೈಕಮಾಂಡ್ ಎಡವಿದೆ. ಎರಡು ಪ್ರಬಲ ಸಮುದಾಯ ನಾಯಕರನ್ನು ಒಟ್ಟಿಗೆ ಅಧಿಕಾರಯುತದಲ್ಲಿ ಕರೆದುಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಯಂತವರು ಇದನ್ನು ಜವಬ್ದಾರಿಯುತವಾಗಿ ಮಾಡಿಕೊಂಡು ಬಂದಿದ್ದಾರೆ. ಅದರ ಮುಂದುವರೆದಂತೆ ಈಗ ಸಿಎಂ ಬದಲಾವಣೆ. ಬದಲಾವಣೆ ಹಾಗೂ ಒಬ್ಬರ ಬಳಿಯೇ ಅಧಿಕಾರ ಕೇಂದ್ರಿಕೃತವಾಗದೆ ಇನ್ನೊಬ್ಬರಿಗೆ ಹಂಚುವುದು ಇವೆಲ್ಲವು ಸರಿ ತೂಗುತ್ತಿದೆ. ಆದರೆ ಈ ಸರಿ ತೂಗುವಿಕೆಯಲ್ಲಿ ಸ್ವಷ್ಟತೆಯ ಬಗ್ಗೆಯು ಅರಿಯಬೇಕಿದೆ.
ರಾಹುಲ್ ಗಾಂಧಿ ಆಶಯ ಅಂತ್ಯ:
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯನವರ ನಡೆ ಅವರನ್ನು ಬೆಂಬಲಿಸಿದ ಜೀವಗಳಿಗೆ ನೋವು ಉಂಟು ಮಾಡಿದೆ. ಸಾಮಾಜಿಕ ನ್ಯಾಯವನ್ನು ತಪ್ಪಿಸುವಲ್ಲಿ ಒಂದಿಷ್ಟು ಕೈಗಳು ಅವರ ಕೈಯನ್ನು ಬೀಗಿಯಾಗಿ ಹಿಡಿದಿದ್ದು ಇದೆ. ಡಿ.ಕೆ.ಶಿವಕುಮಾರ್ ಅವರ ಪವರ್ ಸೆಂಟರ್ ಕೂಡ ಸಿದ್ದರಾಮಯ್ಯನವರ ಅಧಿಕಾರದ ಮೇಲೆ ಒಂದಿಷ್ಟು ಪ್ರಭಾವ ಬೀರಿದೆ. ಅದರ ಹೊರತಾಗಿ ಸಿದ್ದರಾಮಯ್ಯ ಸೈದ್ದಾಂತಿಕವಾಗಿ ರಾಜಿ ಆಗಿದ್ದು ಎಲ್ಲೂ ಇಲ್ಲ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಸಿದ್ದರಾಮಯ್ಯನವರು ಈಡೇರಿಸುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಸ್ವತಃ ರಾಹುಲ್ ಗಾಂಧಿಯವರೇ ಸಿದ್ದರಾಮಯ್ಯನೊಟ್ಟಿಗೆ ಸಂದರ್ಶನದಲ್ಲಿ ಹೇಳಿದ್ದರು. ಸಿದ್ದರಾಮಯ್ಯನವರು ಕೂಡ ರಾಹುಲ್ ಗಾಂಧಿ ಪ್ರಶ್ನೆಗೆ ಅಧಿಕಾರಕ್ಕಿಂತ ಸೈದ್ದಾಂತಿಕ ರಾಜಕಾರಣ ಮುಖ್ಯವೆಂದು ಹೇಳಿದ್ದರು. ಆದರೆ ಇದೆಲ್ಲರಾಚೆಗೂ ಸಿಎಂ ಬದಲಾವಣೆ ಆಗಿದೆ. ರಾಹುಲ್ ಗಾಂಧಿಯ ಜಾತ್ಯಾತೀತ ಆಶಯಕ್ಕೆ ಕೊನೆ ಮೊಳೆ ಅವರ ಕೈಯಿಂದಲೇ ಹೊಡೆಸಿದ್ದಾರೆ.
ಸೈದ್ದಾಂತಿಕ ಸ್ವಷ್ಟತೆ ಇಲ್ಲದ ರಾಜಕಾರಣ:
ಫ್ಯೂಡಲಿಸ್ಟ್ ಮನಸ್ಥಿತಿ ತುಂಬಿರುವ ಡಿ.ಕೆ.ಶಿವಕುಮಾರ್ ಎಷ್ಟೇ ರಾಜಕೀಯ ಸಂಘಟನಾ ಚತುರನಾದರೂ ಅವರೊಳಗೊಬ್ಬ ವ್ಯವಹಾರಿಕನು ಇದ್ದಾನೆ. ರಾಮನಗರ, ಕನಕಪುರದ ಭಾಗದ ಸರ್ಕಾರಿ ಅಧಿಕಾರಿಗಳಿಗೆ ಇದರ ಅನುಭವಾಗಿರುತ್ತದೆ. ಆದರೆ ಸಿಎಂ ಬದಲಾವಣೆ ರಾಜ್ಯಕ್ಕೆ ಲಾಭ ತರುವುದಕ್ಕಿಂತ ಬಿಜೆಪಿಗೆ ಹೆಚ್ಚಿನ ಲಾಭವಿದೆ. ಒಕ್ಕಲಿಗರ ಮತ ಕಾಂಗ್ರೆಸ್ ಕಡೆ ವಾಲುತ್ತದೆ ಎಂಬುದನ್ನು ಬಿಟ್ಟರೆ ಸೈದ್ದಾಂತಿಕವಾಗಿ ಆರ್ಎಸ್ಎಸ್ ಮತ್ತು ಡಿ.ಕೆ.ಶಿವಕುಮಾರ್ ಅವರ ಮನಸ್ಥಿತಿ ಒಂದೇ.
ಖಾಸಗಿ ಕಾರ್ಯಕ್ರಮವೊಂದರಲ್ಲಿ “ ತಾಯಿ, ಮಡದಿ, ಮಗಳ ಮೇಲೆ ಗಂಡು ಸದಾ ಒಂದು ಕಣ್ಣು ಇಟ್ಟಿರಬೇಕು”, ವಿಧಾನಸಭೆ ಕಲಾಪದಲ್ಲಿ ಆರ್ಎಸ್ಎಸ್ನ “ಸದಾ ವತ್ಸಲೆ” ಗೀತೆ ಹಾಡಿದ್ದು, “ ಕೊಯುಮತ್ತೂರು ನಲ್ಲಿ ಆದಿಯೋಗಿ ಕಾರ್ಯಕ್ರಮದಲ್ಲಿ ಅಮಿತ್ ಷಾ ಜೊತೆ” ಪಾಲ್ಗೊಂಡಿದ್ದು, ಇನ್ನು ಜೋತಿಷ್ಯ ಶಾಸ್ತ್ರ, ಮಠ ಮಾನ್ಯ, ದೇವಸ್ಥಾನ, ಹೋಮ ಹವನ, ಕುಂಭಮೇಳ ಹೀಗೆ ಹಲವಾರು ಆಚರಣೆಗಳಲ್ಲಿ ಡಿ.ಕೆ.ಶಿವಕುಮಾರ್ ಇದನ್ನು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯನವರನ್ನು ಹಿಂದೂ ಸಂಘಟನೆಗಳು, ಬಿಜೆಪಿ, ಆರ್ಎಸ್ಎಸ್ ವಿರೋಧಿಸುವಷ್ಟು ಡಿ.ಕೆ.ಶಿವಕುಮಾರ್ ಅವರನ್ನು ಯಾಕೆ ವಿರೋಧಿಸುವುದಿಲ್ಲ ಎಂಬುದಕ್ಕೆ ಇದಕ್ಕಿಂತ ಕಾರಣ ಬೇಕಿಲ್ಲ.
ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆ, ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ ಎಲ್ಲವೂ ಒಪ್ಪುವಂತದ್ದೆ ಆದರೆ ಈ ರಾಜ್ಯ ರಾಜಕಾರಣದಲ್ಲಿ ಸೈದ್ದಾಂತಿಕ ಸ್ವಷ್ಟತೆ ಇಲ್ಲದಿದ್ದರೆ ಆಂಧ್ರಪ್ರದೇಶ ಪವನ್ ಕಲ್ಯಾಣ್, ಕಂಗಾನ ರಾವತ್ ನಂತೆ ಪೊಲಟಿಕಲ್ ಡ್ರಾಮಾ ಆರಂಭವಾಗುವುದು ನಿಶ್ಚಳ.
ಈಗಾಗಲೇ ಆರ್ಎಸ್ಎಸ್ ಮತ್ತು ಬಿಜೆಪಿಯ ಕಣ್ಣು ದಕ್ಷಿಣ ಭಾರತದ ಮೇಲಿದೆ. ಪಂಚ ರಾಜ್ಯದ ಚುನಾವಣೆಯಲ್ಲಿ ಈಗಾಗಲೇ ಉತ್ತರ ಭಾರತದ ರಾಜ್ಯಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ಬಲಾಢ್ಯರಾಗಿದ್ದಾರೆ. ಇನ್ನುಳಿದಿರುವುದು ದಕ್ಷಿಣ ಮಾತ್ರ. ಅದರಲ್ಲಿ ಕೇರಳ, ತಮಿಳುನಾಡು, ತೆಲಂಗಾಣಗಳು ಸೈದ್ದಾಂತಿಕವಾಗಿ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಎದುರಿಸುತ್ತಾ ಬಂದಿದೆ. ಅದರ ಫಲಿತಾಂಶವೇ ಇಂದಿಗೂ ಆ ಭಾಗದಲ್ಲಿ ಅಧಿಕಾರ ಪಡೆಯಲು ಪರದಾಡುತ್ತಿರುವುದು. ಆದರೆ ದಕ್ಷಿಣದಲ್ಲಿ ಇವೆಲ್ಲ ರಾಜ್ಯಗಳಿಗಿಂತ ಕರ್ನಾಟಕ ವಿಭಿನ್ನ ಯಾಕೆಂದರೆ ಕೇರಳ, ತಮಿಳುನಾಡು ನಾರಾಯಣ ಗುರು, ಪೆರಿಯಾರ್ ನಂತಹ ಮಹಾನೀಯರು ಸಿದ್ದಾಂತಗಳು ಆಳವಾಗಿ ಬೇರೂರಿದೆ. ಅಲ್ಲಿನ ಜನಕ್ಕೆ ಸ್ವಷ್ಟ ನಿಲುವಿದೆ. ಕರ್ನಾಟಕ ಆಗಲ್ಲ. ಇಲ್ಲಿ ಪ್ರತಿ ಬಾರಿಯೂ ಪ್ರತಿಕ್ಷಣವೂ ಸೈದ್ದಾಂತಿಕವಾಗಿ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ದ ಹೋರಾಟ ಮಾಡಲೇ ಬೇಕು. ಜನರನ್ನು ಎಚ್ಚರಿಸುತ್ತಿರಲೇ ಬೇಕು. ರಾಹುಲ್ ಗಾಂಧಿಯ ನಿಲುವುಗಳು ಕೂಡ ಇದೆ. ಹಾಗಾಗಿ ಪ್ರತಿ ಬಾರಿ ವೇದಿಕೆಯಲ್ಲಿ ಆರ್ಎಸ್ಎಸ್, ಬಿಜೆಪಿ ಮೇಲೆ ಟೀಕೆ ಪ್ರಹಾರ ಮಾಡುತ್ತಲೆ ಬಂದಿದ್ದಾರೆ. ಆದರೆ ಸಿಎಂ ಬದಲಾವಣೆ ಸೂಚನೆ ಸೈದ್ದಾಂತಿಕತೆ ತಿಲಾಂಜಲಿ ಇಟ್ಟಂತಾಗಿದೆ.
ಈ ದೇಶದ ಹಿಂದುಳಿದ ವರ್ಗಗಳು, ದಲಿತರು ರಾಜಕೀಯ ಪ್ರವೇಶ ಮಾಡಬೇಕು. ಅಧಿಕಾರವನ್ನು ಅನುಭವಿಸಬೇಕು ಎಂದು ಹೇಳಿರುವ ರಾಹುಲ್ ಗಾಂಧಿ ಮಾತನ್ನು ಕರ್ನಾಟಕದಲ್ಲಿ ಹುಸಿಯಾಗಿದೆ. ಹಾಗೇ ನೋಡಿದರೆ ಕರ್ನಾಟಕವನ್ನು ಒಕ್ಕಲಿಗರು, ಲಿಂಗಾಯತ ಸಮುದಾಯಗಳು ಹೆಚ್ಚು ರಾಜ್ಯಭಾರ ಮಾಡಿದ್ದಾರೆ. ಈಗ ಮತ್ತೇ ಅಂತಹದೊಂದು ಪಥದಲ್ಲಿ ಕಾಂಗ್ರೆಸ್ ಪಕ್ಷ ಸಾಗುತ್ತಿದೆ. ರಾಜಕೀಯ ಭವಿಷ್ಯದಲ್ಲಿ ಕಾಂಗ್ರೆಸ್ ತನ್ನ ಅಧಿಕಾರದ ಕ್ಷೀಣಿಕೆ ಇಲ್ಲಿಂದ ಆರಂಭವಾದರೂ ಅಚ್ಚರಿ ಪಡಬೇಕಿಲ್ಲ.
