Homeಜಿಲ್ಲೆಮಧು ಬಂಗಾರಪ್ಪರನ್ನು ಡಿಸಿಎಂ ಸ್ಥಾನ ನೀಡಿ : ರಾಘವೇಂದ್ರ ನಾಯ್ಕ್ ಆಗ್ರಹ

ಮಧು ಬಂಗಾರಪ್ಪರನ್ನು ಡಿಸಿಎಂ ಸ್ಥಾನ ನೀಡಿ : ರಾಘವೇಂದ್ರ ನಾಯ್ಕ್ ಆಗ್ರಹ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.2

ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಶಾಸಕ ಮಧು ಬಂಗಾರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶಿಕಾರಿಪುರ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮನವಿ ಮಾಡಿದ್ದಾರೆ.

ಮಂಗಳವಾರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದು ನಮಗೆ ಖುಷಿ ತಂದಿದೆ. ಅವರ ಹಾಗೆಯೇ ಶಾಲಾ ಶಿಕ್ಷಣ ಸಚಿವರಾಗಿ ಕಳೆದ ಮೂರು ವರ್ಷ ಮಹತ್ತರ ಸಾಧನೆ ಮಾಡಿ ಇಡೀ ರಾಜ್ಯದ ಗಮನ ಸೆಳೆದ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷವು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ನಮಗೆ ಇನ್ನಷ್ಟು ಖುಷಿ ಕೊಡಲಿದೆ ಎಂದು ಹೇಳಿದರು.

ಗಮನಿಸಿ: ಮೊದಲ ಹಂತದಲ್ಲಿ ಶಿವಮೊಗ್ಗಕ್ಕಿಲ್ಲ ಸಚಿವ ಸ್ಥಾನ?!

ಶಿಕಾರಿಪುರ ಸೇರಿ ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆಯಾದರೂ, ಇಲ್ಲಿ ಕೋಮುವಾದಿ ಶಕ್ತಿಗಳನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ವಿಶೇಷವಾಗಿ ಮಧು ಬಂಗಾರಪ್ಪ ಅವರು ಸಚಿವರಾದ ನಂತರ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರವನ್ನು ಸಮರ್ಥವಾಗಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸ್ಥಾನದಲ್ಲಿ ಯಾರೇ ಇದ್ದರೂ ಇಲ್ಲಿ ಬಿಜೆಪಿಯನ್ನು ಎದುರಿಸುವುದಕ್ಕೆ ಕಷ್ಟವಿತ್ತು. ಆದರೆ ತಮ್ಮ ತಂದೆಯಂತೆಯೇ ತುಂಬಾ ನೇರ ನಿಷ್ಟುರ ನಡೆಯ ಮಧು ಬಂಗಾರಪ್ಪ ಅವರು ತಮ್ಮ ಮಾತಿನ ಜಾಣತನದಿಂದ ಕೋಮುವಾದಿ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆಂದರು.

ಶಿಕಾರಿಪುರ ವಿಧಾನ ಸಭಾ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾದರೂ ಎಸ್. ಬಂಗಾರಪ್ಪ ಅವರ ರಾಜಕೀಯ ಇತಿಹಾಸದಲ್ಲಿ ಶಿಕಾರಿಪುರ ವಿಶೇಷ ಕೊಡುಗೆ ನೀಡಿದೆ. ಅವರು ಸೇರಿದಂತೆ ಅವರ ಕುಟುಂಬವನ್ನು ಶಿಕಾರಿಪುರ ಕ್ಷೇತ್ರ ಎಂದಿಗೂ ಬಿಟ್ಟುಕೊಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಹೆಚ್ಚಿನ ಮತಗಳು ಬಂದಿದ್ದವು. ಆ ನಂಟಿನ ಮೂಲಕವೇ ತಾವು ಸಚಿವರಾದ ಬಳಿಕ ಮಧುಬಂಗಾರಪ್ಪ ಅವರು ಶಿಕಾರಿಪುರಕ್ಕೆ ಹಲವು ಬಾರಿ ಭೇಟಿ ನೀಡುವ ಮೂಲಕ ಪಕ್ಷದ ಕಾರ್ಯಕರ್ತ ರಲ್ಲಿ ಹೊಸ ಚೈತನ್ಯ ನೀಡಿದ್ದನ್ನು ಮರೆಯುವಂತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಮತ್ತು ಕೋಮುವಾದಿ ಶಕ್ತಿಗಳನ್ನು ಎದುರಿಸಲು ಮಧು ಬಂಗಾರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ತಾವು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡುತ್ತಿದ್ದೇವೆ ಎಂದರು.

ವಕೀಲರು ಹಾಗೂ ಕಾಂಗ್ರೆಸ್ ಮುಖಂಡರಾದ ನಿಂಗಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಒಮ್ಮೆಸೊರಬದಲ್ಲಿ ಮಾತನಾಡುವ ವೇಳೆ ಮುಂದೆ ಕ್ಷೇತ್ರದ ಜನರು ಮಧು ಬಂಗಾರಪ್ಪ ಅವರಲ್ಲಿ ಬಂಗಾರಪ್ಪ ಅವರನ್ನು ಕಾಣಬೇಕೆಂದು ಹೇಳಿದ್ದರು. ಆ ರೀತಿಯೇ ನಾವು ಮಧು ಬಂಗಾರಪ್ಪ ಅವರಲ್ಲಿ ಬಂಗಾರಪ್ಪನವರನ್ನು ಕಾಣುತ್ತಿದ್ದೇವೆ.

ತಂದೆಯಂತೆ ಅವರು ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ವಿಶೇಷ ಕಾಳಜಿ ಇಟ್ಟುಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳಾದ ಬಾಷಾ ಸಾಬ್, ಜಗದೀಶ್ ಚುರ್ಚಿ ಗುಂಡಿ, ಮಂಜು ನಾಯ್ಕ, ಚರಣ್, ಸುನೀಲ್ ಬನ್ನೂರು, ಅಬ್ಬಾಸ್ ಸಾಬ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments